ಮೈಸೂರು,ಮೇ,12, 2025 (www.justkannada.in): ನಮ್ಮ ಸರ್ಕಾರ ಬುದ್ದ, ಬಸವ, ಅಂಬೇಡ್ಕರ್, ಗಾಂಧಿ ಮತ್ತು ಸಂವಿಧಾನದ ಆಶಯಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜಿಲ್ಲಾಡಳಿತ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಮತ್ತು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಜಾತಿ-ಧರ್ಮದ ಸಹಿಷ್ಣತೆ ಇರುವ, ಸರ್ವರನ್ನೂ ಒಳಗೊಳ್ಳುವ ಪರಂಪರೆ ನಮ್ಮದು. ಮನುಷ್ಯರನ್ನು ಜಾತಿ-ಧರ್ಮದ ನೆಪದಲ್ಲಿ ವಿರೋಧಿಸುವವರು, ಪ್ರಾಣಿಗಳನ್ನು ಪ್ರೀತಿಸುತ್ತಾರೆ. ಪ್ರಾಣಿಗಳನ್ನು ಪ್ರೀತಿಸುವುದು ತಪ್ಪಲ್ಲ, ಆದರೆ ಮನುಷ್ಯರನ್ನು ವಿರೋಧಿಸುವುದು ತಪ್ಪು . ಆರ್ಥಿಕವಾಗಿ ಸರ್ವರಿಗೂ ಶಕ್ತಿ ಬಂದರೆ ಜಾತಿ ಹೋಗುತ್ತದೆ. ಬುದ್ದ, ಬಸವ ಅವರು ಜಾತಿ ಹೋಗಬೇಕೆಂದು ಹೋರಾಟ ಮಾಡಿದರೂ ಇನ್ನೂ ಜಾತಿ ಹೋಗಿಲ್ಲ. ಬಸವಣ್ಣರನ್ನು ಪ್ರೀತಿಸ್ತೀವಿ, ಪೂಜಿಸ್ತೀವಿ. ಆದರೆ ಬಸವಣ್ಣರನ್ನು ಪಾಲಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಹುಟ್ಡಿದ ಜಾತಿಯಲ್ಲೇ ಸಾಯಬೇಕು. ನಾವು ಮೇಲಕ್ಜೆ ಹೋಗುವಂತಿಲ್ಲ. ಜಾತಿ ಸಮಾಜಕ್ಕೆ ಚಲನೆ ಇಲ್ಲ. ವರ್ಗಕ್ಕೆ ಚಲನೆ ಇದೆ. ಎಲ್ಲರಿಗೂ ಶಿಕ್ಷಣ ಸಿಕ್ಕು , ಆರ್ಥಿಕವಾಗಿ, ಸಾಮಾಜಿಕವಾಗಿ ಅವಕಾಶಗಳು ಸಿಕ್ಕಾಗ ಮಾತ್ರ ಸಮಾಜಕ್ಕೆ ಚಲನೆ ಸಿಗುತ್ತದೆ . ಜಾತಿ ಅಸಮಾನತೆ ಕಾರಣಕ್ಕೆ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಸೇರಿ, ತಾನು ಹಿಂದೂವಾಗಿ ಹುಟ್ಟಿ ಹಿಂದೂವಾಗಿ ಸಾಯುವುದಿಲ್ಲ ಎಂದು ಘೋಷಿದಿದ್ದನ್ನು ಸ್ಮರಿಸಿದರು.
ಒಳಮೀಸಲಾತಿ ಕುರಿತಾದ ಗೊಂದಲ ನಿವಾರಿಸಲು ನಾಗಮೋಹನ್ ದಾಸ್ ಅವರ ಸಮಿತಿ ರಚಿಸಿದ್ದೇವೆ. ಸಮಿತಿಯ ಶಿಫಾರಸ್ಸಿನಂತೆ ದತ್ತಾಂಶ ಸಂಗ್ರಹಕ್ಕೆ ಸಮೀಕ್ಷೆ ಆರಂಭಿಸಿದ್ದೇವೆ ಎಂದರು. ಮೂರು ಹಂತಗಳಲ್ಲಿ ಸಮೀಕ್ಷೆ ನಡೆಯಲಿದೆ. ಈ ಸಮೀಕ್ಷೆ ಒಳ ಮೀಸಲಾತಿಯ ಎಲ್ಲಾ ಗೊಂದಲಗಳನ್ನು ನಿವಾರಿಸುತ್ತದೆ ಎನ್ನುವ ಭರವಸೆ ಇದೆ ಎಂದರು.
