Tuesday, August 25, 2026

BDA Apartments

Home Front Page ಬೆಂಗಳೂರಿನಲ್ಲಿ ಒತ್ತುವರಿಯಾಗಿದ್ದ ೧,೫೦೦ ಕೆರೆಗಳ ಪೈಕಿ ೧,೧೦೦ ಕೆರೆಗಳ ಸ್ಥಳ ತೆರವು .

ಬೆಂಗಳೂರಿನಲ್ಲಿ ಒತ್ತುವರಿಯಾಗಿದ್ದ ೧,೫೦೦ ಕೆರೆಗಳ ಪೈಕಿ ೧,೧೦೦ ಕೆರೆಗಳ ಸ್ಥಳ ತೆರವು .

 

ಬೆಂಗಳೂರು, ಸೆಪ್ಟೆಂಬರ್ ೨೭, ೨೦೨೧ (www.justkannada.in): ಕರ್ನಾಟಕದ ಮಾನ್ಯ ಉಚ್ಛ ನ್ಯಾಯಾಲಯದ ಆದೇಶದ ಪ್ರಕಾರ ರಾಜಧಾನಿ ಬೆಂಗಳೂರಿನಲ್ಲಿ ಒತ್ತುವರಿಯಾಗಿದ್ದಂತಹ ಕೆರೆಗಳನ್ನು ತೆರವುಗೊಳಿಸುವ ಪ್ರಯತ್ನದ ಭಾಗವಾಗಿ ಕರ್ನಾಟಕ ಸರ್ಕಾರದ ಪ್ರಕಾರ ಈವರೆಗೆ ಬೆಂಗಳೂರು ನಗರ ಜಿಲ್ಲೆಯಲ್ಲಿ ೨೩೬ ಎಕರೆ ಪ್ರದೇಶ ವ್ಯಾಪ್ತಿಯುಳ್ಳ ೧೧೪ ಕೆರೆಗಳನ್ನು ತೆರವುಗೊಳಿಸಲಾಗಿದೆ.

ವಿಧಾನ ಪರಿಷತ್‌ನಲ್ಲಿ ಕಳೆದ ವಾರ ಕಂದಾಯ ಸಚಿವ ಆರ್. ಅಶೋಕ್ ಅವರು ಪ್ರಶ್ನೆಯೊಂದಿಗೆ ನೀಡಿದ ಉತ್ತರದ ಪ್ರಕಾರ ಬೆಂಗಳೂರು ನಗರ ಜಿಲ್ಲೆ ಹಾಗೂ ಗ್ರಾಮೀಣ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಒಟ್ಟು ೧,೫೦೦ ಕೆರೆಗಳ ಪೈಕಿ ೧,೧೦೦ ಕೆರೆಗಳು ಒತ್ತುವರಿಗೆ ಒಳಗಾಗಿದ್ದವು. ಈ ಪೈಕಿ ಸರ್ಕಾರವು ೧೧೦೦ ಕೆರೆಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದಂತಹ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.

ಒತ್ತುವರಿ ತೆರವುಗೊಳಿಸಲಾಗಿರುವ ಕೆರೆಗಳ ಸುತ್ತಲೂ ಬೇಲಿ ನಿರ್ಮಾಣ ಹಾಗೂ ಬೌಂಡರಿ ಗುರುತಿಸುವ ಕಾಮಗಾರಿಗಳು ಜಾರಿಯಲ್ಲಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ೧೧೪ ಕೆರೆಗಳ ೨೩೬ ಎಕರೆ ಪ್ರದೇಶವನ್ನು ತೆರವುಗೊಳಿಸಲಾಗಿದೆ. ರಾಜ್ಯ ಉಚ್ಛ ನ್ಯಾಯಾಲಯವು ಕೆರೆಗಳ ೩೦ ಮೀ.ಗಳ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಟ್ಟಡ ನಿರ್ಮಾಣಗಳು ಇಲ್ಲದಿರುವಂತೆ ಖಾತ್ರಿಪಡಿಸಿ ಕೆರೆಗಳನ್ನು ರಕ್ಷಿಸುವಂತೇ ಆದೇಶಿಸಿತ್ತು.

ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರು ಈ ವಿಚಾರವಾಗಿ ಮಾತನಾಡುತ್ತಾ, “ಒತ್ತುವರಿಯಾಗಿದ್ದಂತಹ ಕೆರೆಗಳ ಸ್ಥಳವನ್ನು ತೆರವುಗೊಳಿಸಿದ ನಂತರ ಅಳತೆ ಮಾಡುವ ಕೆಲಸಗಳನ್ನು ಕೈಗೊಳ್ಳುತ್ತಿದ್ದೇವೆ. ಸೆಪ್ಟೆಂಬರ್ ೧೮ರಂದು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು ರೂ.೩೦.೭೩ ಕೋಟಿ ಮೌಲ್ಯದ ೧೮ ಎಕರೆ ಕೆರೆ ಪ್ರದೇಶವನ್ನು ತೆರವುಗೊಳಿಸಿದ್ದೇವೆ. ಇದೊಂದು ಮುಂದುವರೆಯುವ ಉಪಕ್ರಮವಾಗಿದೆ. ನಾವು ಕರ್ನಾಟಕದ ಮಾನ್ಯ ಉಚ್ಛ ನ್ಯಾಯಾಲಯದ ಆದೇಶಗಳಂತೆ ಕಾರ್ಯನಿರ್ವಹಿಸುತ್ತಿದ್ದೇವೆ,” ಎಂದರು.
ಆಗಸ್ಟ್ ತಿಂಗಳಲ್ಲಿ ಸರ್ಕಾರದ ಜಂಟಿ ಕಾರ್ಯದರ್ಶಿ ಕೆ.ಎ. ಹಿದಾಯತ್ ಉಲ್ಲಾ ಅವರು, ಕೆರೆ ಹಾಗೂ ನದಿಗಳ ಸುತ್ತಲಿನ ೩೦ ಮೀ. ವ್ಯಾಪ್ತಿಯಲ್ಲಿರುವ ಎಲ್ಲಾ ಒತ್ತುವರಿಗಳನ್ನೂ ತೆರವುಗೊಳಿಸುವಂತೆ ಬಿಬಿಎಂಪಿಗೆ ಸೂಚಿಸಿದ್ದರು.

ಚಿತ್ರ ಕೃಪೆ : ಇಂಟರ್ ನೆಟ್

ಬಿಬಿಎಂಪಿಯ ಕೆರೆಗಳ ವಿಭಾಗದ ಅಧಿಕಾರಿಗಳು ತಿಳಿಸಿದಂತೆ, ಕೆರೆ ಹಾಗೂ ನದಿಗಳ ಸಮೀಕ್ಷೆ ಕಾಮಗಾರಿ ಜಾರಿಯಲ್ಲಿರುವ ಕಾರಣದಿಂದಾಗಿ ಒತ್ತುವರಿಗಳನ್ನು ತೆರವುಗೊಳಿಸುವಲ್ಲಿ ವಿಳಂಬವಾಗಿದೆ.

“ಒಮ್ಮೆ ಸಮೀಕ್ಷೆ ಕಾರ್ಯ ಪೂರ್ಣಗೊಂಡ ನಂತರ ನಾವು ಪ್ರತಿ ಕೆರೆಗೂ ತೆರಳಿ ಒತ್ತುವರಿಗಳನ್ನು ತೆರವುಗೊಳಿಸುತ್ತೇವೆ. ಈಗಾಗಲೇ ಸಮೀಕ್ಷೆ ಪೂರ್ಣಗೊಂಡಿರುವ ಜಾಗಗಳಲ್ಲಿ ಒತ್ತುವರಿಗಳನ್ನು ತೆರವುಗೊಳಿಸುವ ಕೆಲಸ ಪೂರ್ಣಗೊಂಡಿದೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿ ಮೂಲ: ಇಂಡಿಯನ್ ಎಕ್ಸ್ಪ್ರೆಸ್

key words : Bangalore- Encroachments in 1,100 of 1,500 Bengaluru lakes cleared- says Karnataka government