ಮೈಸೂರು,ಆಗಸ್ಟ್, 24,2026 (www.justkannada.in): ಕಬಿನಿ ಜಲಾಶಯ ಭರ್ತಿಯಾಗಿದ್ದರೂ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳಿಗೆ ನೀರು ಸಿಗುತ್ತಿಲ್ಲ. ಬದಲಿಗೆ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುವ ಮೂಲಕ ‘ನೀರಗಂಟಿ’ ಕೆಲಸ ಮಾಡುತ್ತಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ‘ರೈತರತ್ನ’ ಕುರುಬೂರು ಶಾಂತಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಹಕ್ಕುಗಳ ರಕ್ಷಣೆ ಹಾಗೂ ಕೃಷಿ ವಲಯದ ಬಿಕ್ಕಟ್ಟುಗಳಿಗೆ ಧ್ವನಿಯಾಗುವ ಉದ್ದೇಶದಿಂದ ಮೈಸೂರು ತಾಲೂಕಿನ ಮಾರ್ಬಳ್ಳಿ ಗ್ರಾಮದಲ್ಲಿ ನೂತನ ರೈತ ಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಿ ಕುರುಬೂರು ಶಾಂತಕುಮಾರ್ ಮಾತನಾಡಿದರು.
ಪ್ರಸ್ತುತ ಕೃಷಿ ವಲಯವು ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ಬೆಂಬಲ ಬೆಲೆಯ ಕೊರತೆ, ಬ್ಯಾಂಕುಗಳ ಕಠಿಣ ಸಾಲ ನೀತಿ ಹಾಗೂ ಸ್ಥಳೀಯ ಸರ್ಕಾರಿ ಕಚೇರಿಗಳಲ್ಲಿ ರೈತರಿಗೆ ಆಗುತ್ತಿರುವ ಕಿರುಕುಳಗಳ ವಿರುದ್ಧ ಹೋರಾಡಲು ಈ ಗ್ರಾಮ ಘಟಕವನ್ನು ಆರಂಭಿಸಲಾಗಿದೆ. ರೈತ ಸಂಘಟನೆಗಳಲ್ಲಿರುವ ಒಡಕೇ ಸರ್ಕಾರಗಳ ನಿರ್ಲಕ್ಷ್ಯಕ್ಕೆ ಮುಖ್ಯ ಕಾರಣ. ಹೀಗಾಗಿ ಜಾತಿ ಮತ್ತು ಪಕ್ಷಗಳನ್ನು ಮರೆತು ರೈತ ಸಮುದಾಯದ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಾಗಿ ಕೈಜೋಡಿಸಬೇಕು ಎಂದು ಕುರುಬೂರು ಶಾಂತಕುಮಾರ್ ಕರೆ ನೀಡಿದರು.
ಸಂಘಕ್ಕೆ ಹೊಸದಾಗಿ ಸೇರ್ಪಡೆಗೊಂಡ ನೂರಾರು ರೈತರಿಗೆ ಹಸಿರು ಶಾಲು ಹೊದಿಸಿ ಸ್ವಾಗತಿಸಲಾಯಿತು. ನೂತನ ಪದಾಧಿಕಾರಿಗಳಿಗೆ ಹಸಿರು ಶಾಲು ಹೊದಿಸಿ ಪ್ರಮಾಣ ವಚನ ಬೋಧಿಸಲಾಯಿತು.
ಇದೇ ಸಂದರ್ಭದಲ್ಲಿ ಸರ್ಕಾರದಿಂದ ಸಿಗುವ ಕೃಷಿ ಸೌಲಭ್ಯಗಳು, ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಪೂರೈಕೆಯಲ್ಲಿ ಎದುರಾಗುವ ಸಮಸ್ಯೆಗಳು ಹಾಗೂ ಅವುಗಳ ಪರಿಹಾರಗಳ ಕುರಿತು ರೈತರಿಗೆ ಜಾಗೃತಿ ಮೂಡಿಸಲಾಯಿತು.
ಗ್ರಾಮ ಘಟಕ ಉದ್ಘಾಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ನೀಲಕಂಠಪ್ಪ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ತಾಲೂಕ ಅಧ್ಯಕ್ಷ ಪೈಲ್ವಾನ್ ವೆಂಕಟೇಶ್. ಜಿಲ್ಲಾ ಕಾರ್ಯದರ್ಶಿ ವರಕೋಡು ನಾಗೇಶ್. ಮಾರ್ಬಳ್ಳಿ ಗ್ರಾಮ ಘಟಕದ ಮುಖ್ಯಸ್ಥ ಮಹೇಶ್ , ವಿಜಯೇಂದ್ರ, ಬಿ.ಪಿ.ಪರಶಿವಮೂರ್ತಿ, ಮಾರ್ಬಳ್ಳಿ ಶಿವಣ್ಣ,, ಮಾರ್ಬಳ್ಳಿ ಬಸವರಾಜು, ಮಹೇಶ್, ನಂಜುಂಡಸ್ವಾಮಿ, ಮಿಲಿಟರಿ ಕುಮಾರ್, ಹೆಗ್ಗೊಟ್ಟಾರ ಶಿವಸ್ವಾಮಿ, ಹೆಗ್ಗೂರು ರಂಗರಾಜು, ಸತೀಶ್, ಬಾಲು, ಸಿದ್ದರಾಜು, ಸಿದ್ಧರಾಮ, ಗ್ರಾಮ ಘಟಕ ಅಧ್ಯಕ್ಷ ಮಹೇಶ್, ವಕೀಲರಾದ ಗೋವಿಂದನಾಯಕ ,ಗಿರೀಶ್, ಚಿನ್ನಂಕನಾಯಕ ಹಲವು ಮಂದಿ ಉಪಸ್ಥಿತರಿದ್ದರು.
Key words: Mysore, New, Farmers’ Association unit, Marballi, Kurubur Shanthakumar







