Friday, September 11, 2026

BDA Apartments

Home Front Page ಎಎಪಿಯಿಂದ ಹಣ ಸಂಗ್ರಹ ಅಭಿಯಾನ: ಆರು ತಿಂಗಳಿಗೆ 33 ಲಕ್ಷ ರೂ. ಸಂಗ್ರಹಿಸುವ ಗುರಿ- ಮುಖ್ಯಮಂತ್ರಿ...

ಎಎಪಿಯಿಂದ ಹಣ ಸಂಗ್ರಹ ಅಭಿಯಾನ: ಆರು ತಿಂಗಳಿಗೆ 33 ಲಕ್ಷ ರೂ. ಸಂಗ್ರಹಿಸುವ ಗುರಿ- ಮುಖ್ಯಮಂತ್ರಿ ಚಂದ್ರು

ಬೆಂಗಳೂರು,ಏಪ್ರಿಲ್,3,2025 (www.justkannada.in): ಆಮ್ ಆದ್ಮಿ ಪಾರ್ಟಿ ಕರ್ನಾಟಕ ಒಂದು ತಿಂಗಳ ಹಣ ಸಂಗ್ರಹ ಅಭಿಯಾನ ಆರಂಭಿಸುತ್ತಿದೆ.  ಮುಂದಿನ 6 ತಿಂಗಳಲ್ಲಿ ಅಂದಾಜು ವೆಚ್ಚ 33 ಲಕ್ಷ ರೂಪಾಯಿ ಸಂಗ್ರಹಿಸುವ ಗುರಿಯನ್ನು ಹೊಂದಿದ್ದೇವೆ ಎಂದು ರಾಜ್ಯ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಚಂದ್ರು,  ಕರ್ನಾಟಕದಲ್ಲಿ ನಮ್ಮ ವ್ಯಾಪ್ತಿ ಮತ್ತು ಸಂಘಟನೆಯನ್ನು ವಿಸ್ತರಿಸಲು ಮತ್ತು ನಾಗರಿಕರ ಅವಶ್ಯಕತೆಗಳಿಗೆ ಬೆಂಬಲ ನೀಡುವ ಕಾರ್ಯಗಳನ್ನು ನಿರಂತರವಾಗಿ ನಡೆಸಲು ಆಮ್ ಆದ್ಮಿ ಪಾರ್ಟಿ ಏಪ್ರಿಲ್ 2025 ರಿಂದ ಸೆಪ್ಟೆಂಬರ್ 2025ರವರೆಗೆ ಮುಂದಿನ ಆರು ತಿಂಗಳಿಗೆ 33 ಲಕ್ಷ ರೂಪಾಯಿ ಸಂಗ್ರಹಿಸಲು ಒಂದು ತಿಂಗಳ ನಿಧಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ನಮ್ಮದು ಸ್ವಯಂಸೇವಕರ ಕೆಲಸ ಮತ್ತು ಬೆಂಬಲದಿಂದ ನಿರ್ಮಿತವಾದ ಪಕ್ಷ. ಅದ್ದರಿಂದ, ಪಕ್ಷವನ್ನು ನಿರ್ವಹಿಸಲು ನಮಗೆ ಬಹಳ ದೊಡ್ಡ ಮೊತ್ತದ ಹಣದ ಅಗತ್ಯವಿಲ್ಲ. ಆದರೆ, ಪಕ್ಷದ ಮೂಲಭೂತ ಚಟುವಟಿಕೆಗಳು, ಸಂಘಟನೆಯ ಕೆಲಸ ಮತ್ತು ಪ್ರಚಾರಗಳಿಗೆ ಕೆಲವು ನಿಧಿಗಳ  ಅತ್ಯಂತ ಅಗತ್ಯವಿದೆ.

ದೊಡ್ಡದಾನಿಗಳ ಮೇಲೆ ಅವಲಂಬಿತವಾಗುವ ಬದಲು, ಅವರ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ದೇಣಿಗೆ ನೀಡುವ ಬೃಹತ್ ದಾನಿಗಳ ಬದಲು, ನಾವು ದೇಶದ ಕಲ್ಯಾಣಕ್ಕಾಗಿ ನಮ್ಮ ಪಕ್ಷವನ್ನು ಬೆಂಬಲಿಸಲು ಇಚ್ಛಿಸುವ ದೊಡ್ಡ ಸಂಖ್ಯೆಯ ಸಾಮಾನ್ಯ ಜನರಿಂದ ಅಗತ್ಯವಾದ ಹಣವನ್ನು ಸಂಗ್ರಹಿಸುತ್ತೇವೆ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.

ಮುಂದಿನ ಆರು ತಿಂಗಳಲ್ಲಿ, ನಾವು ಬೆಂಗಳೂರು ಮತ್ತು ಎಲ್ಲಾ ಜಿಲ್ಲೆಗಳಲ್ಲಿ ನಮ್ಮ  ಪ್ರಭಾವವನ್ನು ಮತ್ತಷ್ಟು ವಿಸ್ತರಿಸುವುದು ಮಾತ್ರವಲ್ಲ, ಪಕ್ಷವು ಇನ್ನೂ ಬಲವಾಗಿ ನೆಲೆ  ಕಂಡುಕೊಳ್ಳದೇ ಇರುವ ಪ್ರದೇಶಗಳಲ್ಲಿಯೂ ನಮ್ಮ ಪ್ರಭಾವವನ್ನು ವಿಸ್ತರಿಸುತ್ತೇವೆ. ನಮ್ಮ ರಾಜ್ಯ ಮತ್ತು ನಾಗರಿಕರಿಗೆ ಪ್ರಭಾವ ಬೀರುವ ಅನೇಕ ಸಮಸ್ಯೆಗಳ ಬಗ್ಗೆ ಆಂದೋಲನ ನಡೆಸುತ್ತೇವೆ ಮತ್ತು ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ನಮ್ಮ ಧ್ವನಿಯನ್ನು ಎತ್ತುತ್ತೇವೆ. ಅತ್ಯಂತ ಮುಖ್ಯವಾಗಿ, ನಾವು ರಾಜ್ಯದಾದ್ಯಂತ ಜಿಲ್ಲೆ, ಮಹಾನಗರಪಾಲಿಕೆ, ಸ್ಥಳೀಯ ವಾರ್ಡ್ ಮತ್ತು ಪಂಚಾಯತ್ ಮಟ್ಟದಲ್ಲಿ ನಮ್ಮ ಸಂಘಟನೆಯನ್ನು ಬಲಪಡಿಸುವತ್ತ ಗಮನಹರಿಸುತ್ತೇವೆ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ನಾವು ಎಲ್ಲಾ ದೇಣಿಗೆಗಳನ್ನು  ಚೆಕ್ ಮುಖಾಂತರ ಅಥವಾ https://donations.aamaadmiparty.org/?state=KA  ಈ ಲಿಂಕ್ ಮೂಲಕ ಆಮ್ ಆದ್ಮಿ ಪಾರ್ಟಿ ದೇಣಿಗೆ ಸ್ವೀಕರಿಸುತ್ತದೆ. ದಾನಿಗಳು 100% ತೆರಿಗೆ ವಿನಾಯಿತಿಯ (80GG) ಪ್ರಮಾಣಪತ್ರವನ್ನು ಪಡೆಯುತ್ತಾರೆ, ಇದರಿಂದಾಗಿ ಅವರ ದೇಣಿಗೆ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.

Key words: AAP, fundraising, campaign, Mukyamantri Chandru