ಮೈಸೂರು,ಸೆಪ್ಟಂಬರ್,18,2026 (www.justkannada.in): ನಗರದ ಆಲನಹಳ್ಳಿಯ ಬೆಸ್ಟ್ ಫ್ಯೂಚರ್ ಫೌಂಡೇಷನ್ ರಿಯಾಬ್ ಸೆಂಟರ್ನಲ್ಲಿ 28 ವರ್ಷದ ಯುವಕನಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಗಾಯತ್ರಿಪುರಂ ನಾಲ್ಕನೇ ಕ್ರಾಸ್ ನಿವಾಸಿ ಮನೋಜ್ ರಾವ್ (28) ಮೃತ ಯುವಕ. ಆಗಸ್ಟ್ 13ರಂದು ಮನೋಜ್ ರಾವ್ ಹಾಗೂ ಅವರ ತಂದೆ ರಾಜೇಂದ್ರ ರಾವ್ ಇಬ್ಬರನ್ನೂ ರಿಯಾಬ್ ಸೆಂಟರ್ಗೆ ದಾಖಲಿಸಲಾಗಿತ್ತು ಎನ್ನಲಾಗಿದೆ.
ಆದರೆ ಸೆಂಟರ್ ನ ಸಿಸಿಟಿವಿ ದೃಶ್ಯಗಳು ಎನ್ನಲಾದ ವಿಡಿಯೋ ಇದೀಗ ಪ್ರಕರಣದ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿವೆ. ಮನೋಜ್ ನ ಕೈ-ಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ, ಕತ್ತನ್ನು ಬಟ್ಟೆಯಿಂದ ಬಿಗಿದು ಹಿಡಿದಿರುವ ಹಾಗೂ ಚಿತ್ರಹಿಂಸೆ ನೀಡುತ್ತಿರುವ ದೃಶ್ಯಗಳು ಸೆರೆಯಾಗಿವೆ ಎಂಬ ಆರೋಪ ಕೇಳಿಬಂದಿದೆ.
ತಂದೆ ರಾಜೇಂದ್ರ ರಾವ್ ಎದುರೇ ಮಗ ಮನೋಜ್ ಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಆರೋಪಿಸಲಾಗಿದ್ದು, ನಂತರ ಮನೋಜ್ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಆದರೆ ಮನೋಜ್ ಲೋ ಬಿಪಿಯಿಂದ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿತ್ತು ಎನ್ನಲಾಗಿದೆ. ಈ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ರಿಯಾಬ್ ಸೆಂಟರ್ ಮಾಲೀಕ ಲೋಕೇಶ್ ಯತ್ನಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ನಿವಾಸಿಗಳು ಸೆಂಟರ್ ಗೆ ತೆರಳಿ ವಿಚಾರಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಯುವಕನ ಸಾವಿನ ಹಿಂದಿನ ಸತ್ಯವೇನು? ರಿಯಾಬ್ ಸೆಂಟರ್ ನಲ್ಲಿ ನಿಜಕ್ಕೂ ಏನಾಯಿತು? ಎಂಬ ಪ್ರಶ್ನೆಗಳು ಇದೀಗ ತೀವ್ರಗೊಂಡಿವೆ.
ಮನೋಜ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆ ನಡೆಸಿ, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.
Key words: Allegation, murder, young man, RIAB Center, Mysuru.







