ಪ್ರಧಾನಿ ಮೋದಿ ಪ್ರೇರಣೆಯಿಂದ ಲಸಿಕಾ ಅಭಿಯಾನ ಸಾಧನೆ- ಕಾಂಗ್ರೆಸ್ ಟೀಕಿಸಿ ದೇಶದ ವಿಜ್ಞಾನಿಗಳಿಗೆ ತಜ್ಞರಿಗೆ ಅಭಿನಂದನೆ ಸಲ್ಲಿಸಿದ ನಳಿನ್ ಕುಮಾರ್ ಕಟೀಲ್.

ಬೆಂಗಳೂರು,ಅಕ್ಟೋಬರ್,21,2021(www.justkannada.in):  ದೇಶದಲ್ಲಿ 100 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿಕೆ ಪೂರ್ಣಗೊಳಿಸುವ ಮೂಲಕ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, ಇದಕ್ಕೆ ಶ್ರಮಿಸಿದ ವಿಜ್ಞಾನಿಗಳು, ವೈದ್ಯರು, ದಾದಿಯರು, ಆಶಾಕಾರ್ಯಕರ್ತೆಯರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಭಿನಂದನೆ ಸಲ್ಲಿಸಿದರು.

ಈ ಕುರಿತು ಮಾತನಾಡಿದ ನಳೀನ್ ಕುಮಾರ್ ಕಟೀಲ್, ಜಗತ್ತಿನ ಎಲ್ಲಾ ದೇಶಗಳು ಲಸಿಕೆ ಹುಡುಕುವ ಕೆಲಸ ಮಾಡಿದ್ವು. ಆದರೆ ನಮ್ಮ ಪ್ರಧಾನಿಯವರು ವೈದ್ಯರಿಗೆ ಧೈರ್ಯ ತುಂಬುವ ಕೆಲಸ‌ಮಾಡಿದರು. ವಿಜ್ಞಾನಿಗಳಿಗೆ ಪ್ರೇರಣೆ ನೀಡಿ ಲಸಿಕೆ ಸಂಶೋಧನೆಗೆ ಉತ್ಸವ ತುಂಬಿದ್ರು. ಹಿಂದೆ ದೇಶದಲ್ಲಿ ವ್ಯಾಪಕವಾಗಿ ಪೊಲೀಯೋ ಬಂತು. ಆದಕ್ಕೆ ಲಸಿಕೆ ಹುಡುಕುವ ಕೆಲಸವನ್ನ ಕಾಂಗ್ರೆಸ್ ಮಾಡಲಿಲ್ಲ. ಆದರೆ ಕೋವಿಡ್ ಸಮಯದಲ್ಲಿ  ಮೋದಿ 20 ಗಂಟೆ ಕೆಲಸ ಮಾಡಿದ್ದಾರೆ. ನರೇಂದ್ರ ಮೋದಿ ಪ್ರೇರಣೆಯಿಂದ ಲಸಿಕಾ ಅಭಿಯಾನ ಸಾಧನೆ ಮಾಡಿದೆ. ಇದಕ್ಕಾಗಿ ದೇಶದ ವಿಜ್ಞಾನಿಗಳಿಗೆ, ತಜ್ಞರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಳ್ಳಿಹಳ್ಳಿಗೆ ಲಸಿಕೆ ತಲುಪಿಸಿದ ವೈದ್ಯರು, ದಾದಿಯರು, ಆಶಾಕಾರ್ಯಕರ್ತೆಯರಿಗೆ ಅಭಿನಂದನೆಗಳು. ಪೌರಕಾರ್ಮಿಕರು, ಪೊಲೀಸರಿಗೂ ಅಭಿನಂದನೆ ಸಲ್ಲಿಸಬೇಕು ಎಂದರು.

