ರಸ್ತೆ ಅಗಲೀಕರಣ ವೇಳೆ ಹೈಡ್ರಾಮಾ: ಶಾಸಕಿ ಮೇಲೆ ಕಲ್ಲು ತೂರಲು ಯತ್ನಿಸಿದ ವ್ಯಕ್ತಿ ಪೊಲೀಸರ ವಶಕ್ಕೆ.

ಕೋಲಾರ ಅಕ್ಟೋಬರ್,14,2023(www.justkannada.in):  ರಸ್ತೆ ಅಗಲೀಕರಣ ವೇಳೆ ಹೈ ಡ್ರಾಮಾ ನಡೆದಿದ್ದು, ಕೆಜಿಎಫ್  ಶಾಸಕಿ ರೂಪಕಲಾ  ಮತ್ತು ಜೆಸಿಬಿ ಮೇಲೆ ವ್ಯಕ್ತಿಯೋಬ್ಬ ಕಲ್ಲು ತೂರಲು ಯತ್ನಿಸಿದ ಘಟನೆ ನಡೆದಿದೆ.

ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ಈ ಘಟನೆ ನಡೆದಿದೆ. ಪೊಲೀಸರ  ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಸದ್ಯ ಪೊಲೀಸರು ಕಲ್ಲು ತೂರಲು ಮುಂದಾದ ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದಾರೆ.

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬೇತಮಂಗಲದಿಂದ ವಿ. ಕೋಟೆ ತೆರಳುವ ಹಳೆ ಮದ್ರಾಸ್ ರಸ್ತೆ ಕಾಮಗಾರಿ ಪುನಃ ಆರಂಭವಾಗಿದ್ದು,  ಹೀಗಾಗಿ ಇಂದು ಶಾಸಕಿ ರೂಪಕಲಾ ನೇತೃತ್ವದಲ್ಲಿ ಅಧಿಕಾರಿಗಳು ರಸ್ತೆ ಅಗಲೀಕರಣಕ್ಕೆ   ತೆರವು ಕಾರ್ಯ ನಡೆಸುತ್ತಿದ್ದರು.

ಈ ವೇಳೆ ವ್ಯಕ್ತಿಯೋರ್ವ  ಶಾಸಕಿ ರೂಪಕಲಾ ಹಾಗೂ ಜೆಸಿಬಿ ಮೇಲೆ ಕಲ್ಲು ತೂರಲು ಮುಂದಾಗಿದ್ದನು. ಕೂಡಲೆ ಬೇತಮಂಗಲ‌ ಪೊಲೀಸರು ಆತನನ್ನು ತಡೆದು ವಶಕ್ಕೆ ಪಡೆದುಕೊಂಡಿದ್ದಾರೆ. ಕಲ್ಲು ತೂರಲು ಯತ್ನಿಸಿದ ಬಳಿಕ ವ್ಯಕ್ತಿ ಆತ್ಮಹತ್ಯೆಗೂ ಯತ್ನಿಸಿದ್ದನು ಎನ್ನಲಾಗಿದೆ.  ಸ್ಥಳದಲ್ಲಿ ಬಿಗಿ‌ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Key words: throw- stones -KGF-MLA- person-police custody