ಮೈಸೂರು,ಮೇ,27,2026 (www.justkannada.in): ತೋಟಗಾರಿಕೆ ಇಲಾಖೆ ಅನುಷ್ಠಾನಗೊಳಿಸುತ್ತಿರುವ ಪರಂಪರಾಗತ ಕೃಷಿ ವಿಕಾಸ (PKVY) ಯೋಜನೆಯ ಗುಚ್ಚಗಳ ಕೃಷಿಕರಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲು ಗುರಿ ಹೊಂದಲಾಗಿದ್ದು ಇಲಾಖೆ ಜೊತೆಗೂಡಿ ಮೇ 29 ರಂದು ಸಾವಯವ ಮಾವು-ಹಲಸು ಹಣ್ಣುಗಳ ಹಬ್ಬವನ್ನು ಮೈಸೂರು ನಗರದ ನೆಕ್ಸಸ್ ಸೆಂಟರ್ ಸಿಟಿ ಮಾಲ್ ನಲ್ಲಿ ನಡೆಸಲಾಗುತ್ತಿದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕ ಮಂಜುನಾಥ್ ಅಂಗಡಿ ಅವರು ತಿಳಿಸಿದರು.
ಕಳೆದ ವರ್ಷ ಮೇ 23-25 ರಂದು ಲಾಲ್ ಬಾಗ್ ಬೆಂಗಳೂರಿನಲ್ಲಿ 3 ದಿನಗಳ ಕಾಲ ಸಾವಯವ ಮಾವು ಮತ್ತು ಹಲಸು ಮೇಳವನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಮಾವು ಮತ್ತು ಹಲಸು ಹಣ್ಣುಗಳ ಜೊತೆ ಇತರೆ ಸಾವಯವ ಪದಾರ್ಥಗಳನ್ನು ಈ ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲಾಗಿತ್ತಿದೆ ಎಂದರು.
ಈ ವೇದಿಕೆ ಮೂಲಕ ಕೃಷಿಕರು ಬೆಳೆದಿರುವ ಸಾವಯವ ಮಾವು ಮತ್ತು ಹಲಸಿನ ಹಣ್ಣುಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗುವುದು. ಮಾವು ಮತ್ತು ಹಲಸು ಆಧಾರಿತ ವಿಶೇಷ ಆಹಾರಗಳ ತಯಾರಿಸುವ ವಿಧಾನಗಳನ್ನು ತೋರಿಸಿ ಅವುಗಳನ್ನು ಸಾರ್ವಜನಿಕರು ರುಚಿ ನೋಡುವ ಮತ್ತು ಖರೀದಿಸುವ ಅವಕಾಶ ಮಾಡಲಾಗುವುದು. ರಾಜ್ಯದ ವಿವಿಧ ಭಾಗದ ಆಹಾರ, ತಿಂಡಿ ತಿನಿಸುಗಳ ಪರಿಚಯ ಮತ್ತು ಮಾರಾಟ ಕೃಷಿಕರ ಕುಟುಂಬಗಳ ಮೂಲಕ ಈ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಹೇಳಿದರು.
ಸಾವಯವ ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಉಡುಪುಗಳು ಮತ್ತು ಕಲಾಕೃತಿಗಳು ಇವುಗಳನ್ನು ತಯಾರಿಸಲು ಕಚ್ಚಾ ವಸ್ತುಗಳ ಉತ್ಪಾದನೆ, ಸಂಗ್ರಹಣೆ, ತಯಾರಿಸುವ ವಿಧಾನಗಳನ್ನು ಪ್ರದರ್ಶಿಸಿ ಅವುಗಳ ಮಾರಾಟಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ನಗರ ತೋಟಗಾರಿಕೆ ಹಾಗೂ ನೈಸರ್ಗಿಕ ಸಾಬೂನು ತಯಾರಿಕಾ ಕಾರ್ಯಾಗಾರಗಳು ನೈಸರ್ಗಿಕವಾಗಿ ನಾಟಿ ತಳಿಗಳನ್ನು ಸಾರ್ವಜನಿಕರು ತಮ್ಮ ಮನೆಯ ಅಂಗಳದಲ್ಲಿ ಬೆಳೆಯುವ ವಿಧಾನ ಮತ್ತು ನೈಸರ್ಗಿಕ ಕಚ್ಚಾ ವಸ್ತುಗಳನ್ನು ಉಪಯೋಗಿಸಿಕೊಂಡು ಸೋವು, ಡಿಟರ್ಜೆಂಟ್ ಗಳನ್ನು ತಯಾರಿಸುವ ವಿಧಾನದ ಬಗ್ಗೆ ಪ್ರಾಯೋಗಿಕ ಪ್ರದರ್ಶನ ಮತ್ತು ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗುವುದು ಎಂದರು.
ಜೈವಿಕ ಸೊಸೈಟಿ ಅಧ್ಯಕ್ಷ ಡಾ. ರಾಮಕೃಷ್ಣ ಅವರು ಮಾತನಾಡಿ, 80ಕ್ಕೂ ಹೆಚ್ಚು ಸ್ಥಳೀಯ ಹಾಗೂ ವಿದೇಶಿ ಮಾವಿನ ತಳಿಗಳು ಮತ್ತು 35ಕ್ಕೂ ಹೆಚ್ಚು ಹಲಸಿನ ತಳಿಗಳನ್ನು ಈ ಪ್ರದರ್ಶನದಲ್ಲಿ ಇಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿರುವ ಮಾವು ಮತ್ತು ಹಲಸಿನ ತಳಿಗಳ ವೈವಿಧ್ಯತೆ, ಅವುಗಳನ್ನು ಗುರುತಿಸುವ ವಿಧಾನ, ಇಂತಹ ಸಸ್ಯ ವೈವಿಧ್ಯತೆಯನ್ನು ಸಂರಕ್ಷಣೆ ಮಾಡಲಾಗುತ್ತಿರುವ ಕೃಷಿಕರ ವಿವರ ಇತ್ಯಾದಿಗಳನ್ನು ಸಾರ್ವಜನಿಕರಿಗೆ ಅದರಲ್ಲೂ ಯುವ ಪೀಳಿಗೆಗೆ ತಿಳಿಯಪಡಿಸಲಾಗುತ್ತದೆ ಎಂದರು.
