ಮದ್ಯ, ಮಾದಕ ವಸ್ತು ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು- ಶರಣಪ್ಪ ಸಲಾದಪುರ

ಮೈಸೂರು, ಅಕ್ಟೋಬರ್,29,2025 (www.justkannada.in): ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಜಾಗೃತಿ ಮೂಡಿಸಿದರೆ, ಮಕ್ಕಳು ಜೀವನಪರ್ಯಂತ  ಆರೋಗ್ಯವಂತ ಜೀವನ ನಡೆಸಲು ಹಾಗೂ ಆರೋಗ್ಯವಂತ ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಹೇಳಿದರು.

ಮೈಸೂರು ದಸರಾ ವಸ್ತುಗಳ ಪ್ರದರ್ಶನ ಆವರಣದಲ್ಲಿ ಕರ್ನಾಟಕ ರಾಜ್ಯ ‌ಮದ್ಯಪಾನ ಸಂಯಮ ಮಂಡಳಿ ವತಿಯಿಂದ ನಿರ್ಮಿಸಿದ ಜಾಗೃತಿ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಶರಣಪ್ಪ ಸಲಾದಪುರ ಅವರು,  ಬೆಳೆದ ಮಕ್ಕಳ ಜೊತೆಗೆ ಬೆಳೆಯುವ ಮಕ್ಕಳಿಗೆ ಮದ್ಯ ಮತ್ತು ಮಾದಕ ವಸ್ತುಗಳಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು ಬಗ್ಗೆ ಅರಿವು ಮೂಡಿಸುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಹಲವು ವರ್ಷಗಳಿಂದ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಮೈಸೂರು ವಿಶ್ವ ವಿಖ್ಯಾತ ದಸರಾ ಸಂದರ್ಭದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಜಾಗೃತಿ ಮಳಿಗೆಯನ್ನು ನಿರ್ಮಿಸಿ ಯುವ ಜನರು ಮತ್ತು ಸಮಾಜವನ್ನು ಕಾಡುತ್ತಿರುವ ಮದ್ಯ ಸೇರಿದಂತೆ ಇತರೆ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಜಾಗೃತಿ ಮೂಡಿಸುತ್ತಾ ಬರುತ್ತಿದೆ. ವಸ್ತು ಪ್ರದರ್ಶನ ಆವರಣಕ್ಕೆ ಬರುವ ಜನಸಂಖ್ಯೆಯಲ್ಲಿ ಶೇ. 30 ರಿಂದ 40ರಷ್ಟು ಜನರು ಕರ್ನಾಟಕ ರಾಜ್ಯ ‌ಸಂಯಮ ಮಂಡಳಿಯ ಮಳಿಗೆಗೆ ಭೇಟಿ ನೀಡಿದರೆ ಸಾಕು, ಅವರಿಗೆ ಆಗುವ ಅರಿವಿನಿಂದ, ಮತ್ತಷ್ಟು ಜನರಿಗೆ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.

ಶಾಲ್ಲೆಯಲ್ಲಿನ ಪಠ್ಯ ಪುಸ್ತಕಗಳಲ್ಲಿ, ಮದ್ಯ ಮತ್ತು ಮಾದಕ ವಸ್ತುಗಳಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಪಠ್ಯ ಸೇರಬೇಕು. ತಾಯಿ ಮತ್ತು ಮಗುವಿನ ಮಧ್ಯ ನಡೆಯುವ ಸಂಭಾಷಣೆಯ ರೀತಿಯಲ್ಲಿ ಪಠ್ಯ ಇದ್ದರೆ, ಹೆಚ್ಚು ಪರಿಣಾಮಕಾರಿಯಾಗಿ ವಿಷಯ ಮಕ್ಕಳ ಮನಸ್ಸನ್ನು ಮುಟ್ಟುತ್ತದೆ.

ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ, ಅದರಲ್ಲೂ ನಗರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ದುಶ್ಚಟಗಳ ಆಕರ್ಷಣೆ ಬಲಿಯಾಗುತ್ತಿದ್ದು,  ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಪರಿಣಾಮಕಾರಿ ಪ್ರಚಾರ ಕಾರ್ಯಕ್ರಮ ಕೈಗೊಳ್ಳಬೇಕು. ಈ ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆ ಹೆಚ್ಚಿದೆ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಪರವಾನಗಿ ಪಡೆಯದೆ ಮದ್ಯವನ್ನು ಮಾರಾಟ ಮಾಡುವುದಲ್ಲದೇ, ನಕಲಿ ಮದ್ಯಗಳ ಮಾರಾಟದಿಂದ ಸರ್ಕಾರಕ್ಕೆ ಲೆಕ್ಕ ಇಲ್ಲದಷ್ಟು ತೆರಿಗೆ ಹಣ ವಂಚನೆ ಆಗುತ್ತಿದೆ. ಗಿರಾಣಿ ಅಂಗಡಿಗಳು ಸೇರಿದಂತೆ ಬೀಡಾ ಮಾರುವ ಅಂಗಡಿಗಳಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಮಾರಾಟ, ಮಹಿಳೆಯರು ಸೇರಿದಂತೆ ಎಳೆ ಮಕ್ಕಳಲ್ಲಿ ದುಷ್ಪರಿಣಾಮ ಬಿರುತ್ತಿದೆ. ನಕಲಿ ಮದ್ಯ ಮಾರಾಟದ ವ್ಯವಹಾರ ಕರ್ನಾಟಕ ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ನಡಿಯುತ್ತಿದ್ದು, ಜನ ಸಾಮಾನ್ಯರ ಆರೋಗ್ಯದ ಮೇಲೆ ತುಂಬಾ ದೊಡ್ಡ ರೀತಿಯಲ್ಲಿ ಆರೋಗ್ಯ ಸಮಸ್ಯೆ ಆಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಮಹೇಶ್ ಎನ್.ಎಸ್,  ಸೇರಿದಂತೆ ಇತರರು ಉಪಸ್ಥಿತರಿದ್ದರು.

Key words: Children, aware, alcohol, drugs, Sharanappa Saladapura, Mysore