ಗ್ರೇಟರ್ ಬೆಂಗಳೂರಿಗೆ ಶೀಘ್ರವೇ ಚುನಾವಣೆ – ಡಿಸಿಎಂ ಡಿಕೆ ಶಿವಕುಮಾರ್

ಮೈಸೂರು,ಮೇ,16,2025 (www.justkannada.in): ಬಿಬಿಎಂಪಿ ಬದಲು ನಿನ್ನೆಯಷ್ಟೆ ಜಾರಿಗೆ ಬಂದಿರುವ ಗ್ರೇಟರ್ ಬೆಂಗಳೂರಿಗೆ ಶೀಘ್ರದಲ್ಲೇ ಚುನಾವಣೆ ನಡೆಸುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ಗ್ರೇಟರ್ ಬೆಂಗಳೂರಿಗೆ ಶೀಘ್ರವೇ ಚುನಾವಣೆ ಮಾಡುತ್ತೇವೆ. ಕ್ಯಾಬಿನೆಟ್ ನಲ್ಲಿ ಎಲ್ಲರೂ ಒಪ್ಪಿದ್ದಾರೆ. ಶೀಘ್ರವೇ ಸಬ್ ಕಮಿಟಿ ಮಾಡುತ್ತೇವೆ ಎಂದರು.

ಗ್ರೇಟರ್ ಬೆಂಗಳೂರು ಅಲ್ಲ ಕ್ವಾಟರ್ ಬೆಂಗಳೂರು ಎಂಬ ಆರ್. ಅಶೋಕ್ ಟೀಕೆ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್,  ಮೊದಲೇ ವಿರೋಧ ಮಾಡಬಹುದಿತ್ತು. ಆದರೆ ಅಶೋಕ್  ವಿರೋಧ ಮಾಡಲಿಲ್ಲ. ವಿಪಕ್ಷ ನಾಯಕನಾಗಿ ಅಷ್ಟು ಟೀಕೆ ಮಾಡದಿದ್ರೆ ಹೇಗೆ? ಅವರಿಗೆ ನಾವು ಗೌರವ ಕೊಡುತ್ತೇವೆ

ಆದರೆ ಅವರೇ ಗ್ರೇಟರ್ ಬೆಂಗಳೂರಿಗೆ ಸಲಹೆಗಳನ್ನು ಕೊಟ್ಟಿದ್ದಾರೆ. ಯಾಕೆ ಕೊಟ್ರು ? ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ಆಗಿದೆ. ಇವರೆಲ್ಲರೂ ಒಪ್ಪಿದ್ದ್ದಾರೆ. ಈಗ ವಿಪಕ್ಷವಾಗಿ ಟೀಕೆ ಮಾಡುತ್ತಾರೆ . ಅವರ ಕೆಲಸ ಅವರು ಮಾಡಲಿ ಎಂದರು.

ರಾಮನಗರ ಹೆಸರು ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಅದು ಕೂಡ ಶೀಘ್ರವೇ ಆಗತ್ತೆ. ಶುಭ ಗಳಿಗೆ ಶುಭ ಮುಹೂರ್ತ ಬರುತ್ತಿದೆ. ರಾಮನಗರ ಜಿಲ್ಲೆ ಹೆಸರು ಶೀಘ್ರ ಬದಲಾವಣೆ ಎಂದು ಪರೋಕ್ಷವಾಗಿ ಹೇಳಿದರು.

ಯುದ್ಧ ವಿಚಾರದಲ್ಲಿ ಕ್ರೆಡಿಟ್ ವಾರ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್,  ಪಕ್ಷಕ್ಕಿಂತ, ವ್ಯಕ್ತಿಗಿಂತ ದೇಶ ಮುಖ್ಯ ಅಂತ ಹೇಳಿದ್ದೇವೆ. ಪ್ರಧಾನಿ ಅವರ ತೀರ್ಮಾನಕ್ಕೆ ಬದ್ಧ ಅಂತ ಹೇಳಿದ್ದೇವೆ. ಎಲ್ಲಾ ಪಕ್ಷಗಳ ಮೀಟಿಂಗ್ ಕರೀರಿ ಅಂತ ಮನವಿ ಮಾಡಿದ್ದೇವೆ. ಪಾರ್ಲಿಮೆಂಟ್ ಅಲ್ಲಿ ಹೇಗೆ ಕದನ ವಿರಾಮ ಆಯಿತು ಅಂತ ಹೇಳಿ ಅಂತ ಪ್ರಧಾನಿಗೆ ಮನವಿ ಮಾಡಿದ್ದೇವೆ. ಇಂದಿರಾ ಗಾಂಧಿ ಕಾಲದಿಂದ ಈ ರೀತಿ ಆಗಿರಲಿಲ್ಲ. ಹೊರಗಡೆ ದೇಶದವರು ನಮ್ಮ ದೇಶದ ವಿಷಯಕ್ಕೆ ಮೂಗು ತೂರಿಸುವುದು ಸರಿಯಲ್ಲ ಅನ್ನೋದು ಎಲ್ಲರ ಅಭಿಪ್ರಾಯ ಎಂದರು.

ಕಬಿನಿ ಅಲ್ಲಿ ಅಕ್ರಮ ರೆಸಾರ್ಟ್ ತಲೆ ಎತ್ತುತ್ತಿರುವ ವಿಚಾರ, ಆ ಬಗ್ಗೆ ನನಗೆ ಗೊತ್ತಿಲ್ಲ. ಅಕ್ರಮ ರೆಸಾರ್ಟ್ ಪಟ್ಟಿ ಮಾಡಿ ಕೊಡಿ. ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಸಿಎಂ ಆಗಲು ಶುಭ ಗಳಿಗೆ ಬರುತ್ತಿದಿಯಾ? ಎಂಬ ಮಾಧ್ಯಮದ ಪ್ರಶ್ನೆಗೆ  ತಮ್ಸಪ್ ಸಿಂಬಲ್ ತೋರಿಸಿ ನಗುತ್ತಾ ಡಿಕೆ ಶಿವಕುಮಾರ್ ತೆರಳಿದರು.

Key words: Elections, soon, Greater Bengaluru, DCM DK Shivakumar