ಧಾರವಾಡ, ಏಪ್ರಿಲ್,7,2026 (www.justkannada.in): ರಾಜ್ಯದಲ್ಲಿ ಒಳಮೀಸಲಾತಿ ಗೊಂದಲದಿಂದಾಗಿ ಸ್ಥಗಿತಗೊಂಡಿರುವ ನೇಮಕಾತಿಗಳನ್ನ ಆರಂಭಿಸಲು ಮೀನಾಮೇಷ ಎಣಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಉದ್ಯೋಗಾಕಾಂಕ್ಷಿಗಳು ಈ ಬಾರಿ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಮುಂದಾಗಿದ್ದು ಆದರೆ ಪೊಲೀಸರು ಇದಕ್ಕೆ ಅನುಮತಿ ನಿರಾಕರಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ರಾಜ್ಯದಲ್ಲಿ ಸರಿಯಾಗಿ ನೇಮಕಾತಿಗಳನ್ನ ಮಾಡದ ಹಿನ್ನೆಲೆ ಉದ್ಯೋಗಾಕಾಂಕ್ಷಿಗಳ ಭವಿಷ್ಯ ಅತಂತ್ರವಾಗಿದ್ದು ಈ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ಇತ್ತೀಚೆಗೆ ಧಾರವಾಡದಲ್ಲಿ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆ ವತಿಯಿಂದ ನಡೆದಿದ್ದ ಬೃಹತ್ ಹೋರಾಟಕ್ಕೆ ಬೆದರಿದ್ದ ಕಾಂಗ್ರೆಸ್ ಸರ್ಕಾರ ಒಂದು ತಿಂಗಳೊಳಗೆ 56 ಸಾವಿರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸುವ ಭರವಸೆ ನೀಡಿತ್ತು.
ಆದರೆ ಸರ್ಕಾರ ನೀಡಿರುವ ಭರವಸೆ ಹುಸಿಯಾಗಿದ್ದು, ಒಂದುವರೆ ತಿಂಗಳು ಕಳೆದರೂ ಯಾವುದೇ ಅಧಿಸೂಚನೆ ಹೊರಡಿಸದ ಹಿನ್ನೆಲೆಯಲ್ಲಿ ಮತ್ತೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಉದ್ಯೋಗಾಕಾಂಕ್ಷಿಗಳು ಮುಂದಾಗಿದ್ದಾರೆ. ಇದೀಗ ನಾಳೆಯಿಂದ ಧಾರವಾಡದ ಜಿಲ್ಲಾಧಿಕಾರಿ ಕಚೇರಿಯ ಬಳಿ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆಯು ಅನಿರ್ಧಿಷ್ಟಾವಧಿ ಹೋರಾಟಕ್ಕೆ ಸಿದ್ದತೆ ನಡೆಸಿದೆ ಎನ್ನಲಾಗಿದೆ.
ಆದರೆ ಈ ಹೋರಾಟಕ್ಕೆ ಧಾರವಾಡ ಉಪನಗರ ಠಾಣಾ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದಾರೆ . ಪೊಲೀಸರು ಒಟ್ಟು 19 ಪ್ರಶ್ನೆಗಳನ್ನ ಕೇಳಿದ್ದರು. ಇದಕ್ಕೆ ಅಕ್ಸಾ ಸಂಘಟನೆಯು ಲಿಖಿತ ರೂಪದಲ್ಲಿ ಉತ್ತರ ನೀಡಿತ್ತು. ಆದರೆ ಸಂಘಟನೆ ಉತ್ತರಗಳಲ್ಲಿ ಸ್ಪಷ್ಟತೆ ಇಲ್ಲ ಎನ್ನುವ ಕಾರಣಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅನುಮತಿ ನಿರಾಕರಣೆ ಹಿನ್ನೆಲೆ ಸಂಘಟನೆಯು ಧಾರವಾಡ ಹೈಕೋರ್ಟ್ ಮೊರೆ ಹೋಗಲು ನಿರ್ಧಾರ ಮಾಡಿದ್ದು ನಾಳೆ ಅರ್ಜಿ ಸಲ್ಲಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
Key words: indefinite strike, demanding, recruitment, Congress, Government







