Sunday, August 23, 2026

BDA Apartments

Home Crime ನಿಂತಿದ್ದ ಕೆಎಸ್ ಆರ್ ಟಿಸಿ ಬಸ್ ಗೆ ಕಾರು ಡಿಕ್ಕಿ:  ನಾಲ್ವರು ಸಾವು.

ನಿಂತಿದ್ದ ಕೆಎಸ್ ಆರ್ ಟಿಸಿ ಬಸ್ ಗೆ ಕಾರು ಡಿಕ್ಕಿ:  ನಾಲ್ವರು ಸಾವು.

ನಾಗಮಂಗಲ,ಸೆಪ್ಟಂಬರ್,27,2023(www.justkannada.in):  ರಸ್ತೆ ಬದಿ ನಿಂತಿದ್ದ ಕೆಎಸ್ ಆರ್ ಟಿಸಿ ಬಸ್ ಗೆ ಕಾರೊಂದು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ಬಳಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಭವಿಸಿದೆ.

ಮೃತರನ್ನು ಬೆಂಗಳೂರು ನಿವಾಸಿಗಳಾದ ಬೆಂಡಿಗನಹಳ್ಳಿ ನಮಿತಾ, ಇನ್ಫೋಸಿಸ್ ನೌಕರ ರಾಜಸ್ಥಾನದ ಪಂಕಜ್ ಶರ್ಮಾ, ವಂಶಿಕೃಷ್ಣ ಹೊಸಕೋಟೆ ಹಾಗೂ ರಘುನಾಥ್ ಭಜಂತ್ರಿ ಧಾರವಾಡ ಎಂದು ಗುರುತಿಸಲಾಗಿದೆ.

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆ ಎದುರು  ಅಪಘಾತ ಸಂಭವಿಸಿದೆ.  ಪ್ರಯಾಣಿಕರನ್ನು ಇಳಿಸಲು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕೆಎಸ್ ಆರ್ ಟಿಸಿ ಬಸ್ಸಿಗೆ ಹಾಸನ ಕಡೆಯಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ಮೂವರು ಪುರುಷರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಕಾರಿನ ಮುಂದಿನ ಅರ್ಧ ಭಾಗ ಬಸ್ಸಿನೊಳಗೆ ನುಗ್ಗಿದೆ. ಸ್ಥಳಕ್ಕೆ ಬೆಳ್ಳೂರು ಠಾಣೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ  ದಾಖಲಿಸಿಕೊಂಡಿದ್ದಾರೆ.

Key words: car- collides – KSRTC –bus- four death.