Sunday, August 23, 2026

BDA Apartments

Home Front Page ಸುರಕ್ಷಿತವಾಗಿ ಮರಳಿದ ಪ್ರವಾಸಿಗರ ಕಣ್ಣಲ್ಲಿ ಕೃತಜ್ಞತೆಯ ಭಾವ…!

ಸುರಕ್ಷಿತವಾಗಿ ಮರಳಿದ ಪ್ರವಾಸಿಗರ ಕಣ್ಣಲ್ಲಿ ಕೃತಜ್ಞತೆಯ ಭಾವ…!

ಬೆಂಗಳೂರು;ಜೂ.22,2022(www.justkannada.in): ಉತ್ತರ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೆ ತೆರಳಿದ್ದ ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳ 150ಕ್ಕೂ ಅಧಿಕ ಪ್ರವಾಸಿಗರ ಕಣ್ಣಲ್ಲಿ ಇಂದು ಕೃತಜ್ಞತಾ ಭಾವ ಕಂಡು ಬಂತು.

ಹೌದು! ಉತ್ತರ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ಕಾಶಿ, ವಾರಾಣಾಸಿ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳಿದ್ದ ವೇಳೆ ಆ ಭಾಗದಲ್ಲಿ ಅಗ್ನಿಪಥ್ ವಿರೋಧಿಸಿ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದಿದ್ದವು. ಇದರಿಂದ ಆತಂಕಕ್ಕೆ ಈಡಾಗಿದ್ದ ಪ್ರವಾಸಿಗರನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ಉತ್ತರ ಭಾರತದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಎಲ್ಲ 164 ಪ್ರವಾಸಿಗರು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಾಸು ಬರಲು ಶ್ರಮಿಸಿದ್ದರು.

ವಯೋವೃದ್ಧರು ಸೇರಿದಂತೆ ಸುರಕ್ಷಿತವಾಗಿ ಬುಧವಾರ ಬೆಂಗಳೂರಿಗೆ ಆಗಮಿಸಿದ 164ಕ್ಕೂ ಅಧಿಕ ಪ್ರವಾಸಿಗರು ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗಪುರದಲ್ಲಿರುವ ಶಾಸಕರೂ ಆದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರ ಕಚೇರಿಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಗಮಿಸಿದರು.

ಈ ವೇಳೆ ಸಚಿವ ಗೋಪಾಲಯ್ಯ ಅವರು ಎಲ್ಲ ಪ್ರಯಾಣಿಕರನ್ನು ಬರಮಾಡಿಕೊಂಡು ಅವರ ಆರೋಗ್ಯ ವಿಚಾರಿಸಿ, ಉಪಹಾರದ ವ್ಯವಸ್ಥೆ ಕಲ್ಪಿಸಿಕೊಟ್ಟರು. ನಂತರ ಎಲ್ಲರಿಗೂ ಅವರ ಜಿಲ್ಲೆಗಳಿಗೆ ತೆರಳಲು ಬಸ್‌ ಗಳ ವ್ಯವಸ್ಥೆ ಕಲ್ಪಿಸಿದರು.

ಊರಿಗೆ ಹೊರಟು ನಿಂತ ಪ್ರವಾಸಿಗರು ಸಚಿವ ಕೆ.ಗೋಪಾಲಯ್ಯ ಅವರಿಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸಿ ತಮ್ಮ ಈ ಉಪಕಾರವನ್ನು ಎಂದೂ ಮರೆಯುವುದಿಲ್ಲ  ಎಂದು ಸ್ಮರಿಸಿದರು.

Key words: famous -shrines -North India- Travelers-minister-K.Gopalaiah