Thursday, August 27, 2026

BDA Apartments

Home Front Page ಪ್ರಮಾಣವಚನಕ್ಕೂ ಮುನ್ನ ತಂದೆಯನ್ನು ಸ್ಮರಿಸಿದ ಸಚಿವ ಮಧು ಬಂಗಾರಪ್ಪ.

ಪ್ರಮಾಣವಚನಕ್ಕೂ ಮುನ್ನ ತಂದೆಯನ್ನು ಸ್ಮರಿಸಿದ ಸಚಿವ ಮಧು ಬಂಗಾರಪ್ಪ.

ಬೆಂಗಳೂರು, ಮೇ,27,2023(www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಸಚಿವ ಸಂಪುಟ ಇತ್ತೀಚೆಗೆ ರಚನೆಯಾಗಿದ್ದು,ಸಿದ್ದರಾಮಯ್ಯ ಸಂಪುಟಕ್ಕೆ ಎಸ್.ಮಧು ಬಂಗಾರಪ್ಪ ಸೇರ್ಪಡೆಯಾಗಿದ್ದಾರೆ.

ಅಂದಹಾಗೆ  ಮಧು ಬಂಗಾರಪ್ಪ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪರ ಪುತ್ರರಾಗಿದ್ದು,ಸೊರಬದ ಶಾಸಕರೂ ಆಗಿದ್ದಾರೆ‌. ಎರಡು ಬಾರಿ ಸೊರಬದ ಶಾಸಕರಾಗಿರುವ ಮಧುಬಂಗಾರಪ್ಪ ತಂದೆತಾಯಿಯರ ಮುದ್ದಿನ ಮಗ.  ಸಹೋದರಿಯರ ಪ್ರೀತಿಯ  ಸಹೋದರ ಅಲ್ಲದೇ ರಾಜ್ ಕುಟುಂಬದ ಆಪ್ತ ಅತ್ಮೀಯ ಬಂಧುವೂ ಆಗಿದ್ದಾರೆ‌. ತಂದೆಗೆ ತಕ್ಕಮಗ ಎಂದು ಸೈ ಎನಿಸಿಕೊಂಡಿರುವ ಮಧು ಬಂಗಾರಪ್ಪ ಮಾಜಿ ಮುಖ್ಯಮಂತ್ರಿ ದಿ‌.ಎಸ್.ಬಂಗಾರಪ್ಪರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿದ್ದಾರೆ. ಅದೇ ಜನಪರ ಕಾಳಜಿ ರೈತಪರ ಪ್ರೇಮಿ,ನೊಂದವರ ಆಶಾಕಿರಣದಂತೆ ಹೆಜ್ಜೆಇಟ್ಟಿದ್ದಾರೆ.

ಇಂದು ಸಂಪುಟ ವಿಸ್ತರಣೆಯಲ್ಲಿ ಮಧುಬಂಗಾರಪ್ಪರಿಗೂ ಸ್ಥಾನಮಾನ ದೊರಕಿದ್ದು ಸಂಪುಟ ಸೇರುತ್ತಿದ್ದಾರೆ. ಯಾವುದೇ ಶುಭಕಾರ್ಯ ಮಾಡುವ ಮುನ್ನ ತಂದೆತಾಯಿಯರ ಆಶೀರ್ವಾದ ಪಡೆಯುವುದು ವಾಡಿಕೆ. ದೈಹಿಕವಾಗಿ ಇಲ್ಲದಿದ್ದರೂ ಭೌತಿಕವಾಗಿ ತಮ್ಮೊಂದಿಗೆ   ಸದಾ ಇದ್ದಾರೆ ಎನ್ನುತ್ತಾರೆ ಮಧುಬಂಗಾರಪ್ಪ. ಅನ್ನದಾತರಿಗಾಗಿ ಪಾದಯಾತ್ರೆ,ಬಗರ್‌ ಹುಕುಂ ಸಾಗುವಳಿದಾರರ ಪರ‌ಹೋರಾಟ ಹೀಗೆ ನೊಂದವರಿಗೆ ನಾನಿದ್ದೇನೆ ಎಂಬ ಆಶಾಸ್ಫೂರ್ತಿ ಈ ಮಧು ಬಂಗಾರಪ್ಪ. ಪ್ರಮಾಣ ವಚನಕ್ಕೂ ಮುನ್ನ ನಿವಾಸದಲ್ಲಿ ತಂದೆತಾಯಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ತಂದೆ ಬಂಗಾರಪ್ಪರನ್ನು ಒಂದು ಕ್ಷಣ ಸ್ಮರಿಸಿ ಧನ್ಯತಾಭಾವ ತೋರಿದರು. ಸದಾಶಿವ ನಗರದ ಬಳಿ ಅಭಿಮಾನಿಗಳು ಕಾರ್ಯಕರ್ತರ ಸಂಭ್ರಮ ಮನೆ ಮಾಡಿತ್ತು. ಬೆಂಬಲಿಗರು ಹಾಗೂ ಕಾರ್ಯಕರ್ತರ ಆಗಮಿಸಿ ಶುಭಾಶಯ ಕೋರಿ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದರು.

ಬೆಂಗಳೂರಿನ‌ ಸದಾಶಿವ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಧು ಬಂಗಾರಪ್ಪ, ಮತ ನೀಡಿದ ಹಾಗೂ ನೀಡದ ಎಲ್ಲಾ ಸೊರಬ ಮತದಾರರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ಯಾವುದೇ ಹುದ್ದೆ ನಿಭಾಯಿಸಲು ಸಿದ್ದ.

ಮುಂಬರಲಿರುವ ಲೋಕಸಭಾ ಚುನಾವಣೆಗೆ ಪಕ್ಷದಿಂದ‌ ಸಿದ್ಧತೆಗಳು ಸಹ  ನಡೆಯುತ್ತಿವೆ. ಸಚಿವ ಸ್ಥಾನ ಸಿಗುತ್ತದೆ ಎಂದು ನನಗೆ ವಿಶ್ವಾಸವಿತ್ತು. ವರಿಷ್ಠರು ಈಗ ಜವಾಬ್ದಾರಿ ನೀಡಿದ್ದಾರೆ. ಶಾಸಕರೆಲ್ಲರಿಗೂ ಸಚಿವರಾಗುವ ಅರ್ಹತೆ ಇರುತ್ತದೆ. ವರಿಷ್ಠರು ಅಳೆದುತೂಗಿ ಸಚಿವ ಸ್ಥಾನ ನೀಡಿದ್ದಾರೆ. ಪಕ್ಷ ನೀಡಿದ ಜವಾಬ್ದಾರಿಯನ್ನು ಕರ್ತವ್ಯವನ್ನು  ನಿಷ್ಠೆಯಿಂದ ನಿಭಾಯಿಸುತ್ತೇನೆ‌. ಸೊರಬ ಜನತೆಗೆ ಕಷ್ಟವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

Key words: Minister- Madhu Bangarappa -remembered -his father – taking- oath…