ಬೆಂಗಳೂರು,ಮಾರ್ಚ್,17,2026 (www.justkannada.in): ಕರ್ನಾಟಕ ವಿಧಾನಸಭೆಯ 16ನೇ ಅವಧಿಯ (2023–2026) 1ರಿಂದ 9ನೇ ಅಧಿವೇಶನದವರೆಗೆ ಹಲವು ಇಲಾಖೆಗಳ ಪ್ರಶ್ನೆಗಳು ಇನ್ನೂ ಉತ್ತರವಾಗದೇ ಬಾಕಿಯಿರುವುದು ಬೆಳಕಿಗೆ ಬಂದಿದೆ.
ದಿನಾಂಕ 16.03.2026ರಂದು( ನಿನ್ನೆ) ನಡೆದ ಸದನ ಸಭೆಯಲ್ಲಿ ಕೇಳಲಾದ ಒಟ್ಟು 245 ಪ್ರಶ್ನೆಗಳ ಪೈಕಿ ಕೇವಲ 90 ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಿರುವುದು ಗಂಭೀರ ವಿಷಯವಾಗಿ ಹೊರಹೊಮ್ಮಿದೆ. ಉಳಿದ ಪ್ರಶ್ನೆಗಳಿಗೆ ಇಲಾಖೆಗಳು ಇನ್ನೂ ಉತ್ತರ ಕಳುಹಿಸದೇ ಇರುವುದರಿಂದ ಶಾಸಕರಿಗೆ ಸದನದಲ್ಲಿ ಸಮರ್ಪಕ ಚರ್ಚೆ ನಡೆಸಲು ಅಡಚಣೆ ಉಂಟಾಗಿದೆ.
ಈ ಬೆಳವಣಿಗೆ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡುವುದರ ಜೊತೆಗೆ ಶಾಸಕರ ಹಕ್ಕು ಹಾಗೂ ಸದನದ ಘನತೆಗೆ ಧಕ್ಕೆಯಾಗಿದೆ.
ಇದರ ಕುರಿತು ಸಭೆಯಲ್ಲಿ ಸ್ಪೀಕರ್ ಯು.ಟಿ ಖಾದರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಬಾಕಿ ಇರುವ ಪ್ರಶ್ನೆಗಳ ಕುರಿತು ತಕ್ಷಣ ಸ್ಪಷ್ಟನೆ ನೀಡುವಂತೆ ಇಲಾಖಾ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ಹೀಗೇ, ಉತ್ತರ ಕಳುಹಿಸದ ಸಂದರ್ಭಗಳಲ್ಲಿ ಸಂಬಂಧಪಟ್ಟ ಶಾಸಕರಿಗೆ ಪ್ರತ್ಯೇಕವಾಗಿ ಪತ್ರ ಬರೆದು, ಮಾಹಿತಿ ಒದಗಿಸುವ ನಿಗದಿತ ಸಮಯ ತಿಳಿಸುವಂತೆ ನಿರ್ದೇಶಿಸಲಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಎಲ್ಲಾ ಸಚಿವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
Key words: Unanswered, questions, Assembly, Speaker, government







