‘ಕನ್ನಡದಲ್ಲಿ ಕೃಷಿ ವಿಜ್ಞಾನ ಸಾಹಿತ್ಯ ಇನ್ನಷ್ಟು ವಿಸ್ತಾರವಾಗಲಿ- ಎನ್. ದೇವಕುಮಾರ್

ಮೈಸೂರು,ಫೆಬ್ರವರಿ,28,2026 (www.justkannada.in): ‘ಕನ್ನಡದಲ್ಲಿ ಕೃಷಿ ವಿಜ್ಞಾನ ಸಾಹಿತ್ಯ ಇನ್ನಷ್ಟು ವಿಸ್ತಾರವಾಗಬೇಕು. ರೈತರ ವ್ಯವಸಾಯ ಜ್ಞಾನ ದಾಖಲಾಗಬೇಕು. ಕೃಷಿ ವಿಜ್ಞಾನ ಮಾಹಿತಿ ಹೆಚ್ಚು ಹೆಚ್ಚು ರೈತರಿಗೆ ತಲುಪುವಂತಾಗಲಿ ಎಂದು ಕೃಷಿ ವಿಜ್ಞಾನಿ ಎನ್. ದೇವಕುಮಾರ್ ಆಶಿಸಿದರು.

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್‌ಒಯು) ಆವರಣದಲ್ಲಿ ನಡೆಯುತ್ತಿರುವ ಕಿಸಾನ್ ಸ್ವರಾಜ್ ಸಮ್ಮೇಳನದ ‘ಕೃಷಿ ಮಾಧ್ಯಮ ಕೇಂದ್ರ ಮತ್ತು ಬುಕ್ಸ್‌ ಲೋಕ ಮಳಿಗೆಯಲ್ಲಿ ಬೆಂಗಳೂರಿನ ನದಿ ಪ್ರಕಾಶನ ಪ್ರಕಟಿಸಿರುವ ಡಾ. ಗಣೇಶ ಹೆಗಡೆ ನೀಲೇಸರ ಅವರ ‘ಮರ ಮೇವು’ ಮತ್ತು ಕೇಶವ ಎಚ್‌. ಕೊರ್ಸೆ ಅವರ ‘ನೆಲ ಮುಗಿಲ ಮಾತು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಎನ್. ದೇವಕುಮಾರ್ ಅವರು ಮಾತನಾಡಿದರು.

ಮರ–ಮೇವು ಕೃತಿಯಲ್ಲಿ ಮೇವು ನೀಡುವ ವಿವಿಧ ಮರಗಳ ಕುರಿತ ಮಾಹಿತಿ ಇದೆ. ಈ ಕೃತಿ ಪಶುವೈದ್ಯಕೀಯ ಪದವಿ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಹೆಚ್ಚಾಗಿ ತಲುಪಬೇಕು. ಹೈನುಗಾರಿಕೆ ಕೈಗೊಳ್ಳುತ್ತಿರುವ ರೈತರಿಗೆ ಇದು ತಲುಪುವಂತಾಗಬೇಕು. ಹೈನುಗಾರಿಕೆ ಕುರಿತು ತರಬೇತಿ ನೀಡುವ ಸಂಸ್ಥೆಗಳನ್ನು ಈ ಪುಸ್ತಕವನ್ನು ರೈತರಿಗೆ ತಲುಪಿಸುವ ಪ್ರಯತ್ನ ಮಾಡಬಹುದು ಎಂದು ಸಲಹೆ ನೀಡಿದರು.

ಮರ–ಮೇವು ಕೃತಿಯ ಲೇಖಕ ಡಾ. ಗಣೇಶ ಹೆಗಡೆ ನೀಲೇಸರ ಮಾತನಾಡಿ, ‘ಕೃತಿಯಲ್ಲಿ 59 ಮೇವಿನ ಮರಗಳ ಕುರಿತು ಸಚಿತ್ರ ಮಾಹಿತಿ ಇದೆ. ಮೇವು–ಮರ ಕುರಿತ ವೈಜ್ಞಾನಿಕ ಮಾಹಿತಿಯನ್ನು ಕಥನ ರೂಪದಲ್ಲಿ ನಿರೂಪಿಸಿದ್ದೇನೆ’ ಎಂದು ತಿಳಿಸಿದರು.

ಪತ್ರಕರ್ತ ಗಾಣಧಾಳು ಶ್ರೀಕಂಠ ಕೃತಿಗಳನ್ನು ಪರಿಚಯಿಸಿದರು. ಕೃಷಿ ಬರಹಗಾರ ಮಲ್ಲಿಕಾರ್ಜುನ ಹೊಸಪಾಳ್ಯ ಕಾರ್ಯಕ್ರಮ ನಿರೂಪಿಸಿದರು. ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ಸಂಚಾಲಕ ಜಿ. ಕೃಷ್ಣಪ್ರಸಾದ್, ಸಾವಯವ ಕೃಷಿಕ ಅಂದನೂರು ಎಚ್. ಆಂಜನೇಯ, ಕೃಷಿಕ ಆನಂದತೀರ್ಥ ಪ್ಯಾಟಿ, ಬುಕ್ಸ್‌ಲೋಕದ ಫಣೀಶ್– ಭಾರ್ಗವಿ ಫಣೀಶ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Key words: agricultural science, literature ,Kannada, expand, N. Devakumar, Mysore