Thursday, August 13, 2026

BDA Apartments

Home Front Page ಭೂ ಸ್ವಾಧೀನ ವಿರೋಧಿಸಿ  ಭುಗಿಲೆದ್ಧ ಅನ್ನದಾತರ ಆಕ್ರೋಶ: ಮಹಿಳೆಯರು, ರೈತರನ್ನ ಎಳೆದಾಡಿ ವಶಕ್ಕೆ ಪಡೆದ ಪೊಲೀಸರು....

ಭೂ ಸ್ವಾಧೀನ ವಿರೋಧಿಸಿ  ಭುಗಿಲೆದ್ಧ ಅನ್ನದಾತರ ಆಕ್ರೋಶ: ಮಹಿಳೆಯರು, ರೈತರನ್ನ ಎಳೆದಾಡಿ ವಶಕ್ಕೆ ಪಡೆದ ಪೊಲೀಸರು.  

ಬೆಳಗಾವಿ,ನವೆಂಬರ್,11,2021(www.justkannada.in):  ಭೂಸ್ವಾಧೀನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತ ಮಹಿಳೆಯರು ಮತ್ತು ರೈತರನ್ನ ಪೊಲೀಸರು ಎಳೆದಾಡಿ ವಶಕ್ಕೆ  ಪಡೆದ ಘಟನೆ ಬೆಳಗಾವಿ ತಾಲ್ಲೂಕಿನ ಮಚ್ಚೆ ಗ್ರಾಮದಲ್ಲಿ ನಡೆದಿದೆ.

ಮಚ್ಚೆ-ಹಲಗಾ ಬೈಪಾಸ್ ರಸ್ತೆ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿ ಮಚ್ಚೆ ಗ್ರಾಮದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಜಮೀನು ಮಾಲೀಕನೋರ್ವ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಮಚ್ಚೆ-ಹಲಗಾ ಬೈಪಾಸ್ ರಸ್ತೆ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಜೀವ ಬಿಟ್ಟೇವು, ಜಮೀನು ಬಿಟ್ಟುಕೊಡುವುದಿಲ್ಲ ಎಂದು ರೈತರು, ರೈತ ಮಹಿಳೆಯರು ಪಟ್ಟು ಹಿಡಿದಿದ್ದಾರೆ.

ಇದೇ ವೇಳೆ ರೈತರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ ಎನ್ನಲಾಗಿದೆ. ಮಹಿಳಾ ಪೊಲೀಸರು ರೈತ ಮಹಿಳೆಯರನ್ನು ಎಳೆದಾಡಿ ವಶಕ್ಕೆ ಪಡೆದಿದ್ದಾರೆ. ಮಚ್ಚೆ-ಹಲಗಾ ಬೈಪಾಸ್ ರಸ್ತೆ ಕಾಮಗಾರಿಕೆಗೆ ರೈತರು ವಿರೋಧ ವ್ಯಕ್ತಪಡಿಸಿದ್ದರು. ಸರ್ವೆ ಆದ ಜಮೀನು ಬಿಟ್ಟು ಬೇರೆ ಜಮೀನು ತೆಗೆದುಕೊಂಡಿದ್ದಕ್ಕೆ ವಿರೋಧಿಸಿದ್ದರು. ಫಲವತ್ತಾದ ಜಮೀನು ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಹೀಗಾಗಿ ಏಕಾಏಕಿ ನೂರಾರು ಪೊಲೀಸರನ್ನು ಕರೆತಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಮಗಾರಿ ನಡೆಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಜೀವ ಕೊಟ್ಟೇವು ಜಮೀನು ಬಿಡುವುದಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. ಕೈಯಲ್ಲಿ ಕುಡುಗೋಲು ಹಿಡಿದು ರೈತರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪೊಲೀಸರ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದು, ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಯಾವುದೇ ಕಾರಣಕ್ಕೂ ನಾವು ಭೂಮಿಯನ್ನು ಬಿಟ್ಟುಕೊಡಲ್ಲ. ಕೋರ್ಟ್​ ಆದೇಶ ಉಲ್ಲಂಘಿಸಿ ಕಾಮಗಾರಿ ಆರಂಭಿಸಿದ್ದಾರೆ. ಪೊಲೀಸ್ ಫೋರ್ಸ್​ ನೆರವಿನಲ್ಲಿ ಕಾಮಗಾರಿ ಮಾಡುತ್ತಿದ್ದಾರೆ. ಸರ್ಕಾರದ ಮೊದಲ ಆದೇಶದಲ್ಲಿ ನಮ್ಮ ಜಮೀನು ಸೇರಿಲ್ಲ. ಆದರೆ ಏಕಾಏಕಿ ನಮ್ಮ ಜಮೀನಿನಲ್ಲಿ ಕಾಮಗಾರಿಗೆ ಪ್ರಯತ್ನ ಮಾಡಲಾಗುತ್ತಿದೆ ಎಂದ ಜಮೀನು ಕಳೆದುಕೊಳ್ಳುತ್ತಿರುವ ಯುವಕ ಅಮಿತ್​ ಆಕ್ರೋಶ ಹೊರ ಹಾಕಿದ್ದಾನೆ.

Key words: Outrage- against- land acquisition- Women-police-belgavi