ಶಾರಿಕ್ ವಿದೇಶಿ ಉಗ್ರ ಸಂಘಟನೆ ಪ್ರಭಾವಕ್ಕೆ ಒಳಗಾಗಿದ್ದ: ಸದ್ಯ ಒಂದು ದೊಡ್ಡ ಅನಾಹುತ ತಪ್ಪಿದೆ- ಎಡಿಜಿಪಿ ಅಲೋಕ್ ಕುಮಾರ್.

ಮಂಗಳೂರು,ನವೆಂಬರ್,21,2022(www.justkannada.in): ಮಂಗಳೂರು  ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟದ ರೂವಾರಿಯೇ ಶಾರಿಕ್. ಶಾರಿಕ್ ವಿದೇಶಿ ಉಗ್ರ ಸಂಘಟನೆ ಪ್ರಭಾವಕ್ಕೆ ಒಳಗಾಗಿದ್ದ. ಸದ್ಯ ಒಂದು ದೊಡ್ಡ ಅನಾಹುತ ತಪ್ಪಿದಂತಾಗಿದೆ ಎಂದು ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.

ಪ್ರಕರಣ ಕುರಿತು ಮಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ನವೆಂಬರ್ 19ರಂದು ಸಂಜೆ 4.40ರಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಪ್ರಯಾಣಿಕ, ಆಟೋ ಚಾಲಕನಿಗೆ ಗಾಯಗಳಾಗಿವೆ. ತಕ್ಷಣ ಪೊಲೀಸ್ ಅಧಿಕಾರಿಗಳಿಂದ ಗುರುತು ಪತ್ತೆ ಮಾಡುವ ಕೆಲಸ ನಡೆದಿದೆ. ಆರೋಪಿ ಶಾರಿಕ್ ಗೆ  ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.  ಶಾರಿಕ್ ಸಂಬಂಧಿಕರು ಆಗಮಿಸಿ ಗುರುತು ಪತ್ತೆ ಹಚ್ಚಿದ್ದಾರೆ.  ಮೈಸೂರಿನಲ್ಲಿ ಮೋಹನ್ ಕುಮಾರ ಮನೆಯಲ್ಲಿ ಆರೋಪಿ ಶಾರಿಕ್ ವಾಸವಾಗಿದ್ದ.  ಶಾರಿಕ್ ವಿಚಾರ ಮೋಹನ್ ಗೂ ಗೊತ್ತಿಲ್ಲ. ಶಂಕಿತ ವಾಸವಿದ್ದ ಮನೆಯಲ್ಲಿ ಹಲವು ಸ್ಪೋಟಕ ವಸ್ತು ಸಿಕ್ಕಿವೆ. ಆರೋಪಿ ಮೈಸೂರಿನಿಂದ ಮಂಗಳೂರಿಗೆ ಬಂದಿದ್ದಾನೆ. ಮತ್ತೊಂದು ನಕಲಿ ಐಡಿ ಪಡೆದು ಕೊಯಮುತ್ತೂರಿನಲ್ಲೂ ಶಾರಿಕ್ ವಾಶವಿದ್ದ ಎಂದು ಮಾಹಿತಿ ನೀಡಿದರು.

ಆರೋಪಿ ಬಳಿ ಪ್ರೇಮರಾಜ್​ ಎಂಬ ಹೆಸರಿನ ಐಡಿ ಸಿಕ್ಕಿತ್ತು. ನಾನೇ ಪ್ರೇಮರಾಜ್​ ಎಂಬಾತನ ಜೊತೆ ಮಾತನಾಡಿದ್ದೇನೆ. ತಕ್ಷಣ ಪೊಲೀಸರಿಗೆ ತಿಳಿಸಲು ಪ್ರೇಮರಾಜ್​ಗೆ ಹೇಳಿದ್ದೆ. ಶಾರಿಕ್​ ಸಂಬಂಧಿಕರು ಬಂದು ಗುರುತು ಪತ್ತೆ ಹಚ್ಚಿದ್ದಾರೆ.

ಫಂಡಿಂಗ್ ಮಾಡುತ್ತಿದ್ದವರ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿದ್ದೇವೆ.  ಪ್ರಕರಣ ತನಿಖೆಗೆ ವಿಶೇಷ ತಂಡವನ್ನ ರಚಿಸಿದ್ದೇವೆ.   ಪ್ರಕರಣ ಸಂಬಂಧ ಈಗಾಗಲೇ ಮೂವರ ಬಂಧನವಾಗಿದೆ.  ಮೈಸೂರು ಮೂಲದ ಇಬ್ಬರು,  ಮಂಗಳೂರು ಮೂಲದ  ಓರ್ವ ವಶಕ್ಕೆ ಪಡೆಯಲಾಗಿದೆ.  ಶಾರಿಕ್ ವಿದೇಶಿ ಉಗ್ರ ಸಂಘಟನೆ ಪ್ರಭಾವಕ್ಕೆ ಒಳಗಾಗಿದ್ದ .

ಶಿವಮೊಗ್ಗದ  ಅಬ್ದುಲ್ ಮತೀನ್ ಸಹ ಪ್ರಮುಖ ಆರೋಪಿ. ಮತಿನ್ ಪತ್ತೆಗೆ ಎನ್ ಐಎ 2 ಲಕ್ಷ ಬಹುಮಾನ ಘೋಷಿಸಿದೆ. ಮಂಗಳೂರಿನಲ್ಲಿ ಒಂದು ದೊಡ್ಡ ಅನಾಹುತ ತಪ್ಪಿದೆ.  ಬೇರೆ ಕಡೆ ಬಾಂಬ್ ಸ್ಪೋಟವಾಗಿದ್ದರೇ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿತ್ತು.ಕರಾವಳಿಯಲ್ಲಿ ಶಾಂತಿ ಕಾಪಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಲೋಕ್ ಕುಮಾರ್ ತಿಳಿಸಿದರು.

Key words: Shariq – influence – foreign -terrorist –organization-mangalore-ADGP- Alok Kumar.