Thursday, August 27, 2026

BDA Apartments

Home Front Page ಕಾಂಗ್ರೆಸ್ ಎಲ್ಲಾ ಜಾತಿ, ಧರ್ಮದ ಜನರ ಪರ : ಎರಡು ಕಡೆ ‘ಕೈ’ ಗೆಲುವು ನಿಶ್ಚಿತ-...

ಕಾಂಗ್ರೆಸ್ ಎಲ್ಲಾ ಜಾತಿ, ಧರ್ಮದ ಜನರ ಪರ : ಎರಡು ಕಡೆ ‘ಕೈ’ ಗೆಲುವು ನಿಶ್ಚಿತ- ಮಾಜಿ ಸಿಎಂ ಸಿದ್ಧರಾಮಯ್ಯ.

ಹಾನಗಲ್,ಅಕ್ಟೋಬರ್,27,2021(www.justkannada.in): ಕಾಂಗ್ರೆಸ್ ಪಕ್ಷ ಎಲ್ಲಾ ಜಾತಿ, ಧರ್ಮದ ಜನರ ಪರವಾಗಿದೆ. ಉಪಚುನಾವಣೆಯಲ್ಲಿ ಎರಡೂ ಕಡೆ ಕಾಂಗ್ರೆಸ್ ಪಕ್ಷದ ಗೆಲುವು ನಿಚ್ಚಳವಾಗಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಹಾನಗಲ್ ನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿ ಮಾತನಾಡಿದ ಸಿದ್ಧರಾಮಯ್ಯ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಹಾನಗಲ್ ಕ್ಷೇತ್ರಕ್ಕೆ ಈವರೆಗೆ ಒಂದು ಮನೆ ಕೊಟ್ಟಿಲ್ಲ, ಈಗ ಚುನಾವಣೆ ಬಂದಿರುವುದರಿಂದ 7,500 ಮನೆ ಮಂಜೂರು ಮಾಡಿರುವ ಪತ್ರ ಹಿಡಿದುಕೊಂಡು ಮುಖ್ಯಮಂತ್ರಿಗಳು ಪ್ರಚಾರ ಮಾಡುತ್ತಿದ್ದಾರೆ. ಚುನಾವಣೆ ಮುಗಿದ ಮೇಲೆ ಅದನ್ನು ಕಟ್ಟಿಸಿಕೊಡ್ತಾರೊ ಇಲ್ಲವೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ಈವರೆಗೆ ಹಾನಗಲ್ ನಲ್ಲಿ ಒಂದೇ ಒಂದು ರಸ್ತೆ ಅಭಿವೃದ್ಧಿ ಮಾಡಿಲ್ಲ, ನಮ್ಮ‌ ಸರ್ಕಾರದ ಅವಧಿಯಲ್ಲಿ ನಿರ್ಮಾಣವಾದದ್ದು ಬಿಟ್ಟರೆ ಬೇರೆ ಯಾವ ಕೆಲಸ ಆಗಿಲ್ಲ. ಇದರಿಂದ ಜನ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಲುಕು ಹಾಕಲು ಅರಂಭಿಸಿದ್ದಾರೆ. ಜನರಿಗೆ ಬಿಜೆಪಿ ಅಧಿಕಾರದಿಂದ ತೊಲಗಿ ಕಾಂಗ್ರೆಸ್ ಬಂದರೆ ಸಾಕಾಗಿದೆ. ಬಿಜೆಪಿಯವರಿಗೆ ಹಣ ಕೊಟ್ಟು ಓಟು ಖರೀದಿ ಮಾಡುವುದೊಂದು ಬಿಟ್ಟು ಯಾವ ದಾರಿ ಇಲ್ಲವಾಗಿದೆ. ಬೆಲೆಯೇರಿಕೆ ಮಾಡಿರುವುದು ಅಭಿವೃದ್ಧಿ ಕಾರ್ಯಗಳೇ? ಒಂದೊಂದು ಕ್ಷೇತ್ರಕ್ಕೆ ಹತ್ತರಿಂದ ಹನ್ನೆರಡು ಜನ ಸಚಿವರು ದುಡ್ಡಿನ ಚೀಲ ಹಿಡಿದುಕೊಂಡು ಬಂದು ಕೂತಿದ್ದಾರೆ. ಬಿಜೆಪಿಯವರು ಹಣ ಹಂಚುತ್ತಿರುವ ವೀಡಿಯೋ ಆಧಾರದ ಮೇಲೆ ಕಾಂಗ್ರೆಸ್ ಪಕ್ಷ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಲಿದೆ ಎಂದರು.

