Friday, July 31, 2026

BDA Apartments

Home Front Page ಆರೋಗ್ಯವಂತ ಸಮಾಜದ ಉಳಿವಿಗೆ ಪುಸ್ತಕ ಅಗತ್ಯ: ಸಿಎಂ ಸಿದ್ದರಾಮಯ್ಯ

ಆರೋಗ್ಯವಂತ ಸಮಾಜದ ಉಳಿವಿಗೆ ಪುಸ್ತಕ ಅಗತ್ಯ: ಸಿಎಂ ಸಿದ್ದರಾಮಯ್ಯ

ಪ್ರಕಾಶಕರ ಸಮಸ್ಯೆ ಬಗೆಹರಿಸಲು ಭರವಸೆ

ಬೆಂಗಳೂರು, ಜೂನ್ 04, 2023 (www.justkannada.in): ಪುಸ್ತಕ ಆರೋಗ್ಯವಂತ ಸಮಾಜದ ಅನಿವಾರ್ಯ ಅಂಗ. ಹಾಗಾಗಿ ಪ್ರಕಾಶನ ರಂಗದ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅದರ ಪರಿಹಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮನ್ನು ಭೇಟಿ ಮಾಡಿದ ಪ್ರಕಾಶಕರ ನಿಯೋಗಕ್ಕೆ ಭರವಸೆ ನೀಡಿದರು.

ಇಂದು ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ನೇತೃತ್ವದ ಪ್ರಕಾಶಕರ ನಿಯೋಗವನ್ನು ಭೇಟಿ ಮಾಡಿದ ಮುಖ್ಯಮಂತ್ರಿಗಳು ಪುಸ್ತಕೋದ್ಯಮದ ಮುಂದಿರುವ ಸಮಸ್ಯೆ ಹಾಗೂ ಸವಾಲುಗಳನ್ನು ವಿವರವಾಗಿ ಆಲಿಸಿದರು.

ಮುಖ್ಯಮಂತ್ರಿಗಳು ಮಂಡಿಸಲು ಉದ್ದೇಶಿಸಿರುವ ಬಜೆಟ್ ನಲ್ಲಿ 25 ಕೋಟಿ ರೂಗಳನ್ನು ಒದಗಿಸುವಂತೆ ನಿಯೋಗ ಮನವಿ ಮಾಡಿತು. ಸಂಘದ ಅಧ್ಯಕ್ಷರಾದ ನಿಡಸಾಲೆ ಪುಟ್ಟಸ್ವಾಮಯ್ಯ ಹಾಗೂ ಕಾರ್ಯದರ್ಶಿ ಆರ್ ದೊಡ್ಡೇಗೌಡ ಅವರು ಮಾತನಾಡಿ ಇದು ಅನುಷ್ಟಾನಗೊಂಡಲ್ಲಿ ಸರಕಾರ ಒದಗಿಸಿರುವ ಅನೇಕ ಭಾಗ್ಯಗಳ ಜೊತೆಗೆ ‘ಜ್ಞಾನ ಭಾಗ್ಯ’ವನ್ನೂ ಒದಗಿಸಿದಂತಾಗುತ್ತದೆ ಎಂದು ಗಮನ ಸೆಳೆದರು.

ಪುಸ್ತಕಗಳ ಸಗಟು ಖರೀದಿ ಯೋಜನೆಯನ್ನು ಕಡೆಗಣಿಸಲಾಗಿದ್ದು ಇದರಿಂದ ರಾಜ್ಯದ ಓದುಗರು ಜ್ಞಾನ ವಂಚಿತರಾಗುತ್ತಿದ್ದಾರೆ. ಕಳೆದ ಮೂರು ವರ್ಷದಿಂದ ಸ್ಥಗಿತವಾಗಿರುವ ಸಗಟು ಖರೀದಿ ಯೋಜನೆಗೆ ಚಾಲನೆ ನೀಡಬೇಕು ಹಾಗೂ 500 ಪ್ರತಿಗಳನ್ನು ಕೊಳ್ಳಬೇಕು.

ಬೆಂಗಳೂರು ಮಹಾನಗರಪಾಲಿಕೆ 600 ಕೋಟಿ ರೂಗಳನ್ನು ಗ್ರಂಥಾಲಯ ಕರ ಎಂದು ಸಂಗ್ರಹಿಸಿದ್ದು ಅದನ್ನು ಸಂಬಂಧಿಸಿದ ಇಲಾಖೆಗೆ ವರ್ಗಾಯಿಸಿಲ್ಲ. ಇದು ಪ್ರಕಾಶನ ರಂಗದ ಸಮಸ್ಯೆ ಮತ್ತಷ್ಟು ಉಲ್ಬಣಿಸಲು ಕಾರಣವಾಗಿದೆ. ಉಕ್ರೇನ್ ಯುದ್ಧದಿಂದಾಗಿ ಉಂಟಾದ ನ್ಯೂಸ್ ಪ್ರಿಂಟ್ ಸಮಸ್ಯೆಯಿಂದ ಮುದ್ರಣ ರಂಗದ ವೆಚ್ಚ ಹಲವು ಪಟ್ಟು ಏರಿದೆ. ಈಗಿರುವ ಬೆಲೆಯ ಮೇಲೆ ಪುಟಕ್ಕೆ 40 ಪೈಸೆ ಹೆಚ್ಚಳವನ್ನು ಮಾಡಬೇಕಾದ ಅಗತ್ಯವಿದೆ. ಇವೆಲ್ಲವನ್ನೂ ಗಮನಿಸಿ ಸರಕಾರ ಪ್ರಕಾಶಕರ ನೆರವಿಗೆ ಬರಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನಿಯೋಗದಲ್ಲಿ ಪ್ರಕಾಶಕರ ಸಂಘದ ಅಧ್ಯಕ್ಷರಾದ ನಿಡಸಾಲೆ ಪುಟ್ಟಸ್ವಾಮಯ್ಯ, ಕಾರ್ಯದರ್ಶಿ ಆರ್ ದೊಡ್ಡೇಗೌಡ, ಹಿರಿಯ ಪ್ರಕಾಶಕರಾದ ನಿತಿನ್ ಶಾ, ಹೆಚ್ ಕೆ ಲಕ್ಷ್ಮೀನಾರಾಯಣ ಅಡಿಗ, ಜಿ ಎನ್ ಮೋಹನ್, ಮಾನಸ, ಪದಾಧಿಕಾರಿಗಳಾದ ಬಿ ಕೆ ಸುರೇಶ್, ಚಂದ್ರಕೀರ್ತಿ ಬಿ ಎಂ, ಕೆ ಎಸ್ ಮುರಳಿ ಅವರು ಭಾಗವಹಿಸಿದ್ದರು.