ಮೈಸೂರು,ಆಗಸ್ಟ್,29,2026 (www.justkannada.in): ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಸಮಾಜದಲ್ಲಿ ಸುಧಾರಣೆ ತರಲು, ಜಾತಿ ವ್ಯವಸ್ಥೆ ಹೋಗಲಾಡಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸುತ್ತೂರು ಶಾಖಾ ಮಠದಲ್ಲಿ ನಡೆದ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸುತ್ತೂರು ಮಠ ಶಿಕ್ಷಣಕ್ಕೆ ದಾಸೋಹಕ್ಕೆ ಹೆಸರುವಾಸಿಯಾಗಿದೆ. ನಾಲ್ಕು ವರ್ಣಗಳ ವ್ಯವಸ್ಥೆಯಿಂದ ದೇಶದಲ್ಲಿ ಅನೇಕರು ಶಿಕ್ಷಣ ವಂಚಿತರಾದರು. ಶೂದ್ರ ವರ್ಗ ಅಕ್ಷರ ಕಲಿಕೆಯಿಂದ ವಂಚಿತವಾಗಿತ್ತು. ಹಾಗಾಗಿ ಸಮಾಜದಲ್ಲಿ ಅಸಮಾನತೆ ನಿರ್ಮಾಣವಾಗಿತ್ತು. ಬಸವಣ್ಣನವರ ಕಾಲದಲ್ಲೂ ಕೂಡ ಅಸಮಾನತೆ ಇತ್ತು. ಅದರ ವಿರುದ್ಧ ಬಸವಣ್ಣ ಹೋರಾಟ ಮಾಡಿದರು ಎಂದರು.
ಮಠ ಮಾನ್ಯಗಳು ಧಾರ್ಮಿಕ ವಾಗಿ ಕೆಲಸ ಮಾಡಿದರೇ ಸಾಲಲ್ಲ. ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಬೇಕು. ಇದೇ ಕೆಲಸವನ್ನು ರಾಜೇಂದ್ರ ಸ್ವಾಮಿಗಳು ಮಾಡಿದರು. ಪ್ರತಿ ಹಳ್ಳಿಗೆ ಹೋಗಿ ಶಾಲೆ ತೆರೆಯುವ ಕೆಲಸ ಮಾಡಿದರು. ಆ ಮೂಲಕ ಸಮಾಜದಲ್ಲಿ ಸುಧಾರಣೆ ತರುವ ಕೆಲಸ ಮಾಡಿ ಜಾತಿ ವ್ಯವಸ್ಥೆ ಹೋಗಲಾಡಿಸುವ ಕೆಲಸ ಮಾಡಿದ್ದಾರೆ. ಜಾತಿ ವ್ಯವಸ್ಥೆ ನಿಂತ ನೀರು. ಎಲ್ಲಿವರೆಗೂ ಚಲನೆ ಇರಲ್ಲ ಅಲ್ಲಿವರೆಗೆ ಬದಲಾವಣೆ ಸಾಧ್ಯವಿಲ್ಲ. 12ನೇ ಶತಮಾನದಲ್ಲಿ ಬಸವಣ್ಣ ಜಾತಿ ವ್ಯವಸ್ಥೆ ವಿರುದ್ಧವೇ ಹೋರಾಟ ಮಾಡಿದರು. ಇವನಮ್ಮವ ಇವನಮ್ಮವ ಎನ್ನುವ ಬಸವಣ್ಣ ವಚನ ಎಲ್ಲರಿಗೂ ಬರಬೇಕು. ಇದಕ್ಕಾಗಿ ಶಿಕ್ಷಣ ಮುಖ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಇಂದಿಗೂ ಜಾತಿ ವ್ಯವಸ್ಥೆ ಹೆಚ್ಚಿದ್ದು, ಪಟ್ಟಭದ್ರ ಹಿತಾಸಕ್ತಿಗಳು ಜಾತಿ ಹೋಗಲು ಬಿಡುತ್ತಿಲ್ಲ. ಜಾತಿ ಜಾತಿ ಅಂತಾರೆ. ಇದು ಹೋಗಬೇಕು. ಇಲ್ಲವೆಂದರೇ ಅಸಮಾನತೆ ಹೋಗಲ್ಲ. ವಿದ್ಯಾವಂತರು ಕೂಡ ಕರ್ಮ ಸಿದ್ಧಾಂತ ನಂಬುತ್ತಾರೆ. ಬಸವಣ್ಣ ಅವರೇ ಕರ್ಮ ಸಿದ್ಧಾಂತ ತಿರಸ್ಕಾರ ಮಾಡಿದರು. ಹಣೆ ಬರಹ ಕರ್ಮ ಅಂತಾರೆ. ಇದು ಕರ್ಮ ಸಿದ್ಧಾಂತ ಎಂದರು.
ನಮ್ಮ ಮನೆಯಲ್ಲಿ 6 ಜನ ಮಕ್ಕಳು. ನಾನು ಓದಿ ವಿದ್ಯಾವಂತನಾದೆ. ಸಿಎಂ ಕೂಡ ಆದೆ. ಯಾವ ಜನ್ಮಗಳು ಇಲ್ಲ, ಕರ್ಮಗಳು ಇಲ್ಲ. ಯಾರು ಇದನ್ನು ನಂಬಬೇಡಿ. ಸಮಾಜ ಬದಲಾವಣೆ ಆಗಬೇಕು. ಸಮ ಸಮಾಜ ನಿರ್ಮಾಣ ಆಗಬೇಕು. ಆಗ ಶೋಷಣೆ ಆಗಲ್ಲ. ನಾವು ರಾಜೇಂದ್ರ ಸ್ವಾಮಿಗಳನ್ನು ನೆನೆಯಬೇಕು. ಶಿಕ್ಷಣಕ್ಕೆ ಒತ್ತು ಕೊಟ್ಟು ಲಕ್ಷಾಂತರ ಜನರಿಗೆ ವಿದ್ಯಾದಾನ ಮಾಡಿದ್ದಾರೆ. ವೈಜ್ಞಾನಿಕವಾಗಿ ವಿದ್ಯಾವಂತರು ಚಿಂತನೆ ಮಾಡಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.
Key words: Suttur math, Rajendra Swamiji, social reform, Former CM, Siddaramaiah






