ಮೈಸೂರು,ಜುಲೈ,26,2025 (www,justkannada.in): ಇಂದು 26ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ದಿವಸ್ ಆಗಿದ್ದು ಈ ಹಿನ್ನೆಲೆಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಏರ್ ಕಮಾಂಡರ್ ರವಿ ಅವರಿಗೆ ಉಪನ್ಯಾಸಕರ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಮೈಸೂರಿನ ದಟ್ಟಗಳ್ಳಿ ಬಡಾವಣೆಯಲ್ಲಿ ವಾಸವಾಗಿರುವ ಏರ್ ಕಮಾಂಡರ್ ರವಿ ಅವರ ನಿವಾಸಕ್ಕೆ ಭೇಟಿ ನೀಡಿದ ಉಪನ್ಯಾಸಕರ ಬಳಗದ ಸದಸ್ಯರು ರವಿ ಅವರಿಗೆ ಸನ್ಮಾನಿಸಿ ಅವರ ಕುಟುಂಬ ವರ್ಗಕ್ಕೆ ಭಾರತ್ ಮಾತಾ ಕಿ ಜೈ ,ವಂದೇ ಮಾತರಂ ಘೋಷಣೆ ಕೂಗುವುದರ ಮೂಲಕ ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಏರ್ ಕಮಾಂಡರ್ ರವಿ ಅವರು, ಇತ್ತೀಚೆಗೆ ಸೈನಿಕರ ವಿಚಾರದಲ್ಲಿ ದೇಶದಲ್ಲಿ ಹೆಚ್ಚಿನ ಪ್ರೀತಿ ವಿಶ್ವಾಸ ತೋರುತ್ತಿರುವುದು ನನಗೆ ಅತ್ಯಂತ ಸಂತಸದ ವಿಷಯ. ಭಾರತೀಯ ಸೈನ್ಯಕ್ಕೆ ಸೇರಲು ಬಯಸುವ ಯುವ ಪೀಳಿಗೆಗೆ ನನ್ನದೇ ಆದ ಹಲವು ಸಲಹೆಗಳನ್ನು ನೀಡಲು ಇಚ್ಚಿಸಿದ್ದು, ಅದನ್ನು ಯುವಪೀಳಿಗೆ ಸದ್ಬಳಕೆ ಮಾಡಿಕೊಳ್ಳಲಿ. ಮುಂದಿನ ಯುವ ಪೀಳಿಗೆ ಭಾವೈಕ್ಯತೆ ಮನೋಭಾವನೆಯಿಂದ ಬೆಳೆದು ದೇಶ ಕಟ್ಟುವಲ್ಲಿ ತಮ್ಮದೇ ಆದ ಪಾತ್ರವನ್ನು ನಿಭಾಯಿಸಿ ಭಾರತಾಂಬೆಯು ತಲೆ ಎತ್ತಿ ನಿಲ್ಲುವಂತೆ ಜವಾಬ್ದಾರಿಯುತ ನಾಗರಿಕರಾಗಿ ಬಾಳಬೇಕೆಂದು ಯುವ ಪೀಳಿಗೆಗೆ ಕಿವಿಮಾತು ಹೇಳಿದರು.
ಈ ವೇಳೆ ಮಂಡ್ಯ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನ್ಯಾಸಕರ ಸಂಘಟನೆಯ ಅಧ್ಯಕ್ಷ ಚನ್ನಕೃಷ್ಣ, ಪಾಂಡುಪುರ ತಾಲ್ಲೂಕಿನ ಉಪನ್ಯಾಸಕರ ಸಂಘದ ಅಧ್ಯಕ್ಷ ರಾಮಕೃಷ್ಣೇಗೌಡ, ನಿವೃತ್ತ ಸೈನಿಕರು ಹಾಲಿ ಬೆಳಗೊಳ ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ಪ್ರಸನ್ನ ಕುಮಾರ್, ಉಪನ್ಯಾಸಕ ದಯಾನಂದ್, ಶಿವಕುಮಾರ್, ಯೋಗರಾಜ್ ಆನಂದ್, ಡಾ. ಪುಟ್ಟಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೆ. ವಿವೇಕಾನಂದ ಅವರ ಆಪ್ತ ಸಹಾಯಕ ಮಂಜುನಾಥ್ ಹಾಗೂ ಇತರರು ಉಪಸ್ಥಿತರಿದ್ದರು.
Key words: Kargil Victory Day, Air Commander, felicitated, Mysore