ಬೆಂಗಳೂರು,ಜೂನ್,13,2025 (www.justkannada.in): ಮಾವಿನಹಣ್ಣುಗಳ ಬೆಲೆ ಮಾರುಕಟ್ಟೆಯಲ್ಲಿ ತೀವ್ರವಾಗಿ ಕುಸಿತವಾಗಿದ್ದು, ಮಾವು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಮಾವಿನಹಣ್ಣಿಗೆ ಬೆಂಬಲ ಬೆಲೆ ಘೋಷಿಸಿ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಮಾವು ಬೆಳಗಾರರು ಸಂಕಷ್ಟದಲ್ಲಿದ್ದಾರೆ. ಬೆಳೆಗಾರರಿಗೆ ಮಾರುಕಟ್ಟೆ, ಬೆಂಬಲ ಬೆಲೆ ಘೋಷಣೆ ಮಾಡಿ ಮಾವು ಬೆಳೆಗಾರರ ನೆರವಿಗೆ ಧಾವಿಸಬೇಕು. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಬೆಂಬಲ ಬೆಲೆ ಘೋಷಿಸಬೇಕು ಆಗ್ರಹಿಸಿದ್ದಾರೆ.
ಮೇ, ಜೂನ್ ತಿಂಗಳಿನಲ್ಲಿ ಮಾವಿನಹಣ್ಣಿನ ಮಾರುಕಟ್ಟೆ ಸಹಜವಾಗಿ ಪ್ರತಿ ಕ್ವಿಂಟಾಲ್ ಗೆ 12 ಸಾವಿರ ರೂ.ಗಳಿರುತ್ತದೆ. ಪ್ರಸ್ತುತ ಅದು 3 ಸಾವಿರಕ್ಕೆ ಕುಸಿದಿದೆ. ಕರ್ನಾಟಕ ರಾಜ್ಯ ಕೃಷಿ ಮೌಲ್ಯ ಆಯೋಗದ ವರದಿಯ ಪ್ರಕಾರ ಪ್ರತೀ ಕ್ವಿಂಟಾಲ್ ಮಾವು ಉತ್ಪಾದನೆಗೆ 5,460 ರೂ.ಗಳ ವೆಚ್ಚವಾಗುತ್ತಿದೆ. ಉತ್ಪಾದನೆ ಮತ್ತು ಮಾರುಕಟ್ಟೆ ದರದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಬೆಂಬಲ ಬೆಲೆಯನ್ನು ಘೋಷಿಸಿ ನೆಫೆಡ್ ಮತ್ತು ಎನ್ಸಿಸಿಎಫ್ ಮೂಲಕ ಮಾವು ಖರೀದಿಯನ್ನು ಆರಂಭಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
Key words: support price, mangoes, CM, Siddaramaiah, letter