ಉತ್ತಮ ಪ್ರಗತಿ ಸಾಧಿಸಿದ ಪಿಡಿಓಗಳಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ ಮಂಡ್ಯ ಜಿ.ಪಂ. ಸಿಇಓ

ಮಂಡ್ಯ,ಡಿಸೆಂಬರ್,12,2025 (www.justkannada.in): ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು ಕಾರ್ಯಕ್ರಮಗಳಡಿ ಉತ್ತಮ ಪ್ರಗತಿ ಸಾಧಿಸಿದ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಗ್ರಾಮ ಪಂಚಾಯತ್ ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಮಂಡ್ಯ ಜಿ.ಪಂ. ಸಿಇಓ ನಂದಿನಿ ಕೆ.ಆರ್ ಅವರು ಅಭಿನಂದಿಸಿದರು.

ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ನಡೆದ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ಅಭಿನಂದಿಸಿ ಪ್ರಶಂಸನಾ ಪತ್ರ ವಿತರಿಸಿದ ಅವರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಹಾಗೂ ಕಳಪೆ ಪ್ರಗತಿ ಸಾಧಿಸಿದ ಪ್ರತೀ ತಾಲ್ಲೂಕಿನ 5 ಪಿಡಿಓ ಗಳಿಗೆ ಕಾರಣ ಕೇಳಿ ನೋಟೀಸ್ ಅನ್ನು ಸಹ ವಿತರಿಸಿ ನಿಗಧಿತ ಗುರಿಗೆ ಅನುಗುಣವಾಗಿ ಪ್ರಗತಿ ಸಾಧಿಸಲು ತಿಳಿಸಲಾಗಿದೆ ಎಂದರು.

ಡಿಸೆಂಬರ್ 31ರೊಳಗೆ ಎಲ್ಲಾ ಗ್ರಾ.ಪಂ.ಗಳಲ್ಲಿಯೂ ಅಭಿಲೇಖಾಲಯ ಪ್ರಾರಂಭಿಸಿ: ಗ್ರಾ.ಪಂ.ನ ಕಡತಗಳು ಹಾಗೂ ಇ-ಸ್ವತ್ತು ಕಡತಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಜಿಲ್ಲೆಯ ಎಲ್ಲಾ ಗ್ರಾ.ಪಂ.ಗಳಿಗೆ ಈಗಾಗಲೇ ಸೂಚಿಸಲಾಗಿದ್ದು, ಆಯಾ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಬಗ್ಗೆ ನಿರಂತರ ಅನುಸರಣೆ ಮಾಡಿ ಎಷ್ಟು ಗ್ರಾ.ಪಂ.ಗಳಲ್ಲಿ ಅಭಿಲೇಖಾಲಯ ಸುವ್ಯವಸ್ಥಿತವಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು, ಡಿಸೆಂಬರ್ 31ರೊಳಗೆ ಅಭಿಲೇಖಾಲಯ ಪ್ರಾರಂಭಿಸಿ, ಕ್ಯಾಟಲಾಗ್ ಇಂಡೆಕ್ಸ್ ಮಾಡಿ 2026ರ ಹೊಸವರ್ಷವನ್ನು ಹೊಸ ಸುಸಜ್ಜಿತ ಅಭಿಲೇಖಾಲಯದೊಂದಿಗೆ ಪ್ರಾರಂಭಿಸಬೇಕು ಎಂದು ಸಿಇಓ ರವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಅಭಿಲೇಖಾಲಯ ನಿರ್ವಹಣೆಯನ್ನು ಸೂಕ್ತವಾಗಿ ಮಾಡಿದಲ್ಲಿ ಇ-ಸ್ವತ್ತು ಸಂಬಂಧಿಸಿದ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿ ಸಾರ್ವಜನಿಕರಿಗೆ ಇ-ಸ್ವತ್ತು ನೀಡಲು ಹಾಗೂ ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹೊಸ ಇ-ಸ್ವತ್ತು ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ: ಇ-ಸ್ವತ್ತು ತಂತ್ರಾಂಶದಲ್ಲಿ ಮಾಡಲಾಗಿರುವ ಬದಲಾವಣೆಗಳ ಬಗ್ಗೆ ಹಾಗೂ ಹೊಸ ತಂತ್ರಾಂಶದ ಕಾರ್ಯವಿಧಾನದ ಬಗ್ಗೆ ಸಾರ್ವಜನಿಕರಲ್ಲಿ ಅಭಿಯಾನ ಮಾದರಿಯಲ್ಲಿ ಅರಿವು ಮೂಡಿಸಲು ಗ್ರಾ.ಪಂ.ಗಳು ಮುಂದಾಗಬೇಕು ಎಂದು ಗ್ರಾ.ಪಂ.ನ ಪಿಡಿಓಗಳಿಗೆ ಸಿಇಓ ನಂದಿನಿ ಅವರು ಸೂಚಿಸಿದರು.