ಅಂಬೇಡ್ಕರ್ ಅವರು ಮೀಸಲಾತಿ ಕೊಡದೇ ಹೋಗಿದ್ದರೆ ನಾವು ಮನುಷ್ಯರಾಗಲು ಸಾಧ್ಯವೇ ಇರಲಿಲ್ಲ. ನಾನು ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ. ಶತ ಶತಮಾನಗಳ ಕಾಲ ಶೂದ್ರ ಸಮುದಾಯವನ್ನು ಶಿಕ್ಷಣದಿಂದ ದೂರ ಇಡಲಾಗಿತ್ತು. ಸಂವಿಧಾನದ ಕಾರಣದಿಂದ ಧಿಕ್ಷಣ ಪಡೆದು ಮುಖ್ಯಮಂತ್ರಿ ಆದೆ, ಇಲ್ಲದಿದ್ದರೆ ಕುರಿನೊ, ಎಮ್ಮೆನೊ ಕಾಯ್ಕಂಡು ಇರಬೇಕಿತ್ತು ಎಂದರು.
ನಮ್ಮ ಸ್ಥಿತಿಗೆ ಶಿಕ್ಷಣ ಮತ್ತು ಸಾಮಾಜಿಕ ಪರಿಸ್ಥಿತಿಗಳೇ ಕಾರಣವೇ ಹೊರತು ಹಣೆಬರಹ ಕಾರಣ ಅಲ್ಲ. ಪೂರ್ವ ಜನ್ಮದ ಪಾಪದ ಕಾರಣಕ್ಕೆ ಈಗ ಬಡತನ ಬಂದಿದೆ ಎನ್ನುವ ಕರ್ಮ ಸಿದ್ಧಾಂತ ಅಪ್ಪಟ ಸುಳ್ಳು. ಅದಕ್ಕೇ ಕರ್ಮ ಸಿದ್ದಾಂತ ತಿರಸ್ಕರಿಸಿ ಎಂದು ಬಸವಣ್ಣನವರು ಕರೆ ನೀಡಿದರು ಎಂದರು.
140 ಕೋಟಿ ಸವಲತ್ತು ವಿತರಣೆ
ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಇಂದು ಒಂದೇ ದಿನ 140 ಕೋಟಿ ಅಭಿವೃದ್ಧಿ ಕಾರ್ಯಗಳನ್ನು ಹೆಚ್.ಡಿ.ಕೋಟೆ ಜನಕ್ಕೆ ಅರ್ಪಿಸಿದ್ದೇವೆ.
ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ. ಅವರು ಸುಳ್ಳು ಹೇಳ್ತಾರೆ, ನೀವು ನಂಬ್ತೀರಿ. ಈ ಬಾರಿ 8000 ಕೋಟಿ ಶಾಸಕರ ಅನುದಾನ, ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಟ್ಟಿದ್ದೇವೆ. 55 ಸಾವಿರ ಕೋಟಿ ಗ್ಯಾರಂಟಿ ಯೋಜನೆಗಳಿಗೆ ತೆಗೆದಿರಿಸಿದ್ದೀವಿ. 80 ಸಾವಿರ ಕೋಟಿ ಬಂಡವಾಳ ವೆಚ್ಚಕ್ಕೆ ಮೀಸಲಿರಿಸಿಟ್ಟೇವೆ. ಈ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಬಿಜೆಪಿಯವರು ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳ್ತಾರೆ. ಹಾಲಿನ ದರ 4ರೂ ಹೆಚ್ಚು ಮಾಡಿ ಇದರಲ್ಲಿ ಒಂದೂ ರೂಪಾಯಿಯನ್ನೂ ನಾವು ಇಟ್ಟುಕೊಳ್ಳದೆ ಅಷ್ಟನ್ನೂ ರೈತರಿಗೆ, ಗೋಸಾಕಾಣಿಕೆದಾರರಿಗೆ ವರ್ಗಾಯಿಸಿದ್ದೇವೆ. ಆದರೆ ಬಿಜೆಪಿ ಚಿನ್ನ, ಬೆಳ್ಳಿ, ಡೀಸೆಲ್, ಪೆಟ್ರೋಲ್ , ಅಡುಗೆ ಅನಿಲ, ಬೇಳೆ, ಗೊಬ್ಬರ, ಎಣ್ಣೆ ಕಾಳು ಸೇರಿ ಎಲ್ಲದರ ಬೆಲೆ ಹೆಚ್ಚಿಸಿದ್ದು ಕೇಂದ್ರದ ಬಿಜೆಪಿ ಸರ್ಕಾರ, ಮೋದಿ ಸರ್ಕಾರ. ಆದ್ದರಿಂದ ಜನಾಕ್ರೋಶ ಇರುವುದು ಬಿಜೆಪಿ ಸರ್ಕಾರದ ಮೋದಿಯ ವಿರುದ್ಧವೇ ಹೊರತು ನಮ್ಮ ಕಾಂಗ್ರೆಸ್ ಸರ್ಕಾರದ ಮೇಲಲ್ಲ ಎಂದು ಬಿಜೆಪಿಯ ಜನಾಕ್ರೋಶಯಾತ್ರೆಯನ್ನು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
Key words: Our government, Buddha, Basava, Ambedkar, Gandhi, CM Siddaramaiah