ಧರ್ಮಸ್ಥಳ ಕೇಸ್: ನಾನು ಚಿನ್ನಯನ ಜೊತೆ ಮಾತನಾಡಿದ್ದು ನಿಜ-ನಟ ಪ್ರಕಾಶ್ ರಾಜ್ 

ಬೆಂಗಳೂರು,ಜೂನ್,17,2026 (www.justkannada.in):  ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಹೆಸರು ತಳುಕು ಹಾಕಿಕೊಂಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಕೊನೆಗೂ ಮೌನ ಮುರಿದಿದ್ದು ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನ  ಪತ್ರಕರ್ತರ ಭವನದಲ್ಲಿ ಇಂದು  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ ಪ್ರಕಾಶ್ ರಾಜ್,  ಚಿನ್ನಯ್ಯನ ಜೊತೆಗೆ ಮಾತನಾಡಿದ್ದು ನಿಜ, ಆತ ನನ್ನೊಂದಿಗೆ ತಮಿಳಿನಲ್ಲಿ ಮಾತನಾಡಿದ್ದೆ ಎಂದು ಒಪ್ಪಿಕೊಂಡಿದ್ದಾರೆ.

ಕೋರ್ಟ್ ನಲ್ಲಿ ಚಿನ್ನಯ್ಯ ಹೇಳಿಕೆ ನೀಡಿದ್ದಾನೆ. ಗಿರೀಶ್ ಮಟ್ಟಣ್ಣನವರ್‌ ಹೇಳಿದ ರೀತಿಯಲ್ಲಿ ಕೇಳಿದ್ರೆ ನಾನು ನಿನ್ನ ಅಪ್ಪಿಕೊಳ್ಳುತ್ತೀನಿ ಅಂದಿದ್ದೆ ಅಂತ ಹೇಳಿದ್ದಾನೆ. ಕೇರಳದಿಂದ ಹಣ ಬಂದಿದೆ ಅಂತಲೂ ಹೇಳಿ, ನನ್ನ ಹೆಸರು ಉಲ್ಲೇಖ ಮಾಡಿದ್ದಾನೆ. ಆದರೆ ನಾನು ಗಿರೀಶ್ ಮಟ್ಟನವರ್‌ ಅವರನ್ನ ಭೇಟಿಯಾಗಿಲ್ಲ. ಯಾವತ್ತೂ ಧರ್ಮಸ್ಥಳಕ್ಕೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಚಿನ್ನಯ್ಯನ ಜೊತೆ ಮಾತನಾಡಿದ್ದು ನಿಜ. ಪ್ರಕರಣದ ತನಿಖೆಗಾಗಿ  ಎಸ್ ಐಟಿ ರಚನೆಯಾಗುವ ಮುನ್ನ ಹಾಗೂ ಎಸ್‌ ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ಚಿನ್ನಯ್ಯನನ್ನು ಭೇಟಿ ಮಾಡುವ ಮೊದಲೇ ಈ ಫೋನ್ ಕರೆ ನಡೆದಿತ್ತು ಎಂದು ತಿಳಿಸಿದ್ದಾರೆ.

ಹಾಗೆಯೇ ಧರ್ಮಸ್ಥಳ ಪ್ರಕರಣ ಸಂಬಂಧ ನಿಷ್ಪಕ್ಷಪಾತ ತನಿಖೆಗಾಗಿ ರಾಜ್ಯ ಸರ್ಕಾರ ಎಸ್‌ಐಟಿ ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಡ ಹಾಕಿದ್ದೆ. ಈ ವೇಳೆ  ಸಿಎಂ ಸಿದ್ದರಾಮಯ್ಯ ಅವರು ಪ್ರಣಬ್ ಮೊಹಂತಿ ಅವರ ನೇತೃತ್ವದಲ್ಲಿ ಎಸ್‌ ಐಟಿ ರಚನೆ ಮಾಡಿದರು.

ಧರ್ಮಸ್ಥಳದ ಸುತ್ತಮುತ್ತ ನೂರಾರು ಹೆಣಗಳನ್ನು ಹೂತುಹಾಕಲಾಗಿದೆ ಎಂಬ ಇಂತಹ ಘೋರ ವಿಚಾರಗಳು ಮುನ್ನೆಲೆಗೆ ಬಂದಾಗ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ನನಗೆ ಆತಂಕವಾಗಿತ್ತು. “ಅಲ್ಲಿ ನಿಜಕ್ಕೂ ಏನಾಗಿದೆ ಎಂಬ ಸತ್ಯ ಸಮಾಜದ ಮುಂದೆ ಬರಬೇಕು. ಕೊಲೆಗಾರರು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು ಎನ್ನುವ ಒಂದೇ ಒಂದು ಸದಾಶಯದಿಂದ ನಾನು ಚಿನ್ನಯ್ಯನ ಜೊತೆ ಮಾತನಾಡಿದ್ದೆನೇ ಹೊರತು ಇದರಲ್ಲಿ ಬೇರೆ ಯಾವ ಉದ್ದೇಶವೂ ಇಲ್ಲ ಎಂದರು.

Key words: Dharmasthala case, Chinnayana, actor, Prakash Raj