ಬಜೆಟ್‌ ನಲ್ಲಿ ತಾಂತ್ರಿಕ ಕ್ಷೇತ್ರ, ಯುವ ಸಮುದಾಯಕ್ಕೆ ಆದ್ಯತೆ- ಸಂಸದ ಯದುವೀರ್‌ ಮೆಚ್ಚುಗೆ

ಮೈಸೂರು, ಫೆಬ್ರವರಿ, 2,2026 (www.justkannada.in) : ಯುವ ಸಮುದಾಯಕ್ಕೆ ಹಾಗೂ ತಾಂತ್ರಿಕ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನ ಬಜೆಟ್‌ ನಲ್ಲಿ ಹೆಚ್ಚು ಒತ್ತು ನೀಡುವ ಮೂಲಕ ವಿಕಸಿತ ಭಾರತ ಆಶಯಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ  ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.

2026-27ನೇ ಸಾಲಿನ ಕೇಂದ್ರ ಆಯವ್ಯಯ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಸದ ಯದುವೀರ್‌ ಒಡೆಯರ್‌, ಇದು ಅಭಿವೃದ್ಧಿ ಹಾಗೂ ಜನಪರ ಬಜೆಟ್‌ ಆಗಿದೆ ಎಂದರು.

ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ ನೇತೃತ್ವದಲ್ಲಿ ಮೈಸೂರಿನಲ್ಲಿ ಮುಂಬರುವ COSMOS ತಾರಾಲಯ ಮತ್ತು ಖಗೋಳಶಾಸ್ತ್ರ ತರಬೇತಿ ಕೇಂದ್ರದಂತಹ ಯೋಜನೆಗಳು ಸಾಕಷ್ಟು ನೆರವಾಗಲಿವೆ. COSMOS, ಶಿಕ್ಷಣ, ತರಬೇತಿ, ಸಂಶೋಧನೆ ಮತ್ತು ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಗೆ ಕೇಂದ್ರವಾಗಿ ಬೆಳೆಯಲು ಇದು ನೆರವಾಗಲಿದೆ. ಮುಂದಿನ ಪೀಳಿಗೆಯ ವಿಜ್ಞಾನಿಗಳಿಗೆ ಸ್ಫೂರ್ತಿ ನೀಡಲು ಮತ್ತು ವಿಕಸಿತ ಭಾರತ 2047 ರ ಹಾದಿಯಲ್ಲಿ ದೇಶದ ವೈಜ್ಞಾನಿಕ ಸಾಮರ್ಥ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಬಜೆಟ್‌ ನಲ್ಲಿ ಮಹತ್ವದ ಅಂಶವಾಗಿದೆ ಎಂದರು.

ಹಣಕಾಸಿನ ಶಿಸ್ತು, ಆರ್ಥಿಕ ಸಮತೋಲನ ಮೂಲಸೌಕರ್ಯದಲ್ಲಿ ದಾಖಲೆಯ ಸಾರ್ವಜನಿಕ ಹೂಡಿಕೆ, ಅರೆವಾಹಕಗಳು, ಬಯೋಫಾರ್ಮಾ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ವೇಗಗೊಳಿಸಲು 2ನೇ ಹಾಗೂ 3ನೇ ಸ್ತರದ ನಗರಗಳಿಗೂ ಯೋಜನೆಗಳನ್ನು ವಿಸ್ತರಿಸಲಾಗುತ್ತಿರುವುದು ಗಮನಾರ್ಹ ಎಂದು ಸಂಸದ ಯದುವೀರ್ ತಿಳಿಸಿದರು.

ಶಿಕ್ಷಣದಿಂದ ಉದ್ಯೋಗಕ್ಕೆ ಮಾರ್ಗಗಳು, AVGC ಮತ್ತು ಆರೋಗ್ಯ ರಕ್ಷಣೆ, ಪ್ರವಾಸೋದ್ಯಮ ಕೌಶಲ್ಯ, ಪ್ರಾದೇಶಿಕ ಬೆಳವಣಿಗೆಯ ಕೇಂದ್ರಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮಣೆ ಹಾಕಿದೆ ಎಂದು ಯದುವೀರ್‌ ಒಡೆಯರ್‌ ವಿವರಿಸಿದರು.

ಎಂಎಸ್‌ ಎಂಇಗಳು ಭಾರತದ ಆರ್ಥಿಕತೆಯ ಬೆನ್ನೆಲುಬಾಗಿದೆ. ಸಾಲ, ತಂತ್ರಜ್ಞಾನ ಅಳವಡಿಕೆ, ಮಾರುಕಟ್ಟೆ ಸಂಪರ್ಕಗಳು ಮತ್ತು ಸುಲಭ ವ್ಯವಹಾರ ಯೋಜನೆಗಳಿಗೆ ಸಾಕಷ್ಟು ಅನುದಾನ ಒದಗಿಸಿರುವುದು ನಮ್ಮ ಸರ್ಕಾರದ ಹೆಗ್ಗಳಿಕೆ ಎಂದು ಸಂಸದ ಯದುವೀರ್ ತಿಳಿಸಿದರು.

ಸರಕು ಸಾಗಣೆ ಕಾರಿಡಾರ್‌ ಗಳು, ಒಳನಾಡಿನ ಜಲಮಾರ್ಗಗಳು ಮತ್ತು ಹೈ-ಸ್ಪೀಡ್ ರೈಲು ಸಂಪರ್ಕದ ಮೇಲೆ ಕೇಂದ್ರೀಕರಿಸುವುದರಿಂದ ಲಾಜಿಸ್ಟಿಕ್ಸ್ ಅನ್ನು ಬಲಪಡಿಸಲು ಬಜೆಟ್‌ ನಲ್ಲಿ ಪ್ರಸ್ತಾವಿಸಲಾಗಿದೆ. ಇದು ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಸುಸ್ಥಿರ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತದೆ ಸ್ಥಿತಿಸ್ಥಾಪಕ ಮತ್ತು ಭವಿಷ್ಯಕ್ಕೆ ಸಿದ್ಧ ದೇಶ ನಿರ್ಮಣಕ್ಕೆ ಇದು ಭದ್ರ ಅಡಿಪಾಯವಾಗಿದೆ ಎಂದು ಸಂಸದ ಯದುವೀರ್‌ ಹೇಳಿದರು.

2030ರ ವೇಳೆಗೆ 2 ಮಿಲಿಯನ್‌ ಉದ್ಯೋಗ ಸೃಷ್ಟಿಗೆ ಆದ್ಯತೆ, ಅಭಿವೃದ್ಧಿ ಪರ ಆಯವ್ಯಯವಾಗಿದೆ ಎಂದರು.

ಒಟ್ಟಾರೆಯಾಗಿ ಪ್ರಸಕ್ತ ಸಾಲಿನ ಬಜೆಟ್‌, ದೂರದೃಷ್ಟಿಯ, ಯುವ ಸಮುದಾಯ ಸಬಲೀಕರಣದ, ಜನಾಭಿವೃದ್ಧಿ, ಆರ್ಥಿಕಾಭಿವೃದ್ಧಿಯ  ಉತ್ತಮ ಬಜೆಟ್‌ ಆಗಿದೆ ಎಂದು ಸಂಸದ ಯದುವೀರ್‌ ಒಡೆಯರ್‌ ತಿಳಿಸಿದರು.

Key words: technology, youth community, budget, MP Yaduveer