ಮೈಸೂರು,ಜುಲೈ,28,2026 (www.justkannada.in): ಕ್ಯಾನ್ಸರ್ ಪೀಡಿತ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ನೆರವು ಒದಗಿಸುವ ಉದ್ದೇಶದಿಂದಾಗಿ ಲಕ್ಷ್ಮೀಶ ಫೌಂಡೇಶನ್ (ರಿ) ವತಿಯಿಂದ ಸೆ.6 ರಂದು ‘ನಾದೋತ್ಸವ’ ಕಾರ್ಯಕ್ರಮ ಆಯೋಜಿಸಲಾಗಿದೆ. 
ಕ್ಯಾನ್ಸರ್ ಚಿಕಿತ್ಸೆಗಾಗಿ ಕುಟುಂಬದ ಸಂಪೂರ್ಣ ಆರ್ಥಿಕ ಸಂಪನ್ಮೂಲಗಳು ಖರ್ಚಾಗುವುದರಿಂದ ಅನೇಕ ಕುಟುಂಬಗಳು ಮಕ್ಕಳ ಶಿಕ್ಷಣವನ್ನು ಮಧ್ಯದಲ್ಲೇ ನಿಲ್ಲಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿವೆ. ಇಂತಹ ಸಂಕಷ್ಟದಲ್ಲಿರುವ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮೀಶ ಫೌಂಡೇಶನ್ (ರಿ) ಕಳೆದ ಐದು ವರ್ಷಗಳಿಂದ ನೂರಾರು ಮಕ್ಕಳ ಬದುಕಿನಲ್ಲಿ ಆಶಾಕಿರಣವಾಗಿದ್ದು, ಅವರ ವಿದ್ಯಾಭ್ಯಾಸ ಮುಂದುವರಿಯಲು ಮಹತ್ವದ ಪಾತ್ರ ವಹಿಸಿದೆ.
ಈಗ ಆರನೇ ವರ್ಷಕ್ಕೆ ಕಾಲಿಟ್ಟಿರುವ ಫೌಂಡೇಶನ್ ಗೆ ಶಿಕ್ಷಣ ಸಹಾಯಕ್ಕಾಗಿ ಅರ್ಜಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹೆಚ್ಚಿನ ಮಕ್ಕಳಿಗೆ ನೆರವು ಒದಗಿಸಲು ನಿಧಿ ಸಂಗ್ರಹಿಸುವ ಉದ್ದೇಶದಿಂದ ಸೆಪ್ಟೆಂಬರ್ 6, ಭಾನುವಾರ “ನಾದೋತ್ಸವ” ಎಂಬ ವಿಶೇಷ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಮಾಜದ ದಾನಿಗಳು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದ ಟಿಕೆಟ್ ಖರೀದಿಸಿ ಭಾಗವಹಿಸುವ ಮೂಲಕ ಕ್ಯಾನ್ಸರ್ ಪೀಡಿತ ಕುಟುಂಬಗಳ ಮಕ್ಕಳ ಉಜ್ವಲ ಭವಿಷ್ಯಕ್ಕೆ ಕೈಜೋಡಿಸುವಂತೆ ಫೌಂಡೇಶನ್ ಮನವಿ ಮಾಡಿದೆ.
ಕಾರ್ಯಕ್ರಮದ ಟಿಕೆಟ್ ದರ ₹500 ನಿಗದಿಪಡಿಸಲಾಗಿದ್ದು, ಕಾರ್ಯಕ್ರಮದ ಬಳಿಕ ಭಾಗವಹಿಸುವ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿದೆ.
“ಒಂದು ಟಿಕೆಟ್ ಖರೀದಿಸುವ ಮೂಲಕ ಒಬ್ಬ ಮಗುವಿನ ಶಿಕ್ಷಣದ ಕನಸಿಗೆ ಬೆಂಬಲ ನೀಡಬಹುದು. ಸಮಾಜದ ಸಹಕಾರವೇ ಈ ಮಕ್ಕಳ ಭವಿಷ್ಯವನ್ನು ರೂಪಿಸಲಿದೆ” ಎಂದು ಲಕ್ಷ್ಮೀಶ ಫೌಂಡೇಶನ್ ತಂಡ ಮನವಿ ಮಾಡಿದೆ.
Key words: education, cancer, families children, ‘Nadatassava






