Thursday, September 17, 2026

BDA Apartments

Home Front Page ಕಳ್ಳಬಟ್ಟಿ ಸಾರಾಯಿ ಮಾರುತಿದ್ದ ವ್ಯಕ್ತಿ ರಮೇಶ್ ಜಾರಕಿಹೊಳಿ ಇನ್ಸ್ ಪೆಕ್ಟರ್ ರನ್ನು ಕೊಲೆ ಮಾಡಿದ್ದರು- ಎಂ.ಲಕ್ಷ್ಮಣ್...

ಕಳ್ಳಬಟ್ಟಿ ಸಾರಾಯಿ ಮಾರುತಿದ್ದ ವ್ಯಕ್ತಿ ರಮೇಶ್ ಜಾರಕಿಹೊಳಿ ಇನ್ಸ್ ಪೆಕ್ಟರ್ ರನ್ನು ಕೊಲೆ ಮಾಡಿದ್ದರು- ಎಂ.ಲಕ್ಷ್ಮಣ್ ಗಂಭೀರ ಆರೋಪ.

ಮೈಸೂರು,ಜನವರಿ,31,2023(www.justkannada.in): ರಮೇಶ್ ಜಾರಕಿಹೊಳಿ ನಮ್ಮ ಪಕ್ಷದ ಅಧ್ಯಕ್ಷರ ಮೇಲೆ ಹಿಟ್ ಅಂಡ್ ರನ್ ರೀತಿ ಆರೋಪ ಮಾಡಿದ್ದಾರೆ. ಈತ ಕಳ್ಳಬಟ್ಟಿ ಸಾರಾಯಿ ಮಾರುತಿದ್ದ ವ್ಯಕ್ತಿ. ತಡೆಯಲು ಬಂದ ಇನ್ಸ್ ಪೆಕ್ಟರ್  ಇಂಗಳೆ ಎಂಬುವವರನ್ನ 1988 ಕೊಲೆ ಮಾಡಿದ್ದಾರೆ. ಈತ ಬೆಳಗಾವಿಯ ದೊಡ್ಡ ಗೂಂಡ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗಂಭೀರ ಆರೋಪ ಮಾಡಿದರು.

ಮೈಸೂರಿನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ರಮೇಶ್ ಜಾರಕಿಹೊಳಿಯ ಮೂಲ ಹೆಸರು ರಾಮಪ್ಪ ಲಕ್ಷಪ್ಪ ಜಾರಕಿಹೊಳಿ. ಇವರು ಅವರ ಹೆಸರನ್ನು ರಮೇಶ್ ಜಾರಕಿಹೊಳಿ ಅಂತ ಮಾಡಿಕೊಂಡಿದ್ದಾರೆ. ಕಾನೂನು ಬಾಹಿರವಾಗಿ ಹೆಸರು ಬದಲಾಯಿಸಿಕೊಂಡಿದ್ದಾರೆ. ಡಿ.ಕೆ ಶಿವಕುಮಾರ್ ಹರಿದ ಚಪ್ಪಲಿ ಹಾಕ್ತಿದ್ದ ಅಂತ ಹೇಳಿದ್ದಾರೆ. ಗೋಕಾಕ್ ಪೋಲೀಸ್ ಠಾಣೆಯಲ್ಲಿ ಈತನ ಮೇಲೆ 300 ಕ್ಕೂ ಹೆಚ್ಚು ಕೇಸ್ ಇವೆ. ಕೋಮು ಗಲಭೆ, ಜನರನ್ನ ಎದರಿಸಿ ಬೆದರಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದ ವ್ಯಕ್ತಿ. ಡಿಕೆ ಶಿವಕುಮಾರ್ ಗೆ ಲಂಡನ್ ಮತ್ತು ದುಬೈ ನಲ್ಲಿ ಮನೆ ಇದೆ ಅಂತ ಆರೋಪ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಬೇನಾಮಿ ಆಸ್ತಿ ಬೆಂಗಳೂರು ಮುಂಬೈ ಎಲ್ಲಾ ಕಡೆ ಇದೆ. ಸೌಭಾಗ್ಯ ಶುಗರ್ ನಿಂದ 860 ಕೋಟಿ ರೂ ವನ್ನ ಸುಮಾರು 9 ಬ್ಯಾಂಕ್ ಗಳಲ್ಲಿ ಸಾಲ ಪಡಿದಿದ್ದಾರೆ. ಶುಗರ್ ಪ್ಯಾಕ್ಟರಿ ದಿವಾಳಿಯಾಗಿದೆ ಅಂತ ತೋರಿಸಿದ್ದಾರೆ. 4 ಕೋಟಿ ರೂ.  ಕಾರು ಖರೀಸಿದ್ದೀರಿ. ಇದಕ್ಕೆಲ್ಲಾ ನಿಮಗೆಲ್ಲಿ ಬಂತು ಹಣ ಎಂದು ಪ್ರಶ್ನಿಸಿದರು.

