ಯಾರಿಗೆ ಟಿಕೆಟ್ ಕೊಟ್ರೂ ಕೆಲಸ ಮಾಡುವೆ- ಚುನಾವಣಾ ಕಣದಿಂದ ಹಿಂದೆ ಸರಿದ ಆರ್.ಶಂಕರ್…

ಬೆಂಗಳೂರು,ನ,15,2019(www.justkannada.in):  ಎಂಎಲ್ ಸಿ ಮಾಡಿ ಮಂತ್ರಿಗಿರಿ ಕೊಡುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಭರವಸೆ ನೀಡಿದ ಹಿನ್ನೆಲೆ ಚುನಾವಣಾ ಕಣದಿಂದ ಆರ್.ಶಂಕರ್ ಹಿಂದೆ ಸರಿದಿದ್ದಾರೆ.

ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅನರ್ಹ ಶಾಸಕ ಆರ್. ಶಂಕರ್, ನನ್ನನ್ನ ಎಂಎಲ್ ಸಿ ಮಾಡಿ ಮಂತ್ರಗಿರಿ ಕೊಡುವುದಾಗಿ ಸಿಎಂ ಬಿಎಸ್ ವೈ ಭರವಸೆ ನೀಡಿದ್ದಾರೆ. ಅವರು ನೀಡಿರುವ ಭರವಸೆಗೆ ಒಪ್ಪಿದ್ದೇನೆ. ಹೀಗಾಗಿ ರಾಣಿಬೆನ್ನೂರು ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇನೆ ಎಂದು ತಿಳಿಸಿದಿದ್ದಾರೆ.

ಹಾಗೆಯೇ ಟಿಕೆಟ್ ಕೊಡದಿದ್ದರೆ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೆ.ಆದರೆ ಎಂಎಲ್ ಸಿ ಮಾಡಿ ಸಚಿವ ಸ್ಥಾನ ನೀಡುತ್ತೇವೆ ಎಂದಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿಯೇ ಇರುವುದಾಗಿ ತಿಳಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಣಿ ಬೆನ್ನೂರು ಕ್ಷೇತ್ರದಿಂದ ಪಕ್ಷೇತರ ಅಬ್ಯರ್ಥಿಯಾಗಿ ನಿಂತು ಗೆಲುವು ಸಾಧಿಸಿದ್ದ ಆರ್. ಶಂಕರ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರು. ನಂತರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇದೀಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಆರ್. ಶಂಕರ್ ಸೇರಿ ರಾಜೀನಾಮೆ ನೀಡಿದ್ದ 17 ಮಂದಿಯನ್ನೂ ಹಿಂದಿನ  ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು.

Key words: R. Shankar- by-election-meet- cm-BS Yeddyurappa