ಇಂದು 100ಕೋಟಿ ಲಸಿಕಾ ಅಭಿಯಾನ ಪೂರ್ಣಗಿಳಿಸಲಾಗಿದೆ. 70 ಕೋಟಿ ಜನರಿಗೆ ಮೊದಲ ಡೋಸ್ ಹಾಗೂ 30 ಕೋಟಿ ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ವಿರೋಧ ಪಕ್ಷಗಳ ಟೀಕೆಗೆ ಲಸಿಕೆ ನೀಡುವ ಮೂಲಕ ಉತ್ತರ ನೀಡಲಾಗಿದೆ. ಲಸಿಕಾ ಅಭಿಯಾನದಲ್ಲಿ ಭಾರತ ಇತಿಹಾಸ ಸೃಷ್ಠಿಸಿದೆ. ಪ್ರಾರಂಭದಲ್ಲಿ ಮಾಸ್ಕ್, ಸ್ಯಾನಿಟೈಸರ್, ಕೋವಿಡ್ ಕಿಟ್ ಇಲ್ಲ ಅಂತ ಚರ್ಚೆ ಆಯ್ತು. ಆದರೆ ಕೇವಲ ಎರಡೇ ತಿಂಗಳಲ್ಲಿ ಉತ್ಪಾದನೆ ಹೆಚ್ಚಿಸಿ ಬೇರೆ ಬೇರೆ ದೇಶಗಳಿಗೂ ರಫ್ತು ಮಾಡಿದ್ದೇವೆ. ಸುಧೀರ್ಘ 60 ವರ್ಷಗಳ ಆಡಳಿತ ಮಾಡಿದ ಕಾಂಗ್ರೆಸ್ ವೈದ್ಯಕೀಯ ಕ್ಷೇತ್ರ ಅಭಿವೃದ್ಧಿ ಪಡಿಸಲಿಲ್ಲ. ಆದರೆ ಇಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ವೆಂಟಿಲೇಟರ್ ಇದೆ. ಪ್ರತಿ ಜಿಲ್ಲೆಯಲ್ಲೂ ಆಕ್ಸಿಜನ್ ಫ್ಲಾಂಟ್ ನಿರ್ಮಾಣ ಮಾಡಿದೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೂ ಮೇಲ್ದರ್ಜೆಗೆ ಏರಿಸುವ ತೀರ್ಮಾನ ಮಾಡಲಾಗಿದೆ. ಇದು ನರೇಂದ್ರ ಮೋದಿಯಿಂದ ಸಾಧ್ಯವಾಗಿದ್ದು. ಹಾಗೆಯೇ ಕರ್ನಾಟಕ ಸರ್ಕಾರಕ್ಕೂ ಅಭಿನಂದನೆ ಸಲ್ಲಿಸುತ್ತೇನೆ. ಅತ್ಯುನ್ನತ ಕೋವಿಡ್ ನಿರ್ವಹಣೆ ರಾಜ್ಯ ಕರ್ನಾಟಕ. ಕರ್ನಾಟಕದಲ್ಲಿ ಸುಮಾರು 4 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಇದಕ್ಕೆ ಕಾರಣರಾದ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಸ್ವಾತಂತ್ರ್ಯಕ್ಕೂ ಮುಂಚೆ ಜನ ಗಾಂಧಿಜಿ ಜೊತೆ ಕೈಜೋಡಿಸಿದ್ರು. ಸ್ವಾತಂತ್ರ್ಯದ ನಂತರ ಲಾಲ್ ಬಹದ್ದೂರ್   ಶಾಸ್ತ್ರಿ ಕೂಗಿಗೆ ಕೈಜೋಡಿಸಿದ್ರು. ನಂತರದ ದಿನಗಳಲ್ಲಿ ಜನರ ಒಗ್ಗಟ್ಟಾಗಿ ಕೈ ಜೋಡಿಸಿರೋದು ಮೋದಿರವರಿಗೆ. ಧರ್ಮ, ಜಾತಿ, ಪಂಥ ಮೀರಿ ಜನ ಮೋದಿಯನ್ನ ಬೆಂಬಲಿಸಿದ್ದಾರೆ ಎಂದು ಕಟೀಲ್ ನುಡಿದರು.

Key words: vaccine- campaign -achievement -inspired – PM –Modi-Nalin Kumar Kateel