ಸ್ವಯಂ ಚಾಲಿತ ಮ್ಯುಟೇಶನ್: ಸರ್ಕಾರಿ ಜಮೀನುಗಳ ಗುರ್ತಿಸಿ ಫ್ಲಾಗ್ ಮಾಡಲು ನಿರ್ದೇಶನ

ಬೆಂಗಳೂರು,ಫೆಬ್ರವರಿ,4,2026 (www.justkannada.in): ಭೂಮಿ ತಂತ್ರಾಂಶದಲ್ಲಿ ಆಕ್ಷೇಪಣೆ ಇಲ್ಲದ ಪ್ರಕರಣಗಳಲ್ಲಿ ಮ್ಯುಟೇಶನ್ ಅನುಮೋದನೆಯನ್ನು ಸ್ವಯಂಚಾಲಿತವಾಗಿ ನಿರ್ವಹಿಸುವ ಸಂಬಂಧ ಕಂದಾಯ ಇಲಾಖೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದೆ.

ಸ್ವಯಂಚಾಲಿತ ಮ್ಯುಟೇಶನ್ ತಂತ್ರಾಂಶವನ್ನು ಪ್ರಾಯೋಗಿಕವಾಗಿ ಮಂಡ್ಯ ಜಿಲ್ಲೆಯ ಮಂಡ್ಯ ಮತ್ತು ಮದ್ದೂರು ತಾಲ್ಲೂಕುಗಳಲ್ಲಿ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ಅಳವಡಿಸಲು ತೀರ್ಮಾನಿಸಲಾಗಿದೆ.  ಹೀಗಾಗಿ  ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಜಮೀನುಗಳು, ಪಿಟಿಸಿಲ್ ಜಮೀನುಗಳು ಮತ್ತು ಸರ್ಕಾರಿ ನಿಬಂಧನೆ ಇರುವ ಜಮೀನುಗಳನ್ನು ಕಡ್ಡಾಯವಾಗಿ ಗುರುತಿಸಿ, ಒಂದು ವಾರದ ಒಳಗಾಗಿ ಫ್ಲಾಗ್ ಮಾಡುವಂತೆ ತಮ್ಮ ಅಧೀನದಲ್ಲಿ ಬರುವ ಎಲ್ಲಾ ತಾಲ್ಲೂಕು ತಹಶೀಲ್ದಾರರಿಗೆ ನಿರ್ದೇಶನ ನೀಡುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಆಯುಕ್ತರಾದ ಮೀನಾ ನಾಗರಾಜ್ ಸೂಚನೆ ನೀಡಿದ್ದಾರೆ.

ಈ ಸಂಬಂಧ ಆದೇಶ ಹೊರಡಿಸಿರುವ ಮೀನಾ ನಾಗರಾಜ್ ಅವರು,  ಕರ್ನಾಟಕ ಭೂಕಂದಾಯ ನಿಯಮಗಳು 1966 ರ ನಿಯಮ 66ರ ಅಡಿಯಲ್ಲಿ ಹಕ್ಕುಬದಲಾವಣೆಯ ನಮೂದನ್ನು ಪ್ರಸ್ತಾಪಿಸಿದ್ದು, ಈ ಕುರಿತು ಉಲ್ಲೇಖಿತ ಸರ್ಕಾರದ ಅಧಿಸೂಚನೆಯಲ್ಲಿ ಆಕ್ಷೇಪಣೆ ಇಲ್ಲದ ಪ್ರಕರಣಗಳಲ್ಲಿ ಹಕ್ಕುಬದಲಾವಣೆಯ ನಮೂದುಗಳು ಸ್ವಯಂಚಾಲಿತವಾಗಿ ಜಾರಿಯಾಗತಕ್ಕದ್ದು ಎಂದು ಆದೇಶಿಸಲಾಗಿರುತ್ತದೆ.