ರಮೇಶ್ ಜಾರಕಿಹೊಳಿ ಇದನ್ನ ಹೇಳುತ್ತಿಲ್ಲ. ಇದರ ತಯಾರಕರು ಮತ್ತು ಸ್ಕ್ರಿಪ್ಟ್ ಬಿಜೆಪಿಯವರದು. ಬಿಜೆಪಿಯವರು ನಿಮ್ಮನ್ನ ಗನ್ ಪಾಯಿಂಟ್ನಲ್ಲಿ ಇಟ್ಟು ಮಾತಾಡಲಿಕ್ಕೆ ಕಳಿಸಿದ್ದಾರೆ. 850 ಕೋಟಿ ರೂ ಹಣವನ್ನ ರೈತರಿಗೆ ಮೋಸ ಮಾಡಿದ್ದಾರೆ. ಇದಕ್ಕೆ ಸರ್ಕಾರ ಒಂದೇ ಒಂದು ನೋಟೀಸ್ ಕೂಡ ಕೊಟ್ಟಿಲ್ಲ. ಡಿಕೆ ಶಿವಕುಮಾರ್ ಬಗ್ಗೆ ದಾಖಲೆ  ಇದ್ದರೆ ಬಿಡುಗಡೆ ಮಾಡಿ. ರಮೇಶ್ ಜಾರಕಿಹೊಳಿಯಿಂದ ಹಲವಾರು ಹೆಣ್ಣುಮಕ್ಕಳ ಜೀವನ ಹಾಳಾಗಿದೆ.  ಮುಂದಿನ ದಿನಗಳಲ್ಲಿ ನಿಮ್ಮ ಯೋಗ್ಯತೆಯನ್ನ ಎಪಿಸೋಡ್ ಲೆಕ್ಕದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರ ಕೇಳಿ ಬಿಜೆಪಿಯವರಿಗೆ ಭಯ ಶುರುವಾಗಿದೆ. ಸಿದ್ದರಾಮಯ್ಯನವರ ಮೇಲೆ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ದಲಿತ ವಿರೋಧಿ ಅಂತ ಭಿತ್ತಿಪತ್ರಗಳನ್ನ ಹಂಚುತ್ತಿದ್ದಾರೆ. ಇಂತ ಥರ್ಡ್ ಗ್ರೇಡ್ ರಾಜಕೀಯಕ್ಕೆ ಬಿಜೆಪಿ ಮತ್ತು ಜೆಡಿಎಸ್ ಮುಂದಾಗಿದೆ. ನಿಮ್ಮ ಸರ್ಕಾರ ಬಂದು ಇಷ್ಟು ವರ್ಷದಲ್ಲಿ ದಲಿತರಿಗೆ, ಹಿಂದುಳಿದವರಿಗೆ ಅಂತ ಏನಾದರೂ ಒಂದು ಯೋಜನೆ ಮಾಡಿದ್ದರೆ ತೋರಿಸಿ ಎಂದು ಎಂ.ಲಕ್ಷ್ಮಣ್ ಸವಾಲು ಹಾಕಿದರು.

ಸಿದ್ದರಾಮಯ್ಯ ನವರ ಕಾಲದಲ್ಲಿ SCP ಮತ್ತುTSP ಯೋಜನೆಯಡಿ ದಲಿತರಿಗೆ ಪ್ರತ್ಯೇಕ ಅನುದಾನ ಮೀಸಲಿಟ್ಟಿದ್ದರು. ಪಿಎಚ್.ಡಿ ಮಾಡುವ  SC ST ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಟೆಂಡರ್ ಪ್ರಕ್ರಿಯೆಯಲ್ಲಿ ಎಸ್ಸಿ, ಎಸ್ಟಿಗೆ ಮೀಸಲಾತಿ ಜಾರಿಗೆ ತಂದಿದ್ದು ಸಿದ್ದರಾಮಯ್ಯನವರು. ಕಾಂಗ್ರೆಸ್ ಸರ್ಕಾರ ಇದ್ದಾಗ ಮಾಡಿದ ಸೌಲಭ್ಯದ ಶೇ.10 ರಷ್ಟುನ್ನೂ ನೀವು ಮಾಡಿಲ್ಲ. ನೀವೇನೇ ಷಡ್ಯಂತ್ರ ಮಾಡಿದರೂ ಸಿದ್ದರಾಮಯ್ಯನವರನ್ನ ಸೋಲಿಸಲಿಕ್ಕೆ ಆಗಲ್ಲ. ಅವರು 40 ,50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಅವರು ಅಲ್ಲಿ ಸ್ಪರ್ಧೆ ಮಾಡಿದರೆ ಸುತ್ತಮುತ್ತ15, 20 ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಬಿಜೆಪಿಗೆ ಟಾಂಗ್ ನೀಡಿದರು.

