ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಬೀದಿಗಿಳಿದ ಉದ್ಯೋಗಾಕಾಂಕ್ಷಿಗಳು: ಸಚಿವರ ಭಾವಚಿತ್ರ ಸುಟ್ಟಿ ಆಕ್ರೋಶ

ಧಾರವಾಡ,ಫೆಬ್ರವರಿ,24,2026 (www.justkannada.in): ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ಭರ್ತಿಗೆ ಮುಂದಾಗದೆ ವಿಳಂಬ ಧೋರಣೆ ತೋರುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಉದ್ಯೋಗಾಕಾಂಕ್ಷಿಗಳ ಆಕ್ರೋಶ ಭುಗಿಲೆದಿದ್ದು ಇಂದು ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ಕಿಡಿಕಾರಿದರು.

ಖಾಲಿಹುದ್ದೆಗಳ ಭರ್ತಿಗೆ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆ ವತಿಯಿಂದ  ಧಾರವಾಡದಲ್ಲಿ ಬೃಹತ್ ಹೋರಾಟ ನಡೆಯುತ್ತಿದ್ದು  ಶ್ರೀನಗರ ವೃತ್ತದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಕೂಡಲೇ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನ ಭರ್ತಿ ಮಾಡುವಂತೆ ಘೋಷಣೆ ಕೂಗಿ ಸಿಎಂ, ಡಿಸಿಎಂ ಸಚಿವರ ಭಾವಚಿತ್ರಗಳನ್ನು ಸುಟ್ಟು  ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಾರ ಸಂಖ್ಯೆಯಲ್ಲಿ ಸೇರಿರುವ ಉದ್ಯೋಗಾಕಾಂಕ್ಷಿ ಯುವಕರನ್ನ ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಇನ್ನು ಸರ್ಕಾರದ ವಿರುದ್ದ ಹೋರಾಟಕ್ಕೆ ಕರೆ ನೀಡಿದ್ದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕಾಂತಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಆಟೋದಲ್ಲಿ ಕರೆದೊಯ್ದಿದ್ದು ಈ ವೇಳೆ ಆಟೋಗೆ ಪ್ರತಿಭಟನಾನಿರತ ವಿದ್ಯಾರ್ಥಿಗಳು ಮುತ್ತಿಗೆ ಹಾಕಿದರು.

Key words: Dharwad, Protest, demanding , recruitment