ಮೈಸೂರು, ಅ.14, 2025: ಸರ್ವರನ್ನೂ ಸಮಾನರನ್ನಾಗಿ ಕಾಣುವ , ಸರ್ವರನ್ನೂ ಸದಾಚಾರ ಸಂಪನ್ನರಾಗಿ, ಪಂಚ ಶೀಲ ತತ್ತ್ವ ಗಳನ್ನು ಒಳಗೊಂಡ ಬೌದ್ಧ ಧರ್ಮದ ಸಾರವನ್ನು ಪ್ರತಿಯೊಬ್ಬರೂ ಅರಿಯಬೇಕೆಂದು ಮಾಯನ್ಮಾರ್ನ ಸಾಸನ ವಿಪುಲಾಮ ಬುದ್ಧ ತರಬೇತಿ ಕೇಂದ್ರದ ಪನಿಂದ ಸಯಡೋ ಮಾರ್ಗದರ್ಶನ.
ಕರ್ನಾಟಕ ರಾಜ್ಯ ಬಿಕ್ಕು ಸಂಘ, ರಾಜ್ಯ ಬೌದ್ಧ ಸಂಘ-ಸಂಸ್ಥೆಗಳು, ರಾಜ್ಯ ಅಂಬೇಡ್ಕರ್ವಾದಿ ಸಂಘಟನೆಗಳು, ವಿಶ್ವಮೈತ್ರಿ ಬುದ್ಧ ವಿಹಾರದ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧಮ್ಮ ಸ್ವೀಕರಿಸಿ 70 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮಂಗಳವಾರ ಆರಂಭವಾದ ಎರಡು ದಿನಗಳ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಸಹಬಾಳ್ವೆ , ಸಂತೋಷದಿಂದ ಜೀವನ ನಡೆಸಬೇಕಾದರೆ ಜೀವನದಲ್ಲಿ ಬುದ್ಧ ದಮ್ಮದ ತತ್ತ್ವಗಳನ್ನು ಪಾಲನೆ ಮಾಡಬೇಕು. ಈ ಹಾದಿಯಲ್ಲಿ ನಾವು ಬುದ್ಧನೆಂದರೆ ಯಾರು? ಬುದ್ದನೆಂದರೆ ಏನು ಎಂಬುದನ್ನು ತಿಳಿಯಬೇಕು. ಮೊದಲಿಗೆ ಸಿದ್ದಾರ್ಥನಾಗಿದ್ದ ಬುದ್ದರು ಜ್ಞಾನೋದಯವಾದ ನಂತರ ಬುದ್ದರಾಗಿ ಪರಿವರ್ತನೆಯಾದರು. ಅದಕ್ಕಾಗಿಯೇ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವ ಜ್ಞಾನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೊಳ್ಳೇಗಾಲದ ಜೇತವನ ಬುದ್ಧವಿಹಾರದ ಭಂತೆ ಮನೋರಕ್ಖಿತ ಮಾತನಾಡಿ, ಬೌದ್ಧ ಧರ್ಮದ ತತ್ತ್ವಗಳು ಹೇಳುವಂತೆ ಪ್ರಾಣ ಹತ್ಯೆ ಮಾಡದೇ ಜೀವರಕ್ಷಣೆ ಮಾಡಬೇಕು. ಕಳ್ಳತನ ಮಾಡದೇ ಶೀಲವಂತರಾಗಿ ಬದುಕುವುದು , ದಾನ ಮಾಡುವುದು, ದುಶ್ಚಟಗಳಿಂದ ದೂರವಿರುವುದನ್ನು ಎಚ್ಚರದಿಂದ ಪಾಲನೆ ಮಾಡಬೇಕೆಂದು ಸಲಹೆ ನೀಡಿದರು.
ಬೈಲ್ಕುಪ್ಪೆ ನಳಂದ ವಿಶ್ವವಿದ್ಯಾನಿಲಯದ ಧಮ್ಮಗುರು ರಾನ್ರಿಯನ್ ಪುಂಚೆ ಅವರು ಮಾತನಾಡಿ, ಮನುಷ್ಯರೂ ಒಂದೇ ಆಗಿದ್ದು ಪರಸ್ಪರ ಅರ್ಥ ಮಾಡಿಕೊಂಡು ಪ್ರೀತಿ, ತೆರೆದ ಮನಸ್ಸಿನಿಂದ ಬದುಕಬೇಕು. ನಾವು ಸತ್ಯ ಏನೆಂದು ತಿಳಿದುಕೊಳ್ಳಲು ಇಲ್ಲಿ ಸೇರಿದ್ದೇವೆ. ಹಾಗಾಗಿ ಹಿಂದೆ ಮಾಡದೇ ಇತರರನ್ನು ಕರುಣೆ, ಪ್ರೀತಿಯಿಂದ ಕಾಣಬೇಕು. ಆಗ ನಮಗೆ ನಿಜವಾದ ಸ್ವಾತಂತ್ರ್ಯ ದೊರೆಯುತ್ತದೆ ಎಂದರು.
ವಿಯಟ್ನಾಂನ ಗೋಕ್ಹೋನ್ ಬುದ್ಧ ವಿಹಾರದ ತಿಚ್ಮಿನ್ ಹಾನ್ ಅವರು ಮಾತನಾಡಿ, ವಿವಾಹದ ನಂತರ ಜೀವನವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಲು, ಆದ್ಯಾತ್ಮಿಕತೆ, ಧ್ಯಾನವನ್ನು ರೂಡಿಸಿಕೊಳ್ಳಿ ಎಂದರು.