ಕೆಸಿ ವ್ಯಾಲಿಯಂತ ಯೋಜನೆ ತಂದವರು ಸಿದ್ದರಾಮಯ್ಯ. ಬರಡು ಭೂಮಿಯಾಗಿದ್ದ ಕೋಲಾರ ಈಗ ಹಚ್ಚ ಹಸಿರಿನಿಂದ ಕೂಡಿದೆ ಇದು ಸಿದ್ದರಾಮಯ್ಯ ಅವರ ಕೊಡುಗೆ. ಬಿಜೆಪಿಗೆ ಮಾನ ಮರ್ಯಾದೆ ಇಲ್ಲ. ಚುನಾವಣೆ ಗೆಲ್ಲಲ್ಲು ಥರ್ಡ್ ಗ್ರೇಡ್ ರಾಜಕಾರಣ ಮಾಡುತ್ತಿದೆ. ಜನ ಮುಂದಿನ ಚುನಾವಣೆಯಲ್ಲಿ ಬುದ್ದಿ ಕಲಿಸುತ್ತಾರೆ ಎಂದು ಕಿಡಿಕಾರಿದರು.

ಗುಜಾರಾತ್ ಗಲಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯ ಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ ಕೆಪಿಸಿಸಿ ಎಂ. ಲಕ್ಷ್ಮಣ್, ಬಿಬಿಸಿ ನಿರ್ಮಿಸಿರುವ ಸಾಕ್ಷ್ಯ ಚಿತ್ರವನ್ನು ನಾಳೆ ಮೈಸೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪ್ರದರ್ಶಿಸುತ್ತೇವೆ. ನಮ್ಮನ್ನು ಬಂಧಿಸುತ್ತೀರಾ, ಸಾಕ್ಷ್ಯಚಿತ್ರ ಪ್ರದರ್ಶನವನ್ನು ಅದೇಗೆ ತಡೆಯುತ್ತೀರಿ ತಡೆಯಿರಿ ಎಂದು ಸವಾಲು ಹಾಕಿದರು.

ನನ್ನ ಶವವೂ ಬಿಜೆಪಿಗೆ ಹೋಗುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಕುರಿತು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಎಂ ಲಕ್ಷ್ಮಣ್, ಈಶ್ವರಪ್ಪ, ಸಿ.ಟಿ ರವಿ ಬಿಗ್ ಜೋಕರ್ಸ್‌. ಈಶ್ವರಪ್ಪ ತೀವ್ರ ಹತಾಶರಾಗಿದ್ದಾರೆ. ಈಶ್ವರಪ್ಪನವರ ಮಂತ್ರಿ ಸ್ಥಾನ ಏಕೆ ಹೋಯಿತು ಎಂದು ತಿಳಿಸಲಿ. ಈಶ್ವರಪ್ಪನವರನ್ನು ಬಿಜೆಪಿಯ ಯಾವುದೇ ಕಾರ್ಯಕ್ರಮಗಳಿಗೂ ಕರೆಯುತ್ತಿಲ್ಲ‌. ಈಶ್ವರಪ್ಪನವರನ್ನು ಮಾರ್ಗದರ್ಶಕ ಮಂಡಳಿಗೆ ಸೇರಿಸಿ ತುಂಬಾ ದಿನಗಳಾಗಿವೆ. ಈಶ್ವರಪ್ಪ ಚಲಾವಣೆಯಲ್ಲಿಲ್ಲದ ನಾಣ್ಯ ಎಂದು ವ್ಯಂಗ್ಯವಾಡಿದರು.

Key words: Ramesh Jarakiholi- murdered – inspector –congress- M. Laxman