ಪ್ರಧಾನಿ ಮೋದಿ ಅಂದ್ರೆ ಮಲ್ಲಿಕಾರ್ಜುನ ಖರ್ಗೆಗೆ ನಿದ್ದೆ ಬರಲ್ಲ: ಈ ಬಾರಿ ಕಾಂಗ್ರೆಸ್ ಮುಕ್ತ ಕರ್ನಾಟಕ-  ಸಿಎಂ ಬಸವರಾಜ ಬೊಮ್ಮಾಯಿ.

ಕಲಬುರಗಿ,ಏಪ್ರಿಲ್,28,2023(www.justkannada.in):  ಪ್ರಧಾನಿ ನರೇಂದ್ರ ಮೋದಿ ಅಂದರೇ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಿದ್ದೆ ಬರಲ್ಲ. ಈ ಬಾರಿ ಕಾಂಗ್ರೆಸ್ ಮುಕ್ತ ಕರ್ನಾಟಕವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಗುಡುಗಿದರು.

ಪ್ರಧಾನಿ ನರೇಂದ್ರ ಮೋದಿ ವಿಷಸರ್ಪವಿದ್ದಂತೆ ಎಂಬ ಮಲ್ಲಿಕಾರ್ಜುನಖರ್ಗೆ ಹೇಳಿಕೆ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪ್ರಧಾನಿ ಮೋದಿಯವರನ್ನು ಖರ್ಗೆ ವಿಷದ ಸರ್ಪ ಎಂದು ಹೇಳಿದ್ದಾರೆ.  ಸರ್ಪ ಶಿವನ ಕೊರಳಲ್ಲಿ ಇರುತ್ತದೆ. ಜಗತ್ತಿನ ಎಲ್ಲಾ ವಿಷವನ್ನು ಕುಡಿದ ನೀಲಕಂಠನ ಸಂಕೇತ. ಪ್ರಧಾನಿ ಮೋದಿ ಭಯೋತ್ಪಾದನೆಯನ್ನು ಹೊಡೆದೋಡಿಸಿದ್ದಾರೆ. ಸಶಕ್ತ ಭಾರತ ಕಟ್ಟಲು ಅನೇಕ ರೀತಿಯ ವಿಷ ಕುಡಿದಿದ್ದಾರೆ. ಪ್ರಧಾನಿ ಮೋದಿ ಅನೇಕ ರೀತಿಯ ವಿಷ ಕುಡಿದು ನೀಲಕಂಠ ಆಗಿದ್ದಾರೆ. ಮೋದಿ ನೇತೃತ್ವದಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ. ರಾಜ್ಯದಲ್ಲೂ ಕಾಂಗ್ರೆಸ್​ ಸೋಲುವ ಸ್ಥಿತಿಗೆ ಬಂದಿದೆ ಎಂದು ವಾಗ್ದಾಳಿ ನಡೆಸಿದರು.

ಈ ಬಾರಿ ಕಾಂಗ್ರೆಸ್ ಮುಕ್ತ ಕರ್ನಾಟಕವಾಗುತ್ತದೆ. ಮೀಸಲಾತಿ ನೀಡುವಾಗ ಜೇನುಗೂಡಿಗೆ ಕಲ್ಲು ಹಾಕಬೇಡಿ ಅಂತ ಕಾಂಗ್ರೆಸ್ ಹೇಳಿತ್ತು. ನಾನು ಉತ್ತರ ಕರ್ನಾಟಕದ ಗಂಡು ಮೆಟ್ಟಿನ ನಾಡಿನಿಂದ ಬಂದಿದ್ದೇನೆ. ಜೇನು ಕಚ್ಚಿದ್ದರೂ ಪರವಾಗಿಲ್ಲಾ ಅಂತ ತಿಳಿದು ಮೀಸಲಾತಿ ಜಾರಿಗೊಳಿಸಿದ್ದೇನೆ. ಕಾಂಗ್ರೆಸ್ ದಿನಕ್ಕೊಂದು ಗ್ಯಾರಂಟಿ ನೀಡುತ್ತಿದ್ದಾರೆ. ಬಸ್​ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಮಾಡಿದ್ದಾರೆ. ಈ ಯೋಜನೆಯನ್ನು ಈಗಾಗಲೇ ನಾವು ಬಜೆಟ್​ನಲ್ಲಿ ಘೋಷಣೆ ಮಾಡಿದ್ದೇವೆ. ರಾಹುಲ್ ಗಾಂಧಿಗೆ ಇವರು ಹೇಳಿದ್ದು ಅವರಿಗೆ ಕೇಳಲ್ಲಾ. ಮೇ 10 ರವರಗೆ ಮಾತ್ರ ಕಾಂಗ್ರೆಸ್ ಗ್ಯಾರಂಟಿ, ನಂತರ ಗಳಗಂಟಿ ಆಗುತ್ತದೆ ಎಂದು ವ್ಯಂಗ್ಯವಾಡಿದರು.

Key words: PM Modi-Mallikarjuna kharge-CM-Basavaraja bommai