ಮೈಸೂರು,ಏಪ್ರಿಲ್,25,2026 (www.justkannada.in): ಲೋಕಸಭೆಯಲ್ಲಿ ಮಹಿಳಾ ಮೀಸಲು ಕಾಯಿದೆಗೆ ಸೋಲು ಉಂಟಾಗಲು ಕೇಂದ್ರ ಸರಕಾರವೇ ನೇರ ಕಾರಣವಾಗಿದ್ದು, ಬಿಜೆಪಿಯ ಹುನ್ನಾರದಿಂದಲೇ ಕಾಯಿದೆಗೆ ಸೋಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ ಮಲ್ಲೇಶ್ ಆರೋಪಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯಿರುವ ಕೆ.ವಿ ಮಲ್ಲೇಶ್ ಮಹಿಳಾ ಮೀಸಲು ಕಾಯಿದೆ-2023ಕ್ಕೆ ತಿದ್ದುಪಡಿ ತರುವ ಉದ್ದೇಶದಿಂದ ಏ.16ರಿಂದ 18ರವರೆಗೆ ಕೇಂದ್ರ ಸರಕಾರ ವಿಶೇಷ ಅಧಿವೇಶನವನ್ನು ಕರೆದಿತ್ತು. ಆದರೆ, ಈ ತಿದ್ದುಪಡಿ ಮಸೂದೆಯ ಜತೆಗೆ ವಿವಾದಾತ್ಮಕವಾಗಿರುವ ಲೋಕಸಭೆ ಮತ್ತು ವಿಧಾನಸಭೆಗಳ ಕ್ಷೇತ್ರ ಮರುವಿಂಗಡಣೆಯ ಮಸೂದೆಗಳನ್ನು ಮಂಡಿಸುವ ಮೂಲಕ ತನ್ನ ಅಜೆಂಡಾವನ್ನು ಜಾರಿಗೊಳಿಸುವ ಹುನ್ನಾರ ನಡೆಸಿತ್ತು. ಕೇಂದ್ರ ಸರಕಾರದ ಈ ಕುತಂತ್ರದ ಬಲೆಯೊಳಗೆ ಸಿಲುಕಿದ ವಿರೋಧ ಪಕ್ಷಗಳು ಮಹಿಳಾ ಮೀಸಲು ಪರವಾಗಿದ್ದರೂ ಮತ ಚಲಾಯಿಸದಂತೆ ಆಯಿತು. ಆ ಮೂಲಕ ಬಿಜೆಪಿ ತನ್ನ ಕುತಂತ್ರ ಬುದ್ಧಿಯಲ್ಲಿ ಯಶ ಸಾಧಿಸಿತು. ಕೇಂದ್ರದ ಈ ಕುತಂತ್ರವನ್ನು ನೋಡಿಯೇ ಪ್ರಿಯಾಂಕಾ ಗಾಂಧಿ ಅವರು ಸಂಸತ್ ನಲ್ಲಿ “ಪ್ರಸ್ತುತ ಚಾಣಕ್ಯ ಇದ್ದಿದ್ದರೆ ಕೇಂದ್ರ ಗೃಹಮಂತ್ರಿಗಳ ಕುತಂತ್ರವನ್ನು ಕಂಡು ದಂಗಾಗಿ ಹೋಗುತ್ತಿದ್ದರು’ ಎಂದು ಹೇಳಿದ್ದು ಎಂದರು.
ನಿಜಕ್ಕೂ ಕೇಂದ್ರ ಸರಕಾರಕ್ಕೆ ಮಹಿಳಾ ಮೀಸಲು ಜಾರಿಗೊಳಿಸುವ ಸದುದ್ದೇಶವಿದ್ದರೆ ತಿದ್ದುಪಡಿ ಮಸೂದೆಯನ್ನು ಪ್ರತ್ಯೇಕವಾಗಿ ಮಂಡಿಸಲಿ. ಅದು ಬಿಟ್ಟು ಕೇತ್ರ ಮರುವಿಂಗಡಣೆಗಳ ಮಸೂದೆಯನ್ನು ಜತೆಗೆ ಸೇರಿಸಿ ಮಂಡಿಸುವುದೇಕೆ? ಮಹಿಳಾ ಮೀಸಲಾತಿಯ ವಿಷಯವನ್ನು ಕ್ಷೇತ್ರ ಮರುವಿಂಗಡಣೆಯ ಜತೆಗೆ ತಳುಕುಹಾಕಿರುವುದು ಅತ್ಯಂತ ಕಳವಳಕಾರಿ ಸಂಗತಿ. ಮಹಿಳಾ ಪ್ರಾತಿನಿಧ್ಯವು ಜನಗಣತಿ ಅಥವಾ ಕ್ಷೇತ್ರ ಮರುವಿಂಗಡಣೆಯ ಜತೆಗೆ ತಾರ್ಕಿಕ ಸಂಬಂಧ ಹೊಂದಿಲ್ಲ. ಆದರೂ ತನ್ನ ಅಜೆಂಡಾ ಜಾರಿಗೊಳಿಸುವ ಉದ್ದೇಶದಿಂದ ಬಿಜೆಪಿ ಈ ರೀತಿ ವರ್ತಿಸುತ್ತಿದೆ ಎಂದು ಕೆ.ವಿ ಮಲ್ಲೇಶ್ ವಾಗ್ದಾಳಿ ನಡೆಸಿದ್ದಾರೆ.
2023ರಲ್ಲಿ ಮಹಿಳಾ ಮೀಸಲು ಮಸೂದೆ ಅಂಗೀಕಾರಗೊಂಡಾಗ 2026ರ ಜನಗಣತಿಯ ನಂತರ ಅದನ್ನು ಮಂಡಿಸುವುದಾಗಿ ತಿಳಿಸಿತ್ತು. ಆದರೆ, ಜನಗಣತಿ ಈಗಷ್ಟೇ ಪ್ರಾರಂಭವಾಗಿದೆ. ಈ ನಡುವೆ ವಿಶೇಷ ಅಧಿವೇಶನ ಕರೆದು 2011ರ ಜನಗಣತಿ ಆಧಾರದಲ್ಲಿ ಮಸೂದೆ ಮಂಡಿಸಿದೆ. ಜನಗಣತಿಗೂ ಮಹಿಳಾ ಮೀಸಲಿಗೂ ಸಂಬಂಧ ಕಲ್ಪಿಸಿರುವುದರ ಹಿನ್ನೆಲೆ ಏನು? ಎರಡು ಪ್ರಮುಖ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ವಿಶೇಷ ಅಧಿವೇಶನ ಕರೆದು ಮಸೂದೆ ಮಂಡಿಸುವ ತುರ್ತು ಏನಿತ್ತು? ಇದು ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಮಹಿಳಾ ಮೀಸಲು ಮಸೂದೆ ಮಂಡನೆಯಾದಾಗಲೇ ಬಹುತೇಕ ಪಕ್ಷಗಳು ಅದನ್ನು ಬೆಂಬಲಿಸಿದ್ದವು. ಈಗಲೂ ಅದಕ್ಕೆ ಬದ್ಧವಾಗಿವೆ. ಹೀಗಿರುವಾಗ ಆ ಪಕ್ಷಗಳ ಗಮನಕ್ಕೆ ತಾರದೇ, ಸಮಾಲೋಚನೆ ನಡೆಸದೇ ಸರ್ವಾಧಿಕಾರಿಯಂತೆ ಮಸೂದೆ ತಿದ್ದುಪಡಿಗೆ ಹೊರಟಿದ್ದು ಸರಿಯೇ?
ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಸರಕಾರ ನಡೆಸಿಲ್ಲ. ಸದನದ ಒಳಗೆ ಮತ್ತು ಹೊರಗೆ ಪಕ್ಷಗಳ ಒಮ್ಮತ, ಬಹುಮತದ ಅಗತ್ಯವಿದೆ. ವಿರೋಧ ಪಕ್ಷಗಳು ಸರಕಾರವನ್ನು ಬೆಂಬಲಿಸುವಂತಹ ಒತ್ತಾಯ ಸೃಷ್ಟಿಸುವ ಸನ್ನಿವೇಶವನ್ನು ಸರಕಾರ ಮಾಡಬಾರದು. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಮನಸ್ಥಿತಿ ಸರಕಾರಕ್ಕೆ ಇನ್ನಾದರೂ ಬರಲಿ. ಪ್ರಜಾಪ್ರಭುತ್ವ ಉಳಿಯಲಿ, ಪ್ರಜಾಪ್ರಭುತ್ವ ಗಟ್ಟಿಗೊಳ್ಳಲಿ, ದೇಶದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿ ಎಂಬುದೇ ನಮ್ಮೆಲ್ಲರ ಆಶಯ ಎಂದು ಕೆ.ವಿ ಮಲ್ಲೇಶ್ ತಿಳಿಸಿದ್ದಾರೆ.
Key words: BJP, defeat, Women Reservation Act, K.V. Mallesh







