ಕೋವಿಡ್ ಸೋಂಕಿತರಿಗೆ ಸೌಲಭ್ಯ ಒದಗಿಸುವ  ಆಕ್ಸಿಜನ್ ಸೌಲಭ್ಯವುಳ್ಳ 4 ಬಸ್ ಗಳಿಗೆ ಚಾಲನೆ…

ಮೈಸೂರು, ಮೇ.29,2021(www.justkannada.in):  ಮೈಸೂರು ಮಹಾನಗರ ಪಾಲಿಕೆ, ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಹಾಗೂ ಶಾಭಭುತ್ ಮಲ್  ರಕ್ಷಂದಾ ಗಾಧಿಯಾ ಫೌಂಡೇಶನ್ ಸಹಯೋಗದಲ್ಲಿ ಆಕ್ಸಿಜನ್ ಸೌಲಭ್ಯವುಳ್ಳ 4 ಬಸ್ ಗಳನ್ನು ಸಾರ್ವಜನಿಕರ ಸೇವೆಗಾಗಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ  ಎಸ್.ಟಿ.ಸೋಮಶೇಖರ್ ಅವರು ಶನಿವಾರ ಚಾಲನೆ ನೀಡಿದರು.jk

ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್,  ಬೆಂಗಳೂರಿನ ಮಾದರಿಯಂತೆ ಮೈಸೂರು ಜಿಲ್ಲೆಗೂ ಆಕ್ಸಿಜನ್ ಬಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸಾರಿಗೆ ಸಚಿವರಿಗೆ ಹಿಂದೆಯೇ ಮನವಿ ಸಲ್ಲಿಸಲಾಗಿದೆ. ಹೀಗಾಗಿ ಇಂದು ಜಿಲ್ಲೆಗೆ 4 ಆಕ್ಸಿಜನ್ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿಜಯೇಂದ್ರ ಅವರೂ ಸಹ ಮೈಸೂರು ಜಿಲ್ಲೆಗೆ 2 ಆಂಬ್ಯುಲೆನ್ಸ್ ಹಾಗೂ  15 ಆಕ್ಸಿಜನ್ ಕಾನ್ಸನ್‌ಟ್ರೆಟರ್ ಅನ್ನು ನೀಡಿದ್ದಾರೆ  ಎಂದರು.

ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಕಾಣಿಸುತ್ತಿದ್ದು,  ಇದರ ಚಿಕಿತ್ಸೆಗಾಗಿ ಔಷಧಿಗಳು ಬರುತ್ತಿದೆ. ಇದರಿಂದ  ಜಿಲ್ಲೆಯಲ್ಲಿ  ಔಷಧಿಗಳ ಕೊರತೆ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದೆ. ಹೀಗಾಗಿ ‘ಗ್ರಾಮೀಣ ಪ್ರದೇಶದ ಕಡೆ ವೈದ್ಯರ ನಡಿಗೆ’ ಕಾರ್ಯಕ್ರಮವು ಪರಿಣಾಮಕಾರಿಯಾಗಿದೆಯೇ ಎಂಬುದನ್ನು ಚರ್ಚಿಸಲಾಗುವುದು ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಜಿಲ್ಲೆಯಲ್ಲಿ ಎಲ್ಲಾ ಶಾಸಕರು, ಲೋಕಸಭಾ ಸದಸ್ಯರು ಹಾಗೂ ಬೋರ್ಡ್ ಸದಸ್ಯರುಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಜವಾಬ್ದಾರಿಯನ್ನ ತೆಗೆದುಕೊಂಡು‌ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಬೆಂಗಳೂರಿನ ನಂತರ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗುತ್ತಿರುವುದೇ  ಮೈಸೂರು ಜಿಲ್ಲೆಯಲ್ಲಿ. ಇದನ್ನು ನಿಯಂತ್ರಿಸುವ ಸಲುವಾಗಿ ಎಲ್ಲರು ಸಹಕಾರ ನೀಡುತ್ತಿದ್ದಾರೆ. ನಾನೂ ಕೂಡ ಸಂಸದರು ಹೇಳಿದಂತೆಯೇ ಕೋವಿಡ್ ಪರಿಸ್ಥಿತಿಯನ್ನು ತಿಳಿದುಕೊಳ್ಳಲು 11 ವಿಧಾನ ಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದ್ದೇನೆ. ಪ್ರತಿಯೊಂದು ಕೋವಿಡ್ ಸೆಂಟರ್ ಗೂ ಭೇಟಿ ನೀಡಿದ್ದೇನೆ. ಹೀಗೆಯೇ ಎಲ್ಲಾ ಅಧಿಕಾರಿಗಳೂ ಕೂಡ ಭೇಟಿ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಕೋವಿಡ್ ಹಾಗೂ ಬ್ಲಾಕ್ ಫಂಗಸ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸುವ ಸಲುವಾಗಿ  ಸಂಸದರು ಹೇಳಿರುವುದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್,  ಎಲ್.ನಾಗೇಂದ್ರ, ತನ್ವೀರ್ ಸೇಠ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೀವ್,  ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ಅಧ್ಯಕ್ಷರಾದ ಎಂ.ಅಪ್ಪಣ್ಣ ಸೇರಿದಂತೆ ಇತರರು ಹಾಜರಿದ್ದರು.

Key words: 4 buses -equipped -oxygen –facilitate- covid –minister –ST Somashekar