ಪ್ರತಿ ಮಾವಿನ ವಿಶೇಷತೆ, ಯಾವ ಹವಾಮಾನದಲ್ಲಿ ಉತ್ಕೃಷ್ಟವಾಗಿ ಬೆಳೆಯುತ್ತದೆ ಎಂಬುದನ್ನು ತಿಳಿಸಲಾಗುತ್ತದೆ. ಉದಾ. ಟಿಪ್ಪು ಬಡಾ ಬಾಗ್ ಮಾವಿನ ತಳಿಗಳು, ಆಲೂರಿನ ಹಲಸು ವೈವಿಧ್ಯತೆ ಇತ್ಯಾದಿ.ನೈಸರ್ಗಿಕವಾಗಿ ಬೆಳೆದು ನೈಸರ್ಗಿಕವಾಗಿ ಹಣ್ಣು ಮಾಡಿದ ಮಾವಿನ ಹಣ್ಣುಗಳನ್ನು ಬಗ್ಗೆ ತಿಳಿಸಲಾಗುವುದು. ಸುವಾಸನೆ, ಬಣ್ಣ, ರುಚಿಯಲ್ಲಿರುವ ವ್ಯತ್ಯಾಸ ಇದರಿಂದ ನೀಡುವ ಸಂತೃಪ್ತಿಯನ್ನು ಪ್ರತ್ಯಕ್ಷವಾಗಿ ತೋರಿಸಲಾಗುವುದು ಎಂದು ತಿಳಿಸಿದರು.
ನಮ್ಮ ರೈತರ ಮಾರುಕಟ್ಟೆ ಸದಸ್ಯರಾದ ಕವಿತಾ ಶ್ರೀನಿವಾಸನ್ ಅವರು ಮಾತನಾಡಿ, ನೈಸರ್ಗಿಕ ಕೃಷಿ, ಪರಿಸರ ಸಂರಕ್ಷಣೆ, ಕೃಷಿಯಲ್ಲಿ ಪಶು ಸಂಗೋಪನೆ ಇತ್ಯಾದಿಗಳ ಬಗ್ಗೆ ಮಕ್ಕಳು ಚಿತ್ರ ಬಿಡಿಸಬಹುದಾಗಿದೆ ಎಂದು ತಿಳಿಸಿದರು.
ನೈಸರ್ಗಿಕ ಜೀವನದೆ ಮೂಲಾಧಾರ ಮತ್ತು ಗ್ರಾಮೀಣ ಬದುಕಿನ ಒಂದು ಭಾಗವಾದ ಮಣ್ಣಿನ ಮಡಿಕೆಗಳು ಇವುಗಳನ್ನು ಉತ್ತೇಜಿಸಲು ಪ್ರಾಯೋಗಿಕ ಉತ್ಪಾದನಾ ಪ್ರದರ್ಶನವನ್ನು ಈ ಮೇಳದಲ್ಲಿ ಏರ್ಪಡಿಸಲಾಗಿದೆ ಎಂದರು.
ಪರಿಸರ ಮತ್ತು ಕಲಿಕೆ ವಿಧಾನಗಳ ಬಗ್ಗೆ ಮಕ್ಕಳಿಗೆ ನಾಟಕ ಪ್ರದರ್ಶನ ರಂಗಭೂಮಿ ಕ್ಷೇತ್ರದ ಪ್ರಮುಖರಾದ ಪ್ರಸನ್ನ ಹೆಗ್ಗೋಡು ರಚಿಸಿ ನಿರ್ದೇಶಿಸಿರುವ ‘ಪಿಪ್ಪಿಗೊಂದು ಪಪ್ಪಿ’ ನಾಟಕವನ್ನು ಭಾರತೀಯ ಶೈಕ್ಷಣಿಕ ಸಂಸ್ಥೆ, ಮೈಸೂರು ಅವರು ಮೇ 30 ರಂದು ಸಂಜೆ 7 ರಿಂದ 8 ಗಂಟೆಯವರೆಗೆ ಮಕ್ಕಳಿಗಾಗಿ ಪ್ರದರ್ಶನವನ್ನು ನೀಡಲಿದ್ದಾರೆ ಎಂದು ತಿಳಿಸಿದರು.
ಪ್ರದರ್ಶನಕ್ಕೆ ಆಗಮಿಸುವ ಯುವಕರಿಗೆ ಹಲಸು ಹಣ್ಣುಗಳ ತೂಕ ಹಾಗೂ ಆಕಾರಗಳನ್ನು ಮನೋರಂಜನೆ ಮೂಲಕ ಅರಿವು ಮೂಡಿಸುವುದು ಎಂದರು.
ಕಾರ್ಯಕ್ರಮದಲ್ಲಿ ಜೈವಿಕ ಸೊಸೈಟಿ ಸದಸ್ಯರಾದ ಸಹನಿ, ಜೈವಿಕ ಸೊಸೈಟಿ ಸದಸ್ಯರಾದ ದರ್ಶನ್ ಎ.ಎಮ್ ಮತ್ತಿತರರು ಉಪಸ್ಥಿತರಿದ್ದರು.
Key words: Mysore, Organic, Mango- Jackfruit, Fair, May 29th to 31st







