ಮೈಸೂರು, ಸೆಪ್ಟಂಬರ್,10, 2026 (www.justkannada.in): ಮೈಸೂರಿನಲ್ಲಿ ವೃದ್ಧೆಯೊಬ್ಬರ ಚಿನ್ನದ ಸರ ಕಸಿಯಲು ಕಿಡಿಗೇಡಿಗಳು ನಡೆಸಿದ ವಿಫಲ ಯತ್ನ ನಡೆದಿದೆ. ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಥುರಾ ನಗರ ಬಡಾವಣೆಯಲ್ಲಿ ಘಟನೆ ನಡೆದಿದೆ.
ಮಥುರಾ ನಗರದ ನಿವಾಸಿ ಕಮಲಾಕ್ಷಮ್ಮ (85) ಅವರು ಹಾಲು ತರಲು ಮನೆಯಿಂದ ಹೊರಬಂದಿದ್ದ ವೇಳೆ ಆಟೋದಲ್ಲಿ ಬಂದ ದುಷ್ಕರ್ಮಿಗಳು ಚಿನ್ನದ ಸರ ಕಸಿಯಲು ಯತ್ನಿಸಿದ್ದಾರೆ.
ಕಳ್ಳರು ಸರ ಎಳೆಯುತ್ತಿದ್ದಂತೆ ಕಮಲಾಕ್ಷಮ್ಮ ತೀವ್ರವಾಗಿ ಪ್ರತಿರೋಧಿಸಿ, ಎರಡೂ ಕೈಗಳಿಂದ ಸರವನ್ನು ಬಿಗಿಯಾಗಿ ಹಿಡಿದು ಕೂಗಾಡಿದ್ದಾರೆ. ಅವರ ಅರಚಾಟ ಕೇಳಿ ಸ್ಥಳೀಯರು ಧಾವಿಸುತ್ತಿದ್ದಂತೆ ಕಿಡಿಗೇಡಿಗಳು ಆಟೋದಲ್ಲಿ ಪರಾರಿಯಾಗಿದ್ದಾರೆ.
ಈ ವೇಳೆ ಸರ ಎರಡು ಭಾಗವಾಗಿದ್ದು, ಅದರ ಬಹುಪಾಲು ಕಮಲಾಕ್ಷಮ್ಮ ಅವರ ಕೈಯಲ್ಲೇ ಉಳಿದಿದೆ. ಹೀಗಾಗಿ ಖದೀಮರ ಸರ ಕಸಿಯುವ ಯತ್ನ ವಿಫಲವಾಗಿದೆ.
ಘಟನೆಯ ಮಾಹಿತಿ ತಿಳಿದು ಮೇಟಗಳ್ಳಿ ಠಾಣೆ ಇನ್ಸ್ ಪೆಕ್ಟರ್ ಅರುಣ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ವೃದ್ಧೆಯ ಧೈರ್ಯದಿಂದ ಚಿನ್ನದ ಸರ ಕಳ್ಳತನವಾಗುವುದು ತಪ್ಪಿದ್ದು, ಇದೀಗ ಆಟೋದಲ್ಲಿ ಬಂದ ಖದೀಮರಿಗಾಗಿ ಪೊಲೀಸರ ಶೋಧ ಮುಂದುವರಿದಿದೆ.
Key words: Mysuru, ChainSnatching, Police







