ಮೈಸೂರು,ಜೂನ್,4,2025 (www.justkannada.in): ಮೈಸೂರು ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆ 99% ಯಶಸ್ವಿಯಾಗಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಸಂತಸ ವ್ಯಕ್ತಪಡಿಸಿದರು.
ಪ್ರಗತಿ ಪರಿಶೀಲನೆ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೆ. ಜೆ ಜಾರ್ಜ್, ಎಲ್ಲಾ ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸುತ್ತಿದ್ದೇವೆ. ಈಗಾಗಲೇ ಐದಾರು ಜಿಲ್ಲೆಗಳಲ್ಲಿ ಸಭೆ ನಡೆಸಿದ್ದೇವೆ. ಆ ಮೂಲಕ ಪ್ರತಿಯೊಂದು ಜಿಲ್ಲೆಯ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗ್ತಿದೆ. ಇಂದು ಮೈಸೂರು ಜಿಲ್ಲೆಯ ಸಭೆ ನಡೆಸಲಾಯಿತು. ನಮ್ಮ ಸರ್ಕಾರ ಕುಸುಮ್ C ಯೋಜನೆಯಡಿ 2400 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಗುರಿ ಹಾಕಿಕೊಂಡಿದೆ. ಸದ್ಯದಲ್ಲೇ ಗೌರಿಬಿದನೂರು ನಲ್ಲಿ ಸಿಎಂ ಸಿದ್ದರಾಮಯ್ಯ ಸೋಲಾರ್ ವಿದ್ಯುತ್ ಘಟಕ ಉದ್ಘಾಟನೆ ಮಾಡಲಿದ್ದಾರೆ ಎಂದರು.
ಮೈಸೂರು ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆ 99% ಯಶಸ್ವಿ ಆಗಿದೆ. ಗಿರಿಜನ ಹಾಡಿಗಳಿಗೆ ವಿದ್ಯುತ್ ಪೂರೈಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ವಿದ್ಯುತ್ ಬೇಡಿಕೆ ಹೆಚ್ಚಾದಾಗ ಸಮಸ್ಯೆ ಆಗ್ತಿದೆ. ಹಾಗಾಗಿ ರಾಜ್ಯಾದ್ಯಂತ 100 ಸಬ್ ಸ್ಟೇಷನ್ ಸ್ಥಾಪನೆ ಮಾಡುತ್ತೀವಿ. ಮೈಸೂರು ಜಿಲ್ಲೆಯಲ್ಲಿ 44 ಸಬ್ ಸ್ಟೇಷನ್ ಸ್ಥಾಪನೆ ಮಾಡುತ್ತೇವೆ. ಅಕ್ರಮ ಸಕ್ರಮ ಯೋಜನೆಯಡಿ ಹಣ ಕಟ್ಟಿರುವವರಿಗೆ 500 ಮೀಟರ್ ಒಳಗೆ ಬಂದರೆ ವಿದ್ಯುತ್ ಪೂರೈಕೆ ಕಾಮಗಾರಿ ಮಾಡಿಕೊಡ್ತೇವೆ. ಸೋಲಾರ್ ವಿದ್ಯುತ್ ಗೆ 80% ಸಬ್ಸಿಡಿ ನೀಡಲಾಗುವುದು. ಬೇಡಿಕೆಗೆ ತಕ್ಕಂತೆ ಟ್ರಾನ್ಸ್ ಫಾರ್ಮರ್ ಅಳವಡಿಸುತ್ತೇವೆ. ಪಂಪ್ ಸೆಟ್ ಬಳಕೆದಾರ ರೈತರಿಗೆ ಆಧಾರ್ ಲಿಂಕ್ ಮಾಡಿದಾಕ್ಷಣ ಬಿಲ್ ಬರೋದಿಲ್ಲ. ಎಷ್ಟು ಮಂದಿ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಪೂರೈಕೆ ಆಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಧಾರ್ ಕಾರ್ಡ್ ಲಿಂಕ್ ಮಾಡಲಾಗ್ತಿದೆ. 10 HP ವರೆಗೂ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಸಚಿವ ಕೆ ಜೆ ಜಾರ್ಜ್ ಹೇಳಿದರು.
Key words: Grihajyothi, 99% Successful, Mysore District,Minister, KJ George