Monday, August 31, 2026

BDA Apartments

Home Front Page SIR ಅರ್ಜಿ ಭರ್ತಿ ಭಯಬೇಡ : ಸುನಿಲ್ ಕುಮಾರ್ ಡಿ.ಬಿ.

SIR ಅರ್ಜಿ ಭರ್ತಿ ಭಯಬೇಡ : ಸುನಿಲ್ ಕುಮಾರ್ ಡಿ.ಬಿ.

ಮೈಸೂರು,ಜುಲೈ,13,2026 (www.justkannada.in): ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅರ್ಜಿ ಭರ್ತಿ ಮಾಡಲು ಭಯಬೇಡ, ಜಾಗೃತಿಯಿರಲಿ ಎಂದು ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಕುಮಾರ್.ಡಿ.ಬಿ ಅವರು ತಿಳಿಸಿದರು.

ಸೋಮವಾರ ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಸ್ವೀಪ್ ಸಮಿತಿ  ವತಿಯಿಂದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಸ್ವ-ಸಹಾಯ ಸಂಘದ ಸದಸ್ಯರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(SIR) ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಸುನಿಲ್ ಕುಮಾರ್.ಡಿ.ಬಿ ಅವರು ಮಾತನಾಡಿದರು.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(SIR) ಅರ್ಜಿ ಭರ್ತಿ ಸಂಬಂಧ  ಅನೇಕರಲ್ಲಿ ಗೊಂದಲವುಂಟಾಗಿ ಭಯಪಟ್ಟಿದ್ದಾರೆ. ಆ ಭಯವನ್ನು ಹೋಗಲಾಡಿಸುವ ಉದ್ದೇಶದಿಂದ ಸ್ವ-ಸಹಾಯ ಸಂಘದ ಮಹಿಳೆಯರಿಗೆ ವಿಶೇಷವಾಗಿ ಈ ದಿನ ತರಬೇತಿ ನೀಡಲಾಗಿದೆ. ಮಹಿಳೆಯರು ಮಾಹಿತಿ ಪಡೆದುಕೊಂಡರೆ ಇಡೀ ಕುಟುಂಬವೇ ಮತದಾರರ ಪಟ್ಟಿಯಿಂದ ಹೊರಗುಳಿಯುವುದರಿಂದ ತಪ್ಪುತ್ತದೆ ಎಂದರು.

ತಹಶೀಲ್ದಾರ್ ನಿಸರ್ಗ ಪ್ರಿಯ ಅವರು ಮಾತನಾಡಿ, ಎಸ್ ಐ ಆರ್ ಸಂಬಂಧಿಸಿದಂತೆ ಸಂಪೂರ್ಣವಾಗಿ ತಿಳಿದುಕೊಳ್ಳುವ ಮೂಲಕ ನಿಮ್ಮ ಸ್ವ-ಸಹಾಯ ಸಂಘದ ಸದಸ್ಯರಿಗೂ ಹಾಗೂ ನಿಮ್ಮ ಸುತ್ತಮುತ್ತಲಿನ ಜನರಿಗೂ ಈ ಕುರಿತು ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.

ಬೆಟ್ಟದಪುರ ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕಶಾಕೀರ್ ಅವರು ಮಾತನಾಡಿ, ಮೃತಪಟ್ಟವರು, ಶಾಶ್ವತವಾಗಿ ಬೇರೆ ಕಡೆ ನೆಲೆಸಿದವರು, ಎರಡು ಕಡೆಗಳಲ್ಲಿ ಮತದಾನ ಹಕ್ಕು ಹೊಂದಿದವರನ್ನು ಮಾತ್ರವೇ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುವುದು ಎಂದರು.

ಮತದಾನ ಎಲ್ಲರ ಹಕ್ಕಾಗಿದ್ದು, SIR ಅರ್ಜಿ ಭರ್ತಿ ಮಾಡದೇ ಹೋದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಕೈಬಿಡಲಾಗುವುದು. ಹೀಗಾಗಿ, ಪ್ರತಿಯೊಬ್ಬರು ಎಸ್ ಐ ಆರ್ ಅರ್ಜಿಯನ್ನು ದಾಖಲೆಗಳನ್ನು ಪರಿಶೀಲಿಸಿ ಭರ್ತಿ ಮಾಡುವುದು ಕಡ್ಡಾಯ ಎಂದು ಸಲಹೆ ನೀಡಿದರು.

ಜಾಥಾದಲ್ಲಿ NRLM ವಲಯ ಮೇಲ್ವಿಚಾರಕರಾದ ರೋಸಿ, ಐಇಸಿ ಸಂಯೋಜಕ ರವಿಕುಮಾರ್.ಡಿ, 34 ಗ್ರಾಮಪಂಚಾಯಿತಿ ಎಂಬಿಕೆ, ಎಲ್ ಸಿ ಆರ್ ಪಿ, ಕೃಷಿ ಸಖಿ, ಪಶು ಸಖಿ ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಿಂದ ನಗರದ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದವರೆಗೆ SIR ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ವಿವಿಧ ಘೋಷವಾಕ್ಯಗಳಿಂದ ಕೂಡಿದ ಪ್ಲೇ ಕಾರ್ಡ್ ಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

Key words: SIR, Don’t, afraid, fill, application, Sunil Kumar D.B, Mysore