Sunday, August 23, 2026

BDA Apartments

Home Cinema ಗಾಜನೂರಲ್ಲಿ ನೀರವ ಮೌನ.: ‘ಮುತ್ತಣ್ಣನ’ ಮಗನನ್ನು ಕಾಣಲು ತೆರಳಿದ  ತವರಿನ ಜನರು..!

ಗಾಜನೂರಲ್ಲಿ ನೀರವ ಮೌನ.: ‘ಮುತ್ತಣ್ಣನ’ ಮಗನನ್ನು ಕಾಣಲು ತೆರಳಿದ  ತವರಿನ ಜನರು..!

ಚಾಮರಾಜನಗರ,ಅಕ್ಟೋಬರ್,29,2021(www.justkannada.in):  ವರನಟ ಡಾ. ರಾಜ್ ಕುಮಾರ್ ಅವರ ತವರೂರಾದ ಈಗಿನ ತಮಿಳುನಾಡಿನ ತಾಳವಾಡಿ ಸಮೀಪದ ದೊಡ್ಡಗಾಜನೂರಿನಲ್ಲಿ ಪುನೀತ್ ನಿಧನಕ್ಕೆ ಜನರು ಕಂಬನಿ ಮಿಡಿಯುತ್ತಿದ್ದು ಊರಲ್ಲಿ ನೀರವ ಮೌನ ಆವರಿಸಿದೆ.

ಪವರ್ ಸ್ಟಾರ್ ಪುನೀತ್ ರಾಜ್‍ ಕುಮಾರ್ ಅವರ ಆರೋಗ್ಯ ಸ್ಥಿತಿ ಗಂಭೀರ ಎಂದು ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ ಹುಟ್ಟೂರಿನ ನೂರಾರು ಅಭಿಮಾನಿಗಳು ಬೆಂಗಳೂರಿಗೆ ತೆರಳಿದ್ದಾರೆ‌‌. ಇನ್ನು, ದೊಡ್ಡ ಗಾಜನೂರಿನಲ್ಲಿ ವಾಸವಿರುವ ಅಣ್ಣಾವ್ರ ಸಹೋದರಿ ಮತ್ತು ಮಕ್ಕಳು ಮಧ್ಯಾಹ್ನ 12.30ಕ್ಕೆ ಬೆಂಗಳೂರಿಗೆ ತೆರಳಿದ್ದು, ತಾಳವಾಡಿ ಪೊಲೀಸರು ಮನೆಗೆ ಬಿಗಿ ಭದ್ರತೆ ಒದಗಿಸಿದ್ದಾರೆ.

ಇಡೀ ಕನ್ನಡ ಚಿತ್ರರಂಗಕ್ಕೆ ಡಾ.ರಾಜ್ ಕುಮಾರ್ ಅವರು ಅಣ್ಣಾವ್ರನ್ನು ಎಂದು ಕರೆದರೇ ದೊಡ್ಡ ಗಾಜನೂರಿನ ಜನರು ಮಾತ್ರ ಇಂದಿಗೂ ಮುತ್ತಣ್ಣ ಎಂದೇ ಕರೆಯುವುದು ರೂಢಿ. ಶಿವಣ್ಣ, ರಾಘಣ್ಣ ಮತ್ತು ಅಪ್ಪುವನ್ನು ಮುತ್ತಣ್ಣನ ಮಕ್ಕಳು ಎನ್ನುವ ಜನರು ರಾಜ್ ಗೆ ತೋರುತ್ತಿದ್ದ ಗೌರವ, ಆದರವನ್ನೇ ಮಕ್ಕಳಿಗೂ ತೋರುತ್ತಿದ್ದ ಜನರು ಪುನೀತ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ‌.

ಸದ್ಯ, ತವರಿನ ಅಭಿಮಾನಿಗಳು ಮತ್ತು ಸೋದರ ಸಂಬಂಧಿಗಳು ಬೆಂಗಳೂರಿಗೆ ತೆರಳಿದ್ದು ಚಾಮರಾಜನಗರದಲ್ಲಿಯೂ ಅವರ ಅಪಾರ ಅಭಿಮಾನಿಗಳು ತೀವ್ರ ಆಘಾತಕ್ಕೊಳಗಾಗಿದ್ದಾರೆ.

Key words: actor-Punith raj kumar-death- Hometown -people – Muttanna’s- son.