ಅರುಣಾಚಲ ಪ್ರದೇಶ ಬುದ್ಧವಿಹಾರದ ಭಂತೇ ವಿಸುದ್ಧಶೀಲ ಮಾತನಾಡಿ, ಬುದ್ಧನ ಸಂದೇಶಗಳನ್ನು ಪಾಲನೆಗೆ ನಾವೆಲ್ಲರೂ ಸಾಗಬೇಕು. ಈ ನಿಟ್ಟಿನಲ್ಲಿ ಬುದ್ಧ ಅಂಬೇಡ್ಕರ್ ತತ್ತ್ವಗಳನ್ನು ಅನುಸರಿಸಬೇಕೆಂದು ಮಾರ್ಗದರ್ಶನ ನೀಡಿದರು.
ಕಲಬುರಗಿಯ ಬುದ್ಧವಿಹಾರದ ಭಂತೆ ವರಜ್ಯೋತಿ ಅವರು ಮಾತನಾಡಿ, ಸಂಸ್ಕಾರವಿಲ್ಲದ ಶಿಕ್ಷಣ, ಹಣ್ಣು ಕೊಡದ ಮರವಿದ್ದಂತೆ. ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಬುದ್ಧ , ಅಂಬೇಡ್ಕರ್ ನೀಡಿದ ದಮ್ಮವನ್ನು ಪಾಲನೆ ಮಾಡಬೇಕೆಂದರು.
ಲಾವೋಸ್ ಬುದ್ಧ ವಿಹಾರದ ರಾಂಡಿಸೋಟ್, ಕಾಮಗೆರೆ ಬುದ್ಧವಿಹಾರದ ಭಂತೆ ಧಮ್ಮಪಾಲ, ಕೊಳ್ಳೇಗಾಲದ ಭಂತೆ ಧಮ್ಮ ತಿಸ್ಸಾ, ಕಲಬುರಗಿಯ ಭಂತೆ ಅಮರಜ್ಯೋತಿ, ಭಂತೆ ಬೋಪ್ರಿಯಾ, ಮಾಜಿ ಮೇಯರ್ ಪುರುಷೋತ್ತಮ್ ಇನ್ನಿತರರು ಹಾಜರಿದ್ದರು.
ಬೌದ್ದ ಧರ್ಮದ ಮೇನಿಯಾ :
ಬೌದ್ಧ ಮಹಾಸಮ್ಮೇಳನದ ಅಂಗವಾಗಿ ಮಂಗಳವಾರ ಮಹಾರಾಜ ಕಾಲೇಜು ಮೈದಾನ ಬುದ್ಧಮಯವಾಗಿ ಪರಿವರ್ತನೆಯಾಗಿತ್ತು.
ನಾನಾ ಮಳಿಗೆಗಳಲ್ಲಿ ಬುದ್ಧನ ವಿಚಾರಗಳಿರುವ ಪುಸ್ತಕಗಳ ಮಾರಾಟ ಐದು ವೇದಿಕೆಗಳಲ್ಲಿ ಕವಿಗೋಷ್ಠಿ, ವಿಚಾರ ಸಂಕಿರಣ ಸೇರಿದಂತೆ ನಾನಾ ಕಾರ್ಯಕ್ರಮಗಳು ಜರುಗಿದವು. ಆವರಣದಲ್ಲಿ ನಿಲ್ಲಿಸಲಾಗಿದ್ದ ಬುದ್ಧನ ಪ್ರತಿಮೆ ಇರುವ ರಥ, ಅಂಬೇಡ್ಕರ್ ಭಾವ ಚಿತ್ರವಿರುವ ರಥದ ಮುಂದೆ ಶ್ವೇತವರ್ಣದ ಬುದ್ಧನ ಪ್ರತಿಮೆ ಮುಂಭಾಗದಲ್ಲಿ ಜನರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಅಲ್ಲದೇ ಆವರಣದಲ್ಲಿ ಬುದ್ಧನ ಅನುಯಾಯಿಗಳು, ಬುದ್ಧಪರ ಚಿಂತನೆ ಉಳ್ಳವರು ರಚಿಸಿರುವ ಹೇಳಿಕೆಗಳನ್ನು ದೊಡ್ಡದಾದ ಫಲಕಗಳಲ್ಲಿ ಬರೆಸಿ ಪ್ರದರ್ಶಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದವರು ಈ ವಿಚಾರಗಳನ್ನು ಓದುತ್ತ ವಿಚಾರ ಲೋಕದಲ್ಲಿ ವಿಹರಿಸಿದರು. ನಾನಾ ರಾಜ್ಯಗಳಿಂದ ಆಗಮಿಸಿದ ಬೌದ್ಧ ಧರ್ಮದ ಪಾಲಕರು ಬೌದ್ಧಧರ್ಮದ ಗುಂಗಿನಲ್ಲಿಯೇ ಕಾರ್ಯಕ್ರಮದಲ್ಲಿ ಭಾಗಿಯಾದರು.
500 ಮಂದಿ ಧರ್ಮ ಸ್ವೀಕಾರ :
ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ 500 ಕ್ಕೂ ಹೆಚ್ಚು ಮಂದಿ, ಬೌದ್ಧ ಧರ್ಮಗುರುಗಳಿಂದ ಬೌದ್ಧ ಧರ್ಮ ಸ್ವೀಕರಿಸಿದರು. ಅವರು ಧರ್ಮ ಪಾಲನೆಗಾಗಿ ಅನುಸರಿಸಬೇಕಾದ ನಿಯಮಗಳು ಬೌದ್ಧ ಧರ್ಮದ ತತ್ತ್ವಗಳನ್ನು ಬೋಧಿಸಿದರು.