ಕಾಂಗ್ರೆಸ್ ಶಾಸಕರ ಪ್ರಚೋದನಾತ್ಮಕ ಹೇಳಿಕೆಗಳಿಂದ ಹಿಜಾಬ್ ವಿವಾದ ಸೃಷ್ಟಿ- ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿ.

ಬೆಂಗಳೂರು,ಮಾರ್ಚ್,25,2022(www.justkannada.in): ಕಾಂಗ್ರೆಸ್ ಶಾಸಕರ ಪ್ರಚೋದನಾತ್ಮಕ ಹೇಳಿಕೆಗಳಿಂದ ಹಿಜಾಬ್ ವಿವಾದ ಸೃಷ್ಟಿಯಾಗಿದೆ. ಹಿಜಬ್ ವಿವಾದ ಹುಟ್ಟಿದ್ದು ಬಿಜೆಪಿಯಿಂದಲ್ಲ ಕಾಂಗ್ರೆಸ್‍ನಿಂದ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದರು.

ಈ ಕುರಿತು ಇಂದು ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ,  ಮುಸ್ಲಿಂ ವಿದ್ಯಾರ್ಥಿನಿಯರನ್ನು ಹಿಜಬ್ ವಿವಾದದಲ್ಲಿ ಕಾಂಗ್ರೆಸ್ ಶಾಸಕರು ಬಲಿಪಶು ಮಾಡಿದ್ದಾರೆ.ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಹತಾಶೆಯಿಂದ ಈ ರೀತಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಹಿಜಾಬ್ ವಿವಾದವನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್‍ನವರು ಎಂದು ಹರಿಹಾಯ್ದರು.

ಮಹಿಳೆಯರು, ಸ್ವಾಮೀಜಿಗಳು ತಲೆಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ. ಇದು ನಮ್ಮ ದೇಶದ ಸಂಸ್ಕೃತಿ, ಪರಂಪರೆಯ ಪ್ರತೀಕ. ಕಾಂಗ್ರೆಸ್‍ನ ವೋಟ್ ಬ್ಯಾಂಕ್ ರಾಜಕಾರಣದಿಂದಾಗಿ ಸಮಾಜದಲ್ಲಿ ಸಹಭಾಳ್ವೆ ಇಲ್ಲದಂತಾಗುತ್ತಿದೆ. ಶಿಕ್ಷಣದಲ್ಲಿ ಧರ್ಮವನ್ನು ಎಳೆದು ತರಬೇಡಿ. ನಮ್ಮ ಮಠಾಧೀಶರನ್ನು, ಮಹಿಳೆಯರನ್ನು ಹಿಜಬ್ ವಿವಾದಕ್ಕೆ ಎಳೆದು ತರಬೇಡಿ ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

Key words: hijab controversy-statements -Congress -MP Renukacharya