Wednesday, July 29, 2026

BDA Apartments

Home Front Page ಯುವ ಬ್ರಿಗೇಡ್ ನಿಂದ ‘ಕಾವೇರಿ ನಮನ’ : ನದಿ ಸ್ವಚ್ಛತೆ, ಜಾಗೃತಿ ಅಭಿಯಾನ ಆರಂಭ.

ಯುವ ಬ್ರಿಗೇಡ್ ನಿಂದ ‘ಕಾವೇರಿ ನಮನ’ : ನದಿ ಸ್ವಚ್ಛತೆ, ಜಾಗೃತಿ ಅಭಿಯಾನ ಆರಂಭ.

ಶ್ರೀರಂಗಪಟ್ಟಣ,ಡಿಸೆಂಬರ್,28,2024 (www.justkannada.in): ಯುವ ಬ್ರಿಗೇಡ್ ವತಿಯಿಂದ ಕಾವೇರಿ ನಮನ ಹೆಸರಿನಲ್ಲಿ ನದಿ ಸ್ವಚ್ಚತೆ, ಜಾಗೃತಿ ಅಭಿಯಾನ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಶ್ರೀರಂಗಪಟ್ಟಣದ ಸ್ನಾನ ಘಟ್ಟದಲ್ಲಿ ಆರಂಭವಾಯಿತು.

ಶುಕ್ರವಾರ ಸಂಜೆಯೇ ಆಗಮಿಸಿದ ಯುವಾ ಬ್ರಿಗೇಡ್ ಕಾರ್ಯಕರ್ತರು ಕಾವೇರಿ ನದಿಗೆ ಆರತಿ ಸಲ್ಲಿಸಿ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿದರು.  ಶನಿವಾರ ಬೆಳಿಗ್ಗೆ 6 ಗಂಟೆಗೆ ಸ್ನಾನ ಘಟ್ಟದ ಬಳಿ ಸ್ವಚ್ಚತೆಗೆ ಇಳಿದ  50ಕ್ಕೂ ಹೆಚ್ಚು ಯುವಕರು ನದಿ ಒಳಗೆ ಬಿದ್ದಿದ್ದ ಬಟ್ಟೆ,  ಮಡಿಕೆ, ಕುಡಿಕೆ ಪೂಜಾ ತ್ಯಾಜ್ಯಗಳನ್ನು ತೆಗೆದು ಸ್ವಚ್ಚಗೊಳಿಸಿ ಹೊರಟ ಜಾಗೃತಿ ಜಾಥಾ ಮೀನಾಕ್ಷಿ ಪುರದ ಕಾವೇರಿ ಹಿನ್ನೀರಿನ ಬಳಿ ಸ್ವಚ್ಚತಾ ಕಾರ್ಯ  ಕೈಗೊಂಡು  ನದಿ ತೀರದ ಉದ್ದಕ್ಕೂ ಬಿದ್ದಿದ್ದ ಪ್ಲಾಸ್ಟಿಕ್ , ಹಾಗೂ ಮದ್ಯದ ಬಾಟಲ್ ಗಳನ್ನು ತೆಗೆದು ಸ್ವಚ್ಚಗೊಳಿಸಿದರು.  ನಂತರ ಕೆ.ಆರ್ ನಗರದ ಕಡೆಗೆ ಸಾಗಿ ಅಲ್ಲಿನ ಸ್ಥಳಿಯರೊಂದಿಗೆ ಚರ್ಚೆಯಲ್ಲಿ ಪಾಲ್ಗೊಂಡು ಕಾವೇರಿ ಸ್ವಚ್ಚತೆಯ ಕುರಿತು ಜಾಗೃತಿ ಮಾಹಿತಿ ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರು,  ಕಾವೇರಿ ಸ್ವಚ್ಚತಾ ಜಾಗೃತಿಯ ಅಭಿಯಾನವನ್ನು ಯುವಾ ಬ್ರಿಗೇಡ್ ನ ಬ್ರಾಂಡ್ ಕನ್ನಡ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದು ಡಿಸೆಂಬರ್ 28, 29, 30 ಈ ಮೂರು ದಿನಗಳ ಕಾಲ ಶ್ರೀರಂಗಪಟ್ಟಣದಿಂದ ಹೊರಟು ತಲಕಾವೇರಿ ತಲುಪಿ ಅಲ್ಲಿಂದ ಶಿವನ ಸಮುದ್ರದ ಮಧ್ಯ ರಂಗನವರೆಗೆ ಕಾವೇರಿ ಪ್ರದಕ್ಷಿಣೆ ಹಾಕಲಾಗುತ್ತದೆ.  ಅಲ್ಲಲ್ಲಿ ಸ್ವಚ್ಚತೆ, ಜಾಗೃತಿ ಹಾಗೂ ಆರತಿ ಬೆಳಗುತ್ತ ನಮ್ಮನ್ನು ಎಲ್ಲಾ ರೀತಿಯಲ್ಲೂ ಬೆಸೆದುಕೊಂಡಿರುವ ಕಾವೇರಿಗೆ ನಮನ ಸಲ್ಲಿಸುತ್ತ ಸಾಗಲಿದ್ದೆವೆ ಎಂದು ತಿಳಿಸಿದರು.

ಯುವಾ ಬ್ರಿಗೇಡ್ ದಕ್ಷಿಣ ರಾಜ್ಯ ಸಂಚಾಲಕ ಹರ್ಷ, ಚಂದ್ರಶೇಖರ್, ಮನೋಹರ್, ಧರ್ಮರಾಜ್, ಹರಿಶ್, ರಾಜು, ಪಂಚಾಕ್ಷರಿ, ಚಂದ್ರಶೇಖರ್, ಪ್ರವೀಣ್, ರಾಮನುಜನ್, ಸೇರಿದಂತೆ 50 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು.

Key words: Yuva Brigade, Kaveri River , cleanliness, campaign