ಬಸವರಾಜ ಬೊಮ್ಮಾಯಿಯವರು ಸುಳ್ಳು ಹೇಳಿರುವುದು ಜನರ ಎದುರು, ಹಾಗಾಗಿ ಜನರ ಎದುರೇ ಚರ್ಚೆ ನಡೆಯಲಿ. ಯಾರು ಸತ್ಯ ಹೇಳುತ್ತಾರೆ ಎಂದು ಜನತಾ ನ್ಯಾಯಾಲಯದಲ್ಲೇ ತೀರ್ಮಾನವಾಗಲಿ. ಮುಖ್ಯಮಂತ್ರಿಗಳಿಗೆ ಜನರೆದುರು ಚರ್ಚೆ ಮಾಡಲು ಭಯ ಯಾಕೆ? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷ ಎಲ್ಲಾ ಜಾತಿ, ಧರ್ಮದ ಜನರ ಪರವಾಗಿದೆ. ನಮ್ಮ ಅನ್ನಭಾಗ್ಯ ಯೋಜನೆಯ ಅಕ್ಕಿ, ಮಕ್ಕಳಿಗೆ ಹಾಲು, ಶೂಭಾಗ್ಯ, ಕ್ಷೀರಧಾರೆ, ಇಂದಿರಾ ಕ್ಯಾಂಟೀನ್ ಹೀಗೆ ಹಲವು ಯೋಜನೆಗಳನ್ನು ಬರೀ ಮುಸ್ಲಿಂಮರಿಗೆ ಮಾತ್ರ ಕೊಟ್ಟಿದ್ವಾ? 3 ಲಕ್ಷ ರೂಪಾಯಿ ವರೆಗೆ ಬಡ್ಡಿರಹಿತ ಸಾಲ ನೀಡಿದ್ದು ಬರೀ ಮುಸ್ಲಿಂ ರೈತರಿಗಾ? ಇಂದಿರಾ ಕ್ಯಾಂಟೀನ್ ನಲ್ಲಿ ಬರೀ ಮುಸ್ಲಿಂಮರು ಮಾತ್ರ ಊಟ ಮಾಡೋದ? ರಾಜಕೀಯಕ್ಕಾಗಿ ಏನೇನೋ ಮಾತನಾಡಬಾರದು.

ಆಹಾರ ಭದ್ರತಾ ಕಾಯಿದೆ ಜಾರಿಗೆ ತಂದಿದ್ದು ಮನಮೋಹನ್ ಸಿಂಗ್ ಅವರ ಸರ್ಕಾರ. ಅನ್ನಭಾಗ್ಯ ಕೇಂದ್ರ ಸರ್ಕಾರದ ಯೋಜನೆಯಾಗಿದ್ದರೆ ಉಚಿತವಾಗಿ ಅಕ್ಕಿ ಕೊಡುವ ಕಾರ್ಯಕ್ರಮ ಗುಜರಾತ್ ನಲ್ಲಿ ಯಾಕಿಲ್ಲ? ಉತ್ತರ ಪ್ರದೇಶದಲ್ಲಿ ಏಕಿಲ್ಲ? ಮಧ್ಯ ಪ್ರದೇಶದಲ್ಲಿ ಏಕಿಲ್ಲ? ಅಲ್ಲೆಲ್ಲಾ ಬಿಜೆಪಿ ಸರ್ಕಾರವೇ ಇದಾವಲ್ಲ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

ನಾನು ಅಧಿಕಾರಕ್ಕೆ ಬಂದ ಕೂಡಲೇ ಕೃಷಿಭಾಗ್ಯ, ರೈತರ ಸಾಲಮನ್ನಾ, ವಿದ್ಯಾಸಿರಿ ಯೋಜನೆ ಜಾರಿ ಮಾಡಿದ್ದೆ. ಇವೆಲ್ಲ ರೈತರಿಗಾಗಿ ಮಾಡಿದ ಕಾರ್ಯಕ್ರಮವಲ್ಲದೆ ಇನ್ಯಾರಿಗಾಗಿ ಮಾಡಿದ್ದು? ಎಂದು ಕಿಡಿಕಾರಿದರು.

Key words: Congress – people – all castes – religions-Former CM- Siddaramaiah