ಬೆಂಗಳೂರು,ಜೂನ್,2,2025 (www.justkannada.in): ತಮಿಳಿನಿಂದ ಕನ್ನಡ ಹುಟ್ಟಿತು ಎಂದು ಹೇಳಿಕೆ ನೀಡಿ ಕನ್ನಡಕ್ಕೆ ಅಪಮಾನ ಮಾಡಿರುವ ನಟ ಕಮಲ್ ಹಾಸನ್ ಚಿತ್ರ ಥಗ್ಸ್ ಲೈಫ್’ ರಾಜ್ಯದಲ್ಲಿ ಬಿಡುಗಡೆ ಆದರೆ ಇಡೀ ಕರ್ನಾಟಕ ಬಂದ್ ಮಾಡಲಾಗುತ್ತದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಇಂದು ಮಾತನಾಡಿದ ವಾಟಾಳ್ ನಾಗರಾಜ್, ರಾಜ್ಯದಲ್ಲಿ ಕಮಲ್ ಹಾಸನ್ ವಿರುದ್ದ ಮುಖ್ಯಮಂತ್ರಿಗಳು ಮೊಕದ್ದಮೆ ಹಾಕಬೇಕು. ಈ ವಿಚಾರದಲ್ಲಿ ರಾಜಕಾರಣಿಗಳು ಹಾಗೂ ನಟರು ಬೀದಿಗೆ ಬರಬೇಕು. ಒಂದು ವೇಳೆ ಕಮಲ್ ಹಾಸನ್ ನಟನೆಯ ಚಿತ್ರ ಬಿಡುಗಡೆ ಆದರೆ ಹೋರಾಟ ಮಾಡುತ್ತೇವೆ. ಎಲ್ಲ ಕನ್ನಡ ಪರ ಸಂಘಟನೆಗಳು ಸೇರಿ ಬಂದ್ ಮಾಡುತ್ತೇವೆ. ಕೇವಲ ಶಿವಣ್ಣ ಮಾತ್ರವಲ್ಲ ಎಲ್ಲಾ ನಟರು ಕನ್ನಡ ಪರ ನಿಲ್ಲಬೇಕು ಎಂದು ಆಗ್ರಹಿಸಿದರು.
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗುತ್ತದೆ. ಈ ಬಗ್ಗೆ ಎಲ್ಲಾ ಸಂಘಟನೆಗಳ ಜೊತೆಗೆ ಮಾತನಾಡಿ ಬೆಂಬಲ ಕೇಳುತ್ತೇವೆ. ಕಮಲ್ ಹಾಸನ್ ಚಿತ್ರ ಬಿಡುಗಡೆ ಆದರೆ ಕರ್ನಾಟಕ ರಣರಂಗವಾಗುತ್ತೆ. ಜಿಲ್ಲಾ, ತಾಲ್ಲೂಕುಗಳಲ್ಲಿಯೂ ಹೋರಾಟಗಾರರು ಸಜ್ಜಾಗಬೇಕು. ಜೈಲಿಗೆ ಹೋಗೋದಕ್ಕೂ ಎಲ್ಲಾ ಹೋರಾಟಗಾರರು ಸಜ್ಜಾಗಿ ಎಂದರು.
Key words: Kamal Haasan, movie, state, Bandh, Vatal Nagaraj