‘ಗ್ಯಾರಂಟಿ’ ಯೋಜನೆಗಳ ಪರಿಣಾಮಗಳ ಕುರಿತು ನೊಬೆಲ್ ಪ್ರಶಸ್ತಿ ಪುರಸ್ಕೃತರಿಂದ ಅಧ್ಯಯನ

ಬೆಂಗಳೂರು, ಆಗಸ್ಟ್ 31, 2023 (www.justkannada.in): ರಾಜ್ಯದಲ್ಲಿ ಜಾರಿಯಾಗಿರುವ ಐದು ಗ್ಯಾರಂಟಿ ಯೋಜನೆಗಳ ಪರಿಣಾಮಗಳನ್ನು ಅಧ್ಯಯನ ನಡೆಸಲು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಮತ್ತು ಎಸ್ತರ್‌ ಡಫ್ಲೊ ಸಹ ಸ್ಥಾಪಕರಾಗಿರುವ ಸಂಶೋಧನಾ ಸಂಸ್ಥೆ ಪರಿಶೀಲನೆ ನಡೆಸಿದೆ.

ಹೌದು. ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಪರಿಣಾಮಗಳನ್ನು ಅಧ್ಯಯನ ನಡೆಸಲು ಸಂಶೋಧನಾ ಸಂಸ್ಥೆ ಪರಿಶೀಲನೆ ನಡೆಸಿದೆ. ಈ ಕುರಿತು  ಹಣಕಾಸು ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸಂಬಂಧ ರಾಜ್ಯ ಸರ್ಕಾರ ಅಭಿಜಿತ್ ಬ್ಯಾನರ್ಜಿ ಮತ್ತು ಡಫ್ಲೊ ಸೇರಿ ಆರಂಭಿಸಿರುವ ಅಬ್ದುಲ್‌ ಲತೀಫ್‌ ಜಮೀಲ್ ಪವರ್ಟಿ ಆಯಕ್ಷನ್‌ ಲ್ಯಾಬ್‌ (ಜೆ-ಪಾಲ್) ಸಂಸ್ಥೆಯನ್ನು ಸಂಪರ್ಕಿಸಿದ್ದು, ಇದಕ್ಕೆ ಸಂಸ್ಥೆಯು ಒಪ್ಪಿಗೆ ನೀಡಿದೆ.

ಇನ್ನು ಕೆಲವೇ ತಿಂಗಳಲ್ಲಿ ಉದ್ದೇಶಿತ ಅಧ್ಯಯನ ಆರಂಭವಾಗಲಿದೆ. ಅಂದಹಾಗೆ ಅಭಿಜಿತ್ ಬ್ಯಾನರ್ಜಿ 2019 ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷಕ್ಕೆ ‘ನ್ಯಾಯ್’ ಯೋಜನೆ ರೂಪಿಸಿದ್ದರು. ಇದರಡಿ ಕಾಂಗ್ರೆಸ್ ಪ್ರತಿ ಬಡ ಕುಟುಂಬಗಳಿಗೆ 6,000 ರೂ. ನೀಡುವ ಆಶ್ವಾಸನೆ ಪ್ರಕಟಿಸಿತ್ತು.