ಮೈಸೂರು,ಆಗಸ್ಟ್,18,2026 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯ ಗಜಪಡೆಗೆ ಈ ಬಾರಿ ಮಹತ್ವದ ಬದಲಾವಣೆ! ಕಳೆದ ಹಲವು ವರ್ಷಗಳಿಂದ ಚಿನ್ನದ ಅಂಬಾರಿಯ ಸಾರಥಿಯಾಗಿ ಮೆರೆಯುತ್ತಿದ್ದ ಕ್ಯಾಪ್ಟನ್ ಅಭಿಮನ್ಯು 2026ರ ದಸರಾ ಗಜಪಡೆಯ ಪಟ್ಟಿಯಿಂದ ಹೊರಗುಳಿದಿದ್ದಾನೆ.
ಅಭಿಮನ್ಯುವಿಗೆ 60 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಭಾರವಾದ ದಸರಾ ಜವಾಬ್ದಾರಿಯಿಂದ ದೂರವಿಡಲು ಅರಣ್ಯ ಇಲಾಖೆ ನಿರ್ಧರಿಸಿದೆ. ಕಳೆದ ದಸರೆಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಅಭಿಮನ್ಯುವಿಗೆ ಇದು ಭಾವುಕ ವಿದಾಯವಾಗಲಿದೆ.
ಅಭಿಮನ್ಯು ಸ್ಥಾನಕ್ಕೆ ಯಾರು?
ಅಭಿಮನ್ಯು ಹೊರಗುಳಿದಿರುವ ಬೆನ್ನಲ್ಲೇ ಚಿನ್ನದ ಅಂಬಾರಿ ಹೊರುವ ನೂತನ ಗಜಸಾರಥಿ ಯಾರು? ಎಂಬ ಕುತೂಹಲ ಮೈಸೂರು ಜನರಲ್ಲಿ ಮೂಡಿದೆ.
ಈ ಬಾರಿ ಆಯ್ಕೆಯಾಗಿರುವ ಗಜಪಡೆಯಲ್ಲಿ ಧನಂಜಯ, ಏಕಲವ್ಯ, ಮಹೇಂದ್ರ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಲಕ್ಷ್ಮಿ, ಕಾವೇರಿ, ರೂಪ, ಚೈತ್ರ ಹಾಗೂ ಶ್ರೀಕಂಠ ಸೇರಿದ್ದಾರೆ. ತುರ್ತು ಸಂದರ್ಭಕ್ಕಾಗಿ ಭೀಮ ಮತ್ತು ಹರ್ಷನನ್ನು ಮೀಸಲು ಪಡೆಯಾಗಿ ಇರಿಸಲಾಗಿದೆ.
ಅಭಿಮನ್ಯುವಿನ ಉತ್ತರಾಧಿಕಾರಿಯಾಗಿ ಧನಂಜಯ, ಮಹೇಂದ್ರ ಹಾಗೂ ಪ್ರಶಾಂತ ಹೆಸರುಗಳು ಮುಂಚೂಣಿಯಲ್ಲಿದ್ದವು ಎಂಬ ವರದಿಗಳೂ ಈ ಹಿಂದೆ ಪ್ರಕಟವಾಗಿದ್ದವು.
ಅಭಿಮನ್ಯು ಯುಗಕ್ಕೆ ತೆರೆ?
2020ರಿಂದ ಸತತವಾಗಿ ಚಿನ್ನದ ಅಂಬಾರಿ ಹೊತ್ತಿದ್ದ ಅಭಿಮನ್ಯು, ಮೈಸೂರು ದಸರಾದ ಗಜಪಡೆಯ ಅತ್ಯಂತ ಪರಿಚಿತ ಮುಖವಾಗಿದ್ದಾನೆ. ಆರು ಬಾರಿ ಅಂಬಾರಿ ಹೊತ್ತಿರುವ ಈ ಗಜಸಾರಥಿಯ ಸ್ಥಾನವನ್ನು ತುಂಬುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ. ಹಾಗಾದರೆ ಈ ಬಾರಿಯ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆ ಗಜರಾಜ ಯಾರು? ಅಭಿಮನ್ಯುವಿನ ಬಳಿಕ ಮೈಸೂರು ದಸರಾ ಗಜಪಡೆಯ ಹೊಸ ಕ್ಯಾಪ್ಟನ್ ಯಾರು ಎಂಬುದೇ ಇದೀಗ ದಸರಾ ವಲಯದ ಹಾಟ್ ಟಾಪಿಕ್!
Key words: Mysore Dasara, Jambu Savari, Ambari, Abhimanyu, Off the list