ಅದರಂತೆ ನೋಂದಾಯಿತ ಮ್ಯುಟೇಶನ್‌ ಗಳಿಗೆ ಅಂದರೆ ಕ್ರಯ, ವಿಭಾಗ, ದಾನ ಇತ್ಯಾದಿ ಮ್ಯುಟೇಶನ್ ಗಳಿಗೆ ಸಂಬಂಧಿಸಿದಂತೆ 7 ದಿನಗಳ ನೋಟೀಸು ಅವಧಿ ಹಾಗೂ ನೋಂದಾಯಿತವಲ್ಲದ ಮ್ಯುಟೇಶನ್‌ಗಳಿಗೆ ಅಂದರೆ ಪೌತಿ ಮ್ಯುಟೇಶನ್ ಗಳಿಗೆ ಸಂಬಂಧಿಸಿದಂತೆ 15 ದಿನಗಳ ನೋಟೀಸು ಅವಧಿ ಇರುತ್ತದೆ.

ಪ್ರಸ್ತುತ ತಂತ್ರಾಂಶದಲ್ಲಿ ಸದರಿ ನೋಟೀಸು ಅವಧಿಯ ನಂತರ ಹೋಬಳಿಯ ರಾಜಸ್ವ ನಿರೀಕ್ಷಕರು ಮ್ಯುಟೇಶನ್ ಅನುಮೋದನೆ ಮಾಡುತ್ತಿದ್ದಾರೆ. ಆದರೆ ಉಲ್ಲೇಖಿತ ಸರ್ಕಾರದ ಅಧಿಸೂಚನೆಯಂತೆ ಸ್ವಯಂಚಾಲಿತ ಮ್ಯುಟೇಶನ್ ಅನುಮೋದನೆ ಜಾರಿಗೊಳಿಸಿದ್ದು, ಅದರಂತೆ ನೋಂದಾಯಿತ ಮ್ಯುಟೇಶನ್‌ ಗಳಿಗೆ ಮತ್ತು ನೋಂದಾಯಿತವಲ್ಲದ ಮ್ಯುಟೇಶನ್‌ ಗಳಿಗೆ ಕ್ರಮವಾಗಿ 8ನೇ ದಿನದ ಮಧ್ಯರಾತ್ರಿ ಮತ್ತು 16ನೇ ದಿನದ ಮಧ್ಯರಾತ್ರಿ ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಸರ್ವರ್ ಸಿಗ್ರೇಚರ್ ಮೂಲಕ ಅನುಮೋದನೆಯಾಗುತ್ತದೆ. ಅದರಂತೆ ರಾಜಸ್ವ ನಿರೀಕ್ಷಕರ ಅನುಮೋದನೆಯ ಅಗತ್ಯವಿರುವುದಿಲ್ಲ. ಆದರೆ ಸಂಬಂಧಿಸಿದ ರಾಜಸ್ವ ನಿರೀಕ್ಷಕರು ಸದರಿ ನೋಟೀಸು ಅವಧಿಯಲ್ಲಿ ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶವಿರುತ್ತದೆ.

ಸದರಿ ಸ್ವಯಂಚಾಲಿತ ಮ್ಯುಟೇಶನ್ ತಂತ್ರಾಂಶವನ್ನು ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ಅಳವಡಿಸಲು ತೀರ್ಮಾನಿಸಲಾಗಿರುತ್ತದೆ. ಆದುದರಿಂದ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಜಮೀನುಗಳು, ಪಿಟಿಸಿಲ್ ಜಮೀನುಗಳು ಮತ್ತು ಸರ್ಕಾರಿ ನಿಬಂಧನೆ ಇರುವ ಜಮೀನುಗಳನ್ನು ಕಡ್ಡಾಯವಾಗಿ ಗುರುತಿಸಿ, ಒಂದು ವಾರದ ಒಳಗಾಗಿ ಫ್ಲಾಗ್ ಮಾಡುವಂತೆ ತಮ್ಮ ಅಧೀನದಲ್ಲಿ ಬರುವ ಎಲ್ಲಾ ತಾಲ್ಲೂಕು ತಹಶೀಲ್ದಾರರಿಗೆ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

Key words: Automated mutation, identify, government lands, Revenue Department