ವಿಜಯಪುರ: ಬಂಜಾರ ಕಸೂತಿ ಸಂಸ್ಥೆ ಕ್ಷೇತ್ರಾಧ್ಯಯನಕ್ಕೆ ಎನ್.ಐ.ಎಫ್.ಟಿ. ವಿದ್ಯಾರ್ಥಿಗಳು

ವಿಜಯಪುರ,ಜುಲೈ,16,2025 (www.justkannada.in): ಜಿಲ್ಲೆಯಲ್ಲಿರುವ ಬಂಜಾರ ಕಸೂತಿ ಸಂಸ್ಥೆಗೆ ಬೆಂಗಳೂರಿನ ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್‌ ಫ್ಯಾಶನ್‌ ಟೆಕ್ನಾಲಜಿ (ಎನ್.ಐ.ಎಫ್.ಟಿ) ಸಂಸ್ಥೆಯ ವಿದ್ಯಾರ್ಥಿಗಳು ಕ್ಷೇತ್ರಾಧ್ಯಯನಕ್ಕಾಗಿ ಆಗಮಿಸಿದ್ದಾರೆ. ಇದರ ಜೊತೆಗೆ ದೇಶದ ನಾನಾ ಭಾಗಗಳು ವಸ್ತ್ರ ವಿನ್ಯಾಸ ಸಂಸ್ಥೆಗಳು ಕೂಡ ಈ ಬಗ್ಗೆ ಆಸಕ್ತಿ ತೋರಿಸಿ, ಸಂಪರ್ಕಿಸುತ್ತಿವೆ ಎಂದು ಸಂಸ್ಥೆಯ ಸಂಸ್ಥಾಪಕಿ ಆಶಾ ಎಂ ಪಾಟೀಲ ತಿಳಿಸಿದ್ದಾರೆ.

ಈ ಬಗ್ಗೆ ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ʻವಿಜಯಪುರ ಜಿಲ್ಲೆಯಲ್ಲಿ ಮೊದಲಿನಿಂದಲೂ ಲಂಬಾಣಿ ಕಲೆ, ಕಸೂತಿ ಇತ್ಯಾದಿಗಳು ಬೇರೂರಿಕೊಂಡು ಬಂದಿದ್ದವು. ಈ ಸಾಂಪ್ರದಾಯಿಕ ಕೌಶಲ್ಯವನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಬಂಜಾರ ಕಸೂತಿ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. ಏಳೆಂಟು ವರ್ಷಗಳಿಂದ ಬಂಜಾರ ತಾಂಡಾಗಳಲ್ಲಿರುವ ಮಹಿಳೆಯರನ್ನು ಸಂಪರ್ಕಿಸಿ, ಈ ಕಲೆಗೆ ಸಮಕಾಲೀನ ಸ್ಪರ್ಶ ನೀಡಲಾಗುತ್ತಿದೆ. ಇದಕ್ಕೆ ಮಾರುಕಟ್ಟೆಯನ್ನೂ ಸೃಷ್ಟಿಸಲಾಗಿದ್ದ, ಇಲ್ಲಿ ಸಿದ್ಧಪಡಿಸಲಾಗುವ ಉತ್ಪನ್ನಗಳನ್ನು ದೇಶದ ವಿವಿಧೆಡೆಗಳಲ್ಲಿನ ಪ್ರದರ್ಶನ ಮತ್ತು ವಾಣಿಜ್ಯ ಮೇಳಗಳಿಗೂ ತಲುಪಿಸಲಾಗಿದೆʼ ಎಂದಿದ್ದಾರೆ.

ಸದ್ಯಕ್ಕೆ ಬೆಂಗಳೂರಿನ ಎನ್.ಐ.ಎಫ್.ಟಿ. ಸಂಸ್ಥೆಯ ನಿಟ್-ವೇರ್‌ ವಿಭಾಗದ ೩೮ ವಿದ್ಯಾರ್ಥಿಗಳು ಕ್ಷೇತ್ರಾಧ್ಯಯನಕ್ಕೆ ಬಂದಿದ್ದು, ಪ್ರತ್ಯಕ್ಷ ಅನುಭವಕ್ಕೆ ತಾಂಡಾಗಳಿಗೆ ಭೇಟಿ ನೀಡುತ್ತಿದ್ದಾರೆ. ಇವರಿಗೆ ಸಂಸ್ಥೆಯ ಸಿಬ್ಬಂದಿ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದು, ಬಂಜಾರ ಜೀವನಶೈಲಿ, ಕಸೂತಿಯ ಸೂಕ್ಷ್ಮತೆ ಇವುಗಳ ಚಿತ್ರೀಕರಣ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಸಂಸ್ಥೆಯ ಸಹಸಂಸ್ಥಾಪಕಿ ಸೀಮಾ ಕಿಶೋರ್‌ ಅವರು, ಕೆಲವರ್ಷಗಳ ಹಿಂದೆ ಜನರಿಗೆ ರಾಜಾಸ್ಥಾನಿ ಮತ್ತು ಗುಜರಾತಿ ಬಂಜಾರ ಕಲೆಗಳ ಬಗ್ಗೆ ಮಾತ್ರ ಗೊತ್ತಿತ್ತು. ಈಗ ಕರ್ನಾಟಕದ ಕಸೂತಿ ಕೂಡ ಜನಪ್ರಿಯವಾಗಿದೆ. ಈವರೆಗೆ ನಾವು ೧೮ ಮೇಳಗಳಲ್ಲಿ ಪಾಲ್ಗೊಂಡಿದ್ದು, ೨೦೨೪ರಲ್ಲಿ ದೆಹಲಿಯಲ್ಲಿ ನಡೆದ ಇಂಡಿಯಾ ಇಂಟರ್ನ್ಯಾಷನಲ್‌ ಟ್ರೇಡ್‌ ಫೇರ್‌ ನಲ್ಲೂ ಭಾಗವಹಿಸಿದ್ದೆವು. ೧೫ ತಾಂಡಾಗಳ ನೂರಕ್ಕೂ ಹೆಚ್ಚು ಮಹಿಳೆಯರು ನಮ್ಮ ತಂಡದಲ್ಲಿದ್ದು, ಇಲ್ಲಿನ ಉತ್ಪನ್ನಗಳನ್ನು ಅಮೆರಿಕ ಮತ್ತು ಯೂರೋಪ್‌ ದೇಶಗಳಿಗೂ ಕಳಿಸಲು ವ್ಯವಸ್ಥೆ ರೂಪಿಸಲಾಗಿದೆ. ಇದು ಲಾಭರಹಿತ ಸಂಸ್ಥೆಯಾಗಿದೆ. ಈಗ ಅಧ್ಯಯನಕ್ಕೆ ಬಂದಿರುವವರಿಗೆ ಗಾಜು ಕಟ್ಟುವುದು, ಹೊಲಿಗೆ ಹಾಕುವುದನ್ನು ಕಲಿಸುತ್ತಿದ್ದೇವೆ. ಈ ಮೂಲಕ ಮಹಿಳೆಯರ ಸಬಲೀಕರಣವೂ ಸಾಧ್ಯವಾಗುತ್ತಿದೆ ಎಂದಿದ್ದಾರೆ.vtu

key words :Vijayapur,  NIFT, Students