Sunday, August 2, 2026

BDA Apartments

Home Front Page ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 19ನೇ ಕಂತಿನ ಹಣ ಬಿಡುಗಡೆ- ಕೇಂದ್ರ ಸಚಿವ ಹೆಚ್.ಡಿಕೆ

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 19ನೇ ಕಂತಿನ ಹಣ ಬಿಡುಗಡೆ- ಕೇಂದ್ರ ಸಚಿವ ಹೆಚ್.ಡಿಕೆ

ಮಂಡ್ಯ, ಫೆಬ್ರವರಿ,24,2025 (www.justkannada.in):  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ದೇಶದ ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬಿದ್ದು, ಈ ಯೋಜನೆಯ 9ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬಿಡುಗಡೆ ಮಾಡಿದ್ದಾರೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಈ ಯೋಜನೆಯ 19ನೇ ಕಂತಿನಲ್ಲಿ ಮಂಡ್ಯ ಜಿಲ್ಲೆಯ 2,24,634 ರೈತರಿಗೆ ₹44.93 ಕೋಟಿ ಹಣ ಜಮೆ ಆಗಿದೆ. ರಾಜ್ಯದ ಒಟ್ಟಾರೆ 4,75,0457 ಅರ್ಹ ಫಲಾನುಭವಿ ರೈತರಿಗೆ ಒಟ್ಟು ₹950.09 ಕೋಟಿ ಮೊತ್ತ ಜಮೆ ಆಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಾಹಿತಿ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು, ಬಿಹಾರದ ಬಾಗಲ್ಪುರದಿಂದ ಪಿಎಂ ಕಿಸಾನ್ ಸಮ್ಮಾನ್ ಯೋಜನೆ 19ನೇ ಕಂತಿನ ಹಣ ಬಿಡುಗಡೆ ಮಾಡಿದ ಕಾರ್ಯಕ್ರಮದಲ್ಲಿ ಮಂಡ್ಯದ ವಿಸಿ ಫಾರಂ ನಿಂದ ಆನ್ಲೈನ್ ವೇದಿಕೆಯಿಂದ ಪಾಲ್ಗೊಂಡು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿದರು.

ಉಳಿದಂತೆ ದೇಶದ ಒಟ್ಟಾರೆ ಅರ್ಹ 9.8 ಕೋಟಿ ರೈತರ ಖಾತೆಗೆ ₹2,000 ಹಣ ಜಮೆ ಮಾಡಲಾಗಿದೆ. ಪ್ರಧಾನಿಗಳು ₹22,000 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ರೈತಪರ ಕಾಳಜಿ ಹಾಗೂ ಕೃಷಿಯನ್ನು ಅಭಿವೃದ್ಧಿಪಡಿಸುವ ಇಚ್ಛಾಶಕ್ತಿಯಿಂದ ಪ್ರಧಾನಿಗಳು ಈ ಯೋಜನೆಯನ್ನು ಮುಂದುವರಿಸಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ರೈತರಿಗೆ ಈ ಯೋಜನೆ ಅತ್ಯಂತ ಉಪಯುಕ್ತವಾಗಿದೆ. ಕೃಷಿಕರು ತಮ್ಮ ಗುರಿ ಮುಟ್ಟಲು ಸಾಧ್ಯ ಆಗಿದೆ. ನರೇಂದ್ರ ಮೋದಿ ಅವರಿಗೆ ರೈತರ ಬಗ್ಗೆ ಬದ್ಧತೆ ಇದೆ. ರಾಷ್ಟ್ರದ ಕೃಷಿಕರ ಸಮಸ್ಯೆಗಳ ಬಗ್ಗೆ ಅವರಿಗೆ ಮಾಹಿತಿ ಇದೆ. ಪ್ರತಿ ಸಚಿವ ಸಂಪುಟ ಸಭೆಯಲ್ಲಿಯೂ ಅವರು ರೈತರ ಬಗ್ಗೆ ಚರ್ಚೆ ನಡೆಸುತ್ತಾರೆ. ಅನೇಕ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸಲಹೆ ಸೂಚನೆ ಕೊಡುತ್ತಾರೆ, ಅವರ ರೈತ ಕಾಳಜಿಯನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ಅವರು ಹೇಳಿದರು.

ರೈತರ ನಿರೀಕ್ಷೆ ಇನ್ನೂ ಹೆಚ್ಚಿದೆ. ಅದನ್ನು ಮೋದಿ ಅವರು ಖಂಡಿತಾ ಈಡೇರಿಸುತ್ತಾರೆ. ರೈತರು ಕೂಡ ಸರ್ಕಾರ ಕೊಡುವ ಅನುಕೂಲಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ರೈತರು ವೈಜ್ಞಾನಿಕವಾಗಿ ಬೆಳೆ ತೆಗೆಯಬೇಕು ಎಂದು ಕುಮಾರಸ್ವಾಮಿ ಅವರು ನುಡಿದರು.

ಜಿಲ್ಲಾಧಿಕಾರಿ ಕುಮಾರ್, ಸಿಇಒ ನಂದಿನಿ, ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ, ಮಾಜಿ ಸಚಿವ ಪುಟ್ಟರಾಜು, ಶಾಸಕ ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ವಿವೇಕಾನಂದ, ಮಂಜೇಗೌಡ, ಮಾಜಿ ಶಾಸಕ ಡಾ. ಕೆ.ಅನ್ನದಾನಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Key words: PM Kisan Samman, 9th installment, Release, Union Minister HDK