Sunday, August 16, 2026

BDA Apartments

Home Front Page ಸ್ಪೀಕರ್ ಮುಂದೆ ವಿಚಾರಣೆಗೆ ಗೈರಾದ ಇಬ್ಬರು ಅತೃಪ್ತ ಶಾಸಕರು: ಬೇರೆ ದಿನ ಸಮಯ ನಿಗದಿಗೆ ಮನವಿ…

ಸ್ಪೀಕರ್ ಮುಂದೆ ವಿಚಾರಣೆಗೆ ಗೈರಾದ ಇಬ್ಬರು ಅತೃಪ್ತ ಶಾಸಕರು: ಬೇರೆ ದಿನ ಸಮಯ ನಿಗದಿಗೆ ಮನವಿ…

ಬೆಂಗಳೂರು,ಜು,15,2019(www.justkannada.in):  ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಇಬ್ಬರು ಅತೃಪ್ತ ಶಾಸಕರು ಇಂದು ಸ್ಪೀಕರ್ ಮುಂದೆ  ವಿಚಾರಣೆಗೆ ಗೈರಾಗಿದ್ದಾರೆ.

ಕಾಂಗ್ರೆಸ್ ಶಾಸಕ ರಾಮಲಿಂಗರೆಡ್ಡಿ ಮತ್ತು ಜೆಡಿಎಸ್ ಶಾಸಕ ಗೋಪಾಲಯ್ಯ ಸ್ಪೀಕರ್ ರಮೇಶ್ ಕುಮಾರ್ ಎದುರು ವಿಚಾರಣೆಗೆ ಗೈರಾಗಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ವಿಚಾರಣೆಗೆ ಇಂದು ಇಬ್ಬರು ಶಾಸಕರಿಗೆ ಸಮಯ ನಿಗದಿ ಮಾಡಲಾಗಿತ್ತು.

ಈ ನಡುವೆ ವೈಯಕ್ತಿಕ ಕಾರಣಗಳಿಂದ ವಿಚಾರಣೆಗೆ ಹಾಜರಾಗುತ್ತಿಲ್ಲ. ಬೇರೆ ದಿನಾಂಕ ನಿಗದಿ ಮಾಡುವಂತೆ ಕರೆ ಮಾಡಿ ಶಾಸಕ ರಾಮಲಿಂಗರೆಡ್ಡಿ ಅವರು  ಸ್ಪೀಕರ್ ಗೆ ಮನವಿ ಮಾಡಿದ್ದಾರೆ. ಹಾಗೆಯೇ ಜೆಡಿಎಸ್ ಅತೃಪ್ತ ಶಾಸಕ ಗೋಪಾಲಯ್ಯ ಕೂಡ ಕಾರಣಾಂತರಗಳಿಂದ ವಿಚಾರಣೆಗೆ ಆಗಮಿಸಲು ಆಗಲಿಲ್ಲ. ಹೀಗಾಗಿ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ರಾಮಲಿಂಗರೆಡ್ಡಿ ಅವರು ಕಾಲಾವಕಾಶಕ್ಕೆ ಮನವಿ ಮಾಡಿದ ಹಿನ್ನೆಲೆ ನಾಳೆ ಮತ್ತು ನಾಡಿದ್ದು ಸಮಯ ನೋಡಿಕೊಂಡು ವಿಚಾರಣೆಗೆ ಹಾಜರಾಗಿ ಎಂದು ಸ್ಪೀಕರ್ ರಮೇಶ್ ಕುಮಾರ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ನಾಳೆ ಅತೃಪ್ತ ಶಾಸಕರ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನಡೆಯಲಿದೆ. ಹಾಗೆಯೇ ಗುರುವಾರ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ಮತಯಾಚನೆಗೆ ಸಮಯ ನಿಗದಿಯಾಗಿದೆ. ಈ ನಡುವೆ ನಿನ್ನೆ ಕಾಂಗ್ರೆಸ್ ನಾಯಕರು ರಾಮಲಿಂಗರೆಡ್ಡಿ ಅವರನ್ನ ಮನವೊಲಿಸುವ ಯತ್ನ ನಡಸಿದ್ದು ಇಂದು ತಮ್ಮ ಮುಂದಿನ ನಿರ್ಧಾರ ತಿಳಿಸುವುದಾಗಿ ರಾಮಲಿಂಗರೆಡ್ಡಿ ಅವರು ಹೇಳಿದ್ದರು.

Key words: Two –MLA-  absent -hearing -Speaker