ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಮಹಾಮಳೆಗೆ ನಲುಗಿದ ಚೆನ್ನೈ

ಚೆನ್ನೈ, ನವೆಂಬರ್ 07, 2021 (www.justkannada.in): ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಭಾರತದ ಅನೇಕ ಭಾಗಗಳಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗುತ್ತಿದೆ.

ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಶನಿವಾರ ರಾತ್ರಿಯಿಡೀ ಸುರಿದ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇದು 2015ರ ಬಳಿಕ ಚೆನ್ನೈ ಕಂಡ ಮಹಾ ಮಳೆ ಎಂದು ಖಾಸಗಿ ಹವಾಮಾನ ಸಂಸ್ಥೆಗಳು ಹೇಳಿವೆ.

ಚೆನ್ನೈನ ಅನೇಕ ಭಾಗಗಳಲ್ಲಿ ರಸ್ತೆಗಳು ಜಲಾವೃತವಾಗಿವೆ. ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಮುಂದಿನ ಕೆಲವು ದಿನಗಳವರೆಗೂ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೂಚನೆ ನೀಡಿದೆ.

ಚೆನ್ನೈ, ಕೊರತೂರ್, ಪೆರಂಬೂರ್, ಅಣ್ಣಾ ಸಲೈ, ಟಿ ನಗರ, ಗ್ಯುಂಡಿ, ಅಡ್ಯಾರ್, ಪೆರುಂಗುಡಿ, ಒಎಂಆರ್ಗಳಲ್ಲಿ ಎಲ್ಲೆಡೆ ಮಳೆ ನೀರು ಹರಿದ ಪರಿಣಾಮ ಜನಸಾಮಾನ್ಯರು ಪರದಾಡುವಂತಾಗಿದೆ.