“ಸ್ವಾಮೀಜಿಗಳಿಗೆ ಮಠದಲ್ಲಿಯೇ ಮಾಡಲು ಸಾಕಷ್ಟು ಕೆಲಸಗಳಿವೆ. ಮತ್ಯಾಕೆ ಬೀದಿಗೆ ಬರುತ್ತಾರೋ?” : ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಬೇಸರ

ಹುಬ್ಬಳ್ಳಿ,ಫೆಬ್ರವರಿ,28,2021(www.justkannada.in) : ಸ್ವಾಮೀಜಿಗಳಿಗೆ ಮಠದಲ್ಲಿಯೇ ಮಾಡಲು ಸಾಕಷ್ಟು ಕೆಲಸಗಳಿವೆ. ಮತ್ಯಾಕೆ ಬೀದಿಗೆ ಬರುತ್ತಾರೋ? ಮಠದಲ್ಲಿ ಮಾಡಲು ಕೆಲಸ ಇಲ್ಲದ್ದಕ್ಕೆ ಬೀದಿಗೆ ಬರುತ್ತಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಇತ್ತೀಚಿನ ಕೆಲವು ಘಟನೆಗಳಿಂದಾಗಿ ಸ್ವಾಮೀಜಿಗಳೆಂದರೆ ಹೇಸಿಗೆ ಅನ್ನಿಸುವ ಸ್ಥಿತಿಗೆ ಬಂದಿದ್ದೇವೆ ಎಂದು ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಬೇಸರವ್ಯಕ್ತಪಡಿಸಿದ್ದಾರೆ.

jk

ನಮ್ಮ, ನಮ್ಮದೇ ಜಾತಿ ಕಟ್ಟಿಕೊಂಡು ಸಂಕುಚಿತರಾಗುತ್ತಿದ್ದೇವೆ

ಬೈರಿದೇವರಕೊಪ್ಪದಲ್ಲಿ ಭಾನುವಾರ ನಡೆದ ಸಹೃದಯಿ ಮಠಾಧಿಪತಿಗಳ ಒಕ್ಕೂಟದ ಭಕ್ತ ಸಮಾವೇಶದ ಸಮಾರೋಪ ಭಾಷಣ ಮಾಡಿದ ಅವರು, ಜಾತಿಯನ್ನು ತೊಡೆದು ಹಾಕಬೇಕೆಂದು ಬಸವಣ್ಣನವರು ಎಷ್ಟು ಪ್ರಯತ್ನ ಪಟ್ಟಿದ್ದರೋ ಅದೆಲ್ಲವನ್ನೂ ನಾವು ಉಪೇಕ್ಷಿಸಿ ನಮ್ಮ ನಮ್ಮದೇ ಜಾತಿ ಕಟ್ಟಿಕೊಂಡು ಸಂಕುಚಿತರಾಗುತ್ತಿದ್ದೇವೆ ಎಂದು ವಿಷಾದಿಸಿದರು.

ಬಹಳಷ್ಟು ಮಠಾಧೀಶರು ಮಠದ ಆಸ್ತಿ ತಮ್ಮದೇ ಎಂದುಕೊಂಡಿದ್ದಾರೆ

ಕಾಲ‌ಕಾಲಕ್ಕೆ ನಾವು ಬದಲಾಗದೇ ಇದ್ದರೆ ನಮ್ಮ ಧರ್ಮ, ನಾವೆಲ್ಲರೂ ಉಳಿಯುವುದಿಲ್ಲ. ಮಠಾಧಿಪತಿಗಳು ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಹಳಷ್ಟು ಮಠಾಧೀಶರು ಮಠದ ಆಸ್ತಿ ತಮ್ಮದೇ ಎಂದುಕೊಂಡಿದ್ದಾರೆ. ಆದರೆ, ಅದು ಭಕ್ತರದು, ಸಮಾಜದ್ದು. ರಾಜ್ಯದಲ್ಲಿ ಸುಮಾರು 18 ಸಾವಿರ ಮಠಗಳಿದ್ದವು, ಆದರೆ ಈಗ 1800 ಮಠಗಳಿವೆ. ಮಠಗಳಿಗೆಲ್ಲ ನೂರಾರು ಎಕರೆ ಭೂಮಿ ಇತ್ತು, ಅದನ್ನೆಲ್ಲ ಮಠಾಧಿಪತಿಗಳೇ ನುಂಗಿದರು. ಅದಕ್ಕೆ, ಕಾರಣ ಭಕ್ತರು ಅವರನ್ನು ಪ್ರಶ್ನೆ ಮಾಡದೇ ಇರುವುದು ಎಂದು ಎಚ್ಚರಿಸಿದರು.

ಕೆಲವು ಮಠಾಧೀಶರಿಂದ ಪ್ರತಿವರ್ಷ 2-3 ಕೋಟಿ ರೂ.ಸಾಲ

ಕೆಲವು ಮಠಾಧೀಶರು ಪ್ರತಿವರ್ಷ 2-3 ಕೋಟಿ ರೂ. ಸಾಲ ಮಾಡುತ್ತಾರೆ. ಅದನ್ನು ಭಕ್ತರು ತೀರಿಸಬೇಕು. ಇದೆಂಥ ಹುಚ್ಚು?, ಕೆಲವು ಮಠಗಳಲ್ಲಿ ತಮ್ಮದೇ ಬಂಧು, ಬಾಂಧವರ ಆಶ್ರಯ ತಾಣ ಮಾಡಿಕೊಂಡಿದ್ದಾರೆ. ಹೀಗಾಗಿ, ಮಠಗಳ ಆಸ್ತಿ, ಹಣ ಉಳಿಸಲು ಭಕ್ತರು ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು.

ಉತ್ತರಾಧಿಕಾರಿ ಆಯ್ಕೆಗೆ ವಿದ್ಯೆ, ವಿನಯ, ಯೋಗ್ಯತೆಯೇ ಮಾನದಂಡ

ಯಾವುದೇ ಮಠಗಳಿಗೆ ಉತ್ತರಾಧಿಕಾರಿ ನೇಮಿಸುವಾಗ ಜಾತಿ ಮುಖ್ಯವಾಗಬಾರದು. ವಿದ್ಯೆ, ವಿನಯ, ಯೋಗ್ಯತೆಯೇ ಮಾನದಂಡವಾಗಬೇಕು. ಬಸವಣ್ಣನವರ ಆಶಯ ಪಾಲನೆಯಾಗಬೇಕು. ಆ ನಿಟ್ಟಿನಲ್ಲಿ ರಾಜ್ಯದ ಐದು ಜಿಲ್ಲೆಗಳಲ್ಲಿ ಮಹಿಳಾ ಜಗದ್ಗುರು ಪೀಠ ಸ್ಥಾಪನೆ ಮಾಡಲು ಒಕ್ಕೂಟ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.

key words : Swamijis-Right-monastery-Enough-work-Mutage-street-come-Canary-Monastery-Kadasiddheshwar Swamiji