ಪ್ರತೀ ಸೋಮವಾರ ಕಡ್ಡಾಯವಾಗಿ ಕುಂದುಕೊರತೆ ಸಭೆ ಆಯೋಜಿಸಬೇಕು: ಗ್ರಾ.ಪಂ. ಮತ್ತು ತಾಲ್ಲೂಕು ಪಂಚಾಯತ್ ಕಚೇರಿಗಳಲ್ಲಿ ಪ್ರತೀ ಸೋಮವಾರ ಕಡ್ಡಾಯವಾಗಿ ಸಾರ್ವಜನಿಕ ಕುಂದು ಕೊರತೆ ಸಭೆ ಆಯೋಜಿಸಬೇಕು ಹಾಗೂ ಈವರೆಗೆ ಜಿಲ್ಲಾ ಪಂಚಾಯತ್ ಕಚೇರಿಗೆ ಸ್ವೀಕೃತವಾಗಿರುವ ದೂರು ಮತ್ತು ಮನವಿಗಳಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆ ಅನುಪಾಲನಾ ವರದಿಯನ್ನು ಜಿ.ಪಂ. ಕಚೇರಿಗೆ ಸಲ್ಲಿಸಬೇಕು ಎಂದು ತಿಳಿಸಿದರು.

ಜಿ.ಪಂ. ಕಚೇರಿಗೆ ಸಾರ್ವಜನಿಕ ಸೋಮವಾರದಂದು ಸ್ವೀಕೃತವಾಗಿರುವ ದೂರು ಮತ್ತು ಮನವಿಗಳ ಕುರಿತು ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆ ಪರಿಶೀಲಿಸಲು ಇನ್ನು ಮುಂದೆ ಪ್ರತೀ ಸೋಮವಾರ ಸಿಇಓರವರ ನೇತೃತ್ವದ ಅಧಿಕಾರಿಗಳ ತಂಡ ತಾಲ್ಲೂಕು ಪಂಚಾಯತ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಅಗತ್ಯ ಮಾಹಿತಿಗಳೊಂದಿಗೆ ಸಿದ್ದವಿರುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನರೇಗಾ ಯೋಜನೆಯ ಸಾಮಾಗ್ರಿ ಮೊತ್ತವನ್ನು ಜೇಷ್ಠತೆ ಆಧಾರದಲ್ಲಿ ಪಾವತಿಸಲು ಕ್ರಮವಹಿಸಿ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಬಿಡುಗಡೆಯಾಗಿರುವ ಸಾಮಾಗ್ರಿ ಮೊತ್ತವನ್ನು ವೈಯಕ್ತಿಕ ಫಲಾನುಭವಿಗಳಿಗೆ ಜೇಷ್ಠತೆ ಆಧಾರದ ಮೇಲೆ ಪಾವತಿಸಲು ಕ್ರಮವಹಿಸುವಂತೆ ಸರ್ಕಾರ ನಿರ್ದೇಶಿಸಿರುತ್ತದೆ. ಆದಾಗ್ಯೂ ಸೂಚನೆಗಳನ್ನು ಉಲ್ಲಂಘಿಸಿ ಸಾಮಾಗ್ರಿ ಮೊತ್ತ ಪಾವತಿ ಮಾಡಿದ್ದಲ್ಲಿ ಅಂತಹ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಇಒ ಕೆ.ಆರ್ ನಂದಿನಿ ಅವರು ಎಚ್ಚರಿಸಿದರು.

ತೆರಿಗೆ ವಸೂಲಾತಿಯಲ್ಲಿ ಶೇಕಡ 100ರಷ್ಟು ಪ್ರಗತಿ ಸಾಧಿಸಲು ಸೂಚನೆ…

ಪ್ರಸಕ್ತ ಸಾಲಿನ ಬೇಡಿಕೆಗೆ ಅನುಗುಣವಾಗಿ ಶೇಕಡ 100 ರಷ್ಟು ತೆರಿಗೆ ವಸೂಲಾತಿಯನ್ನು ಮಾಡುವಂತೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ತೆರಿಗೆ ವಸೂಲಾತಿಯಲ್ಲಿ ಅತೀ ಕಡಿಮೆ ಪ್ರಗತಿ ಸಾಧಿಸಿದ ಜಿಲ್ಲೆಯ ಏಳು ತಾಲ್ಲೂಕಿನ 35 ಗ್ರಾಮ ಪಂಚಾಯತ್ ಗಳಿಗೆ ಪ್ರಗತಿ ಉತ್ತಮಗೊಳಿಸುವಂತೆ ತಿಳಿಸಿ ನೋಟೀಸ್ ಜಾರಿ ಮಾಡಲಾಯಿತು.

ಗ್ರಂಥಾಲಯ ಕರ ಮತ್ತು ಬಿಕ್ಷುಕರ ಕರವನ್ನು 15 ದಿನದೊಳಗೆ ಪಾವತಿಸಿ..

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳು ಗ್ರಂಥಾಲಯ ಕರ ಮತ್ತು ಬಿಕ್ಷುಕರ ಕರವನ್ನು 15 ದಿಗಳೊಳಗಾಗಿ ಪಾವತಿಸಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಗೆ ವರದಿ ಸಲ್ಲಿಸಬೇಕು. ಡಿಸೆಂಬರ್ 25ರೊಳಗೆ ಎಲ್ಲಾ ಗ್ರಾಮ ಪಂಚಾಯತ್ ಗಳು ಗ್ರಂಥಾಲಯ ಕರ ಮತ್ತು ಬಿಕ್ಷುಕರ ಕರವನ್ನು ಪಾವತಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಇಓ ಗಳಿಗೆ ಸೂಚಿಸಿದರು.

ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿರುವ ಫಲಾನಭವಿಗಳಿಗೆ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು ಪಾವತಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚಿಸಿದರು ಹಾಗೂ ಎಸ್.ಸಿ./ ಎಸ್.ಟಿ. ಫಲಾನುಭವಿಗಳಿಗೆ ಬಾಕಿ ನೀಡಬೇಕಾಗಿರುವ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿದ್ದು, ಫಲಾನುಭವಿಗಳ ಪಟ್ಟಿಯನ್ನು ಜಿಲ್ಲಾ ಪಂಚಾಯತ್ ಗೆ ತುರ್ತಾಗಿ ಸಲ್ಲಿಸುವಂತೆ ಸೂಚಿಸಿದರು.

ಕೆ.ಆರ್.ಪೇಟೆ ಮತ್ತು ಪಾಂಡವಪುರ ಇಓ ಗಳಿಗೆ ಪ್ರಶಂಸಾ ಪತ್ರ: ಕೃಷ್ಣರಾಜಪೇಟೆ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಗಳು ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ಕೊಳವೆ ಬಾವಿಗಳಿಗೆ ಶೇಕಡ 100 ರಷ್ಟು ರಕ್ಷಣಾ ಕಾಮಗಾರಿಗಳನ್ನು ನಿರ್ಮಾಣ ಮಾಡಿದ್ದರಿಂದ, ಗ್ರಾಮ ಪಂಚಾಯತ್ ಗಳ ಪರವಾಗಿ ಕೃಷ್ಣರಾಜಪೇಟೆ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಸುಷ್ಮಾ ಕೆ. ಅವರನ್ನು ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.

ತೆರಿಗೆ ವಸೂಲಾತಿಯಲ್ಲಿ ಪಾಂಡವಪುರ ತಾಲ್ಲೂಕಿನ 24 ಗ್ರಾಮ ಪಂಚಾಯತ್ ಗಳು ಪ್ರಸಕ್ತ ಸಾಲಿನ ಬೇಡಿಕೆಗೆ ಅನುಗುಣವಾಗಿ ರೂ 4.09 ಕೋಟಿ ತೆರಿಗೆ ವಸೂಲಾತಿ ಮಾಡಿ ಶೇಕಡ 83.56 ಪ್ರಗತಿ ಸಾಧಿಸಿದ್ದರಿಂದ ಗ್ರಾಮ ಪಂಚಾಯತ್ ಗಳ ಪರವಾಗಿ ಪಾಂಡವಪುರ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ವೀಣಾ ಅವರನ್ನು ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.

ನರೇಗಾ & ಎನ್.ಆರ್.ಎಲ್.ಎಂ. ಬಗ್ಗೆ ಅರಿವು ಮೂಡಿಸಲು ತಾಲ್ಲೂಕು ಮಟ್ಟದ ಕಾರ್ಯಾಗಾರ: ಮಹಾತ್ಮ ಗಾಂಧಿ ನರೇಗಾ ಯೋಜನೆಯ 2026-27ನೇ ಸಾಲಿನ ಕ್ರಿಯಾಯೋಜನೆ ಸಿದ್ದಪಡಿಸುವುದು, ಹಿಂದಿನ ಸಾಲುಗಳ ಕಾಮಗಾರಿಗಳನ್ನು ಮುಕ್ತಾಯಗೊಳಿಸುವುದು, ಕೂಲಿ ಮತ್ತು ಸಾಮಾಗ್ರಿ ಮೊತ್ತ ಪಾವತಿ, ಸೇರಿದಂತೆ ಇತರೆ ವಿಷಯಗಳು ಹಾಗೂ ಎನ್.ಆರ್.ಎಲ್.ಎಂ. ಯೋಜನೆಯಡಿ ದೊರೆಯುವ ಸೌಲಭ್ಯಗಳ ಕುರಿತು ತಾಲ್ಲೂಕು ಮಟ್ಟದ ಕಾರ್ಯಾಗಾರಗಳನ್ನು ಆಯೋಜಿಸಿ ಮಾಹಿತಿ ನೀಡುವಂತೆ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ (ಆಡಳಿತ) ಶಿವಲಿಂಗಯ್ಯ, ಉಪಕಾರ್ಯದರ್ಶಿ (ಅಭಿವೃದ್ಧಿ) ಲಕ್ಷ್ಮಿ ಪಿ, ಯೋಜನಾ ನಿರ್ದೇಶಕರಾದ ರೂಪಶ್ರೀ ಕೆ.ಎನ್, ಸಹಾಯಕ ಕಾರ್ಯದರ್ಶಿ (ಆಡಳಿತ) ರವೀಂದ್ರ, ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಚಂದ್ರು, ಸಹಾಯಕ ಯೋಜನಾಧಿಕಾರಿ ಶ್ರೀಹರ್ಷ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಆಯ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

Key words: Mandya, ZP, CEO, PDOs, good, progress. appreciation