ಬೆಂಗಳೂರು,ಮಾರ್ಚ್,28,2026 (www.justkannada.in): ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳ ಬೆಳವಣಿಗೆ, ನೀರಾವರಿ ಸೌಲಭ್ಯ ಮತ್ತು ಉತ್ಕೃಷ್ಟ ಸಂಸ್ಥೆಗಳ ಸ್ಥಾಪನೆ ವಿಚಾರದಲ್ಲಿ ಕೇಂದ್ರದ ಬಿಜೆಪಿ ಸರಕಾರವು ತಾರತಮ್ಯ ಮಾಡುತ್ತಿದೆ. ರಾಜ್ಯಕ್ಕೆ ಬರುತ್ತಿರುವ ಸೆಮಿಕಂಡಕ್ಟರ್ ಯೋಜನಾ ಪ್ರಸ್ತಾವನೆಗಳಿಗೆ ಅದು ಆದ್ಯತೆಯ ಮೇರೆಗೆ ಒಪ್ಪಿಗೆ ಕೊಡುತ್ತಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಕಳಕಳಿ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಅರವಿಂದ ಬೆಲ್ಲದ್ ಅವರು ಈ ಸಂಬಂಧ ಗಮನ ಹರಿಸಿದರೆ ಅದಕ್ಕೆ ನಮ್ಮ ಸಹಕಾರವೂ ಇರಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಈ ಸಂಬಂಧ ವಿರೋಧ ಪಕ್ಷದ ಉಪನಾಯಕ ಬೆಲ್ಲದ ಅವರು ಮಾಡಿರುವ ‘ಎಕ್ಸ್’ ಪೋಸ್ಟಿಗೆ ಅವರು ಈ ಉತ್ತರ ನೀಡಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ನಾವು ಅದೇ ಹಳೆಯ ಕತೆಗಳನ್ನು ಕೇಳುತ್ತಿದ್ದೇವೆ. ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವು ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಲಿ ಸ್ಥಾಪಿಸಿತ್ತು. ಈಗಿನ ಸರಕಾರ ಇದನ್ನು ಸಕ್ರಿಯಗೊಳಿಸಿ, ಅಗತ್ಯ ಅನುದಾನ ನೀಡಬೇಕು. ಈ ಭಾಗದ ಅಭಿವೃದ್ಧಿಗೆ ನೀರಾವರಿ ಸೌಲಭ್ಯ ವಿಸ್ತರಣೆ, ಉನ್ನತ ಮಟ್ಟದ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ ಮತ್ತು ಕೈಗಾರಿಕಾ ಬೆಳವಣಿಗೆ ಅಗತ್ಯವೆಂದು ಶಾಸಕ ಅರವಿಂದ ಬೆಲ್ಲದ್ ತಮ್ಮ ಪೋಸ್ಟ್ ನಲ್ಲಿ, ಹೇಳಿದ್ದರು.
ಇದಕ್ಕೆ ಉತ್ತರಿಸಿರುವ ಸಚಿವ ಎಂ.ಬಿ ಪಾಟೀಲ್, ರಾಜ್ಯದಲ್ಲಿ 59 ಅತೀ ಹಿಂದುಳಿದ ತಾಲ್ಲೂಕುಗಳಿದ್ದು, ಇಷ್ಟೂ ತಾಲ್ಲೂಕುಗಳು ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದಲ್ಲೇ ಇರುವುದು ವಾಸ್ತವವಾಗಿದೆ. ಇಲ್ಲೆಲ್ಲ ನೀರಾವರಿ ಸೌಲಭ್ಯ ಒದಗಿಸಲು ಎಲ್ಲ ಸರಕಾರಗಳೂ ಪ್ರಯತ್ನಿಸಿವೆ. ಹಾಗೆಯೇ ಉತ್ತರ ಕರ್ನಾಟಕದಲ್ಲಿ ಕೂಡ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿದ್ದು, ಇನ್ನೂ ಹೆಚ್ಚಿನ ಸಂಸ್ಥೆಗಳಿಗೆ ಅವಕಾಶವಿದೆ. ಸರಕಾರವು ಅತೀ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಕೈಗಾರಿಕೆಗಳ ವಿಚಾರದಲ್ಲಿ ರಾಜ್ಯ ಸರಕಾರವು ಮೂಲಸೌಕರ್ಯ, ಭೂಮಿ, ವಿಶೇಷ ಭತ್ಯೆಗಳು, ಕೌಶಲ್ಯ ಹೊಂದಿರುವ ಮಾನವ ಸಂಪನ್ಮೂಲಗಳನ್ನೆಲ್ಲ ಒದಗಿಸಲು ಸಿದ್ಧವಿದೆ. ಆದರೆ ಸೆಮಿಕಂಡಕ್ಟರ್ ಉತ್ಪಾದನಾ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರ್ಕಾರವು ರಾಜ್ಯದಲ್ಲೂ ಒಂದಷ್ಟು ಕಂಪನಿಗಳನ್ನು ಕಾರ್ಯಾರಂಭ ಮಾಡಿಸಲು ಆಸಕ್ತಿ ವಹಿಸಬೇಕು.
ಕರ್ನಾಟಕ ಬಿಟ್ಟು ಬೇರೆಬೇರೆ ರಾಜ್ಯಗಳ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡುತ್ತಿರುವ ಕೇಂದ್ರ ಸರಕಾರವು ಕರ್ನಾಟಕದ ಕಡೆಗೂ ಗಮನ ನೀಡಬೇಕು. ಇಡೀ ದೇಶದಲ್ಲೇ ಅತ್ಯುತ್ತಮ ತಂತ್ರಜ್ಞಾನ ಹೊಂದಿರುವ ನಮ್ಮ ರಾಜ್ಯಕ್ಕೆ ಇದರಿಂದ ತೀವ್ರ ಅನ್ಯಾಯವಾಗುತ್ತಿದೆ. ಬೆಲ್ಲದ ಅವರು ಇದರ ಬಗ್ಗೆಯೂ ದನಿ ಎತ್ತಬೇಕು ಎಂದು ಸಚಿವ ಎಂ.ಬಿ ಪಾಟೀಲ್ ಅವರು ಆಗ್ರಹಿಸಿದ್ದಾರೆ.
ಈ ಸಂಬಂಧವಾಗಿ ಬೆಲ್ಲದ ಅವರು ತಮ್ಮ ಪಕ್ಷದ ಸಂಸದರ ಮತ್ತು ಹಿರಿಯ ನಾಯಕರ ನಿಯೋಗವನ್ನು ದೆಹಲಿಗೆ ಕೊಂಡೊಯ್ದು, ಉತ್ತರ ಕರ್ನಾಟಕದ ಯಾವುದೇ ಭಾಗದಲ್ಲಾದರೂ ಸೆಮಿಕಂಡಕ್ಟರ್ ಉದ್ಯಮ ಬರಲು ಸಹಕರಿಸಬೇಕು. ಇದಕ್ಕೆ ನಾವು ಸಂಪೂರ್ಣ ಸಹಕಾರ ನೀಡಲು ಸಿದ್ಧ ಎಂದು ಸಚಿವ ಎಂ.ಬಿ ಪಾಟೀಲ್ ವಿವರಿಸಿದ್ದಾರೆ.
Key words: Development, North Karnataka, Minister, M.B. Patil , MLA, Arvind